ಸಾರಾಂಶ
ಬೆಂಗಳೂರು : ನಿಗದಿತ ಅವಧಿಯಲ್ಲಿ ಅಪಾರ್ಟ್ಮೆಂಟ್ ನಿರ್ಮಾಣ ಯೋಜನೆಯನ್ನು ಪೂರ್ಣಗೊಳಿಸದೆ ಫ್ಲ್ಯಾಟ್ ಹಸ್ತಾಂತರಿಸಲು ಸುಮಾರು 8 ವರ್ಷ ವಿಳಂಬ ಮಾಡಿದ ಮಂತ್ರಿ ಡೆವಲಪರ್ಸ್ಗೆ ಕರ್ನಾಟಕ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರ (ಕೆ-ರೇರಾ) ಪರಿಹಾರವಾಗಿ ಮನೆ ಮಾಲೀಕರಿಗೆ 48.41 ಲಕ್ಷ ರು. ನೀಡಬೇಕು ಎಂದು ಮಹತ್ವದ ಆದೇಶ ಹೊರಡಿಸಿದೆ.
ಶ್ರೇಯಾಂಶು ಪವಸ್ ಎಂಬುವವರು ಹೆಣ್ಣೂರಿನಲ್ಲಿ ನಿರ್ಮಾಣವಾಗುತ್ತಿರುವ ಮಂತ್ರಿ ವೆಬ್ಸಿಟಿಯಲ್ಲಿ 2013ರಲ್ಲಿ ₹74.94 ಲಕ್ಷದ ಫ್ಲ್ಯಾಟ್ ಬುಕ್ ಮಾಡಿದ್ದರು. ಹಂತ ಹಂತವಾಗಿ ₹63 ಲಕ್ಷ ಪಾವತಿ ಮಾಡಿದ್ದರು. 2016ಕ್ಕೆ ಯೋಜನೆ ಪೂರ್ಣಗೊಳಿಸಿ ಫ್ಲ್ಯಾಟ್ ಹಸ್ತಾಂತರಿಸುವ ಭರವಸೆಯನ್ನು ಡೆವಲಪರ್ ನೀಡಿದ್ದರು. ಆದರೆ, ಹಲವು ವರ್ಷಗಳು ಕಳೆದರೂ ಫ್ಲ್ಯಾಟ್ ಹಸ್ತಾಂತರಿಸದ ಕಾರಣ ಶ್ರೇಯಾಂಶು ಅವರು ಕೆ-ರೆರಾಗೆ ದೂರು ನೀಡಿದ್ದರು.
ನಿಗದಿತ ಅವಧಿಯಲ್ಲಿ ಫ್ಲ್ಯಾಟ್ ಹಸ್ತಾಂತರಿಸದ ಕಾರಣ ತಿಂಗಳಿಗೆ ಸುಮಾರು ₹35 ಸಾವಿರ ಬಾಡಿಗೆ ಲೆಕ್ಕ ಹಾಕಿದರೆ ಲಕ್ಷಾಂತರ ರು. ನಷ್ಟವಾಗುತ್ತಿದೆ. ಅನೇಕ ನೆಪಗಳನ್ನು ಹೇಳಿದ ಡೆವಲಪರ್ 8 ವರ್ಷಗಳಿಂದ ಫ್ಲ್ಯಾಟ್ ಹಸ್ತಾಂತರ ಮಾಡಿಲ್ಲ ಎಂದು ಶ್ರೇಯಾಂಶು ವಾದಿಸಿದ್ದರು.
ನೋಟ್ ಬ್ಯಾನ್, ಕಾನೂನು ಹೋರಾಟಗಳು, ಕಚ್ಛಾ ವಸ್ತುಗಳ ಅಲಭ್ಯತೆ, ಕೋವಿಡ್-19, ಕಾರ್ಮಿಕರ ಅಲಭ್ಯತೆ ಸೇರಿದಂತೆ ವಿವಿಧ ಕಾರಣಗಳಿಂದ ಯೋಜನೆಯನ್ನು ಕಾಲಮಿತಿಯಲ್ಲಿ ಪೂರ್ಣಗೊಳಿಸಲು ಸಾಧ್ಯವಾಗಿರಲಿಲ್ಲ ಎಂದು ಡೆವಲಪರ್ ವಾದಿಸಿದ್ದರು. ಎರಡು ಕಡೆಯ ವಾದ ಆಲಿಸಿದ ಪ್ರಾಧಿಕಾರ, ಯೋಜನೆಯನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸದೇ ಮನೆ ಖರೀದಿದಾರನಿಗೆ ನಷ್ಟವಾಗಿರುವ ಕಾರಣ ಪರಿಹಾರವಾಗಿ ₹48.41 ಲಕ್ಷ ನೀಡಬೇಕು ಮತ್ತು ಈ ಆದೇಶ ಹೊರಡಿಸಿದ 60 ದಿನಗಳಲ್ಲಿ ಉಳಿದ ಕೆಲಸ ಮುಗಿಸಿ ಫ್ಲ್ಯಾಟ್ ಅನ್ನು ಹಸ್ತಾಂತರ ಮಾಡಬೇಕು ಎಂದು ಆದೇಶ ಹೊರಡಿಸಿದೆ.