ಸಾರಾಂಶ
ಮೈಸೂರು : ಪಶುಸಂಗೋಪನೆ ಮತ್ತು ರೇಷ್ಮೆ ಸಚಿವ ಕೆ.ವೆಂಕಟೇಶ್ ಅವರದ್ದು ಎನ್ನಲಾದ ಪಿರಿಯಾಪಟ್ಟಣ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಎಂಜನಿಯರ್ಗೆ ಆಕ್ಷೇಪಾರ್ಹ ಪದ ಬಳಸಿ ನಿಂದಿಸಿದ್ದಲ್ಲದೆ, ಧಮ್ಕಿ ಹಾಕಿದ ಆಡಿಯೋವೊಂದು ವೈರಲ್ ಆಗಿದೆ.
ತಾಪಂ ಕಾರ್ಯನಿರ್ವಾಹಕ ಎಂಜಿನಿಯರ್ಗೆ ‘ಯಾವೂರೋ ನಿಂದು.. ಯಾವ್ ಪಾರ್ಟಿ ನೀನು.. ಜೆಡಿಎಸ್ನವನ..’ ಎಂದು ಮಾತು ಆರಂಭಿಸಿ ಆಕ್ಷೇಪಾರ್ಹ ಪದಬಳಿಸಿ ಬೈದಿದ್ದಾರೆ. ಒಂದೆರಡು ನಿಮಿಷದ ಈ ಆಡಿಯೋ ತುಣುಕಿನಲ್ಲಿ ಎರಡ್ಮೂರು ಬಾರಿ ಆಕ್ಷೇಪಾರ್ಹ ಪದ ಬಳಿಸಿ ನಿಂದಿಸಲಾಗಿದೆ.ಸಚಿವರ ಸಹಾಯಕರೊಬ್ಬರು ಇಇಗೆ ಕರೆ ಮಾಡಿ ಸಾಹೇಬರು ಮಾತನಾಡುತ್ತಾರೆ. ಕೊಡುತ್ತೇನೆ ಮಾತನಾಡಿ ಎಂದು ಹೇಳಿದ್ದಾರೆ. ಫೋನ್ ತೆಗೆದುಕೊಂಡ ಸಚಿವರು, ಯಾವೂರೋ ನಿಂದು.. ಯಾವ್ ಪಾರ್ಟಿ ನೀನು.. ಜೆಡಿಎಸ್ ನವನ? ಎಂದು ಪ್ರಶ್ನಿಸುತ್ತಾರೆ. ಆ ಕಡೆಯಿಂದ ಇಇ ಮಾತನಾಡಿ, ಹಾಗೇನು ಇಲ್ಲ ಸಾರ್, ಯಾಕ್ ಸಾರ್ ಎನ್ನುತ್ತಾರೆ.
ಆಗ ಅವಾಚ್ಯ ಶಬ್ದ ಬಳಸಿರುವ ಸಚಿವರು, ‘ನನ್ ಮಗನೆ, ಅಲ್ಲಿನ ಜೆಡಿಎಸ್ನವರಿಗೆಲ್ಲ ಕೆಲ್ಸ ಕೊಟ್ಟಿದ್ದೀಯಾ? ನನ್ ಮಗನೆ ಇವತ್ತು ರಿಲೀವ್ ಮಾಡುಸ್ತಿನಿ ಬಾ ನನ್ ಹತ್ರ ಇವತ್ತು. ಮಗನೇ ನಾನು ಒಂದು ಕಾರ್ಯಕ್ರಮಕ್ಕೆ ಬರುತಾ ಇದೀನಿ. ಬಾ ಅಲ್ಲಿ ಸಿಗು ನನಗೆ’ ಎಂದು ಧಮ್ಕಿ ಹಾಕಿದ್ದಾರೆ.
ಸಿಎಂ ಸಿದ್ದರಾಮಯ್ಯ ಪರಮಾಪ್ತರಾದ ವೆಂಕಟೇಶ್ ಅವರು ಅಧಿಕಾರಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆನ್ನಲಾದ ಈ ಆಡಿಯೋಗೆ ಆಕ್ರೋಶ ವ್ಯಕ್ತವಾಗಿದೆ. ಪಿರಿಯಾಪಟ್ಟಣ ತಾಲೂಕು ಪಂಚಾಯತಿ ಇಇ ರಾಘವೇಂದ್ರಗೆ ಬೈದಿರುವ ಆಡಿಯೋ ಅದು ಎನ್ನಲಾಗಿದೆ.