ಚಿನ್ನಾಭರಣ ದುರುಪಯೋಗ: ಪೇದೆ ಕೆಂಡಗಣ್ಣ ಅಮಾನತು

| Published : Feb 09 2024, 01:50 AM IST

ಸಾರಾಂಶ

ಪೇದೆ ಕೆಂಡಗಣ್ಣ ಶ್ರೀರಂಗಪಟ್ಟಣ ತಾಲೂಕು ನಗುವನಹಳ್ಳಿಯಲ್ಲಿ ನಡೆದಿದ್ದ ಮನೆಗಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿಗಳಿಂದ ಸುಮಾರು 200 ಗ್ರಾಂ ಚಿನ್ನಾಭರಣ ಪಡೆದು ದುರುಪಯೋಗ ಪಡಿಸಿಕೊಂಡಿದ್ದರು.

ಕನ್ನಡಪ್ರಭ ವಾರ್ತೆ ಮದ್ದೂರು

ಮನೆ ಕಳ್ಳತನ ಪ್ರಕರಣದಲ್ಲಿ ಆರೋಪಿಗಳಿಂದ ವಶಪಡಿಸಿಕೊಂಡ ಚಿನ್ನಾಭರಣ ದುರುಪಯೋಗ ಆರೋಪದ ಮೇಲೆ ಬಂಧನಕ್ಕೊಳಗಾಗಿದ್ದ ತಾಲೂಕಿನ ಕೊಪ್ಪ ಪೊಲೀಸ್ ಠಾಣೆ ಪೇದೆ ಕೆಂಡಗಣ್ಣ ರನ್ನು ಅಮಾನತು ಮಾಡಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆದೇಶ ಹೊರಡಿಸಿದ್ದಾರೆ.

ಪೇದೆ ಕೆಂಡಗಣ್ಣ ಶ್ರೀರಂಗಪಟ್ಟಣ ತಾಲೂಕು ನಗುವನಹಳ್ಳಿಯಲ್ಲಿ ನಡೆದಿದ್ದ ಮನೆಗಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿಗಳಿಂದ ಸುಮಾರು 200 ಗ್ರಾಂ ಚಿನ್ನಾಭರಣ ಪಡೆದು ದುರುಪಯೋಗ ಪಡಿಸಿಕೊಂಡಿದ್ದರು.

ಆರೋಪಿಗಳು ನೀಡಿದ್ದ ಸುಳಿವಿನ ಮೇರೆಗೆ ಮದ್ದೂರು ಪೊಲೀಸ್ ಠಾಣೆ ಇನ್ಸ್ ಪೆಕ್ಟರ್ ಶಿವಕುಮಾರ್‌ ಪೇದೆ ಕೆಂಡಗಣ್ಣನನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದ ನಂತರ ದುರುಪಯೋಗ ಪಡಿಸಿಕೊಂಡಿದ್ದ 200 ಗ್ರಾಂ ಚಿನ್ನದ ಪೈಕಿ 150 ಗ್ರಾಂ ಚಿನ್ನವನ್ನು ವಶಕ್ಕೆ ತೆಗೆದುಕೊಂಡಿದ್ದರು. ನಂತರ ಪೇದೆ ವಿರುದ್ಧ ಜಿಲ್ಲಾ ಎಸ್ಪಿಗೆ ವರದಿ ಸಲ್ಲಿಸಿದರು.

ಎಸ್ಪಿ ಎನ್. ಯತೀಶ್ ಪೇದೆ ಕೆಂಡಗಣ್ಣನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸುವಂತೆ ಸೂಚನೆ ನೀಡಿದ್ದರು. ನಂತರ ಪೇದೆ ಕೆಂಡಗಣ್ಣ ನನ್ನ ಮದ್ದೂರು ಜೆಎಂಎಫ್‌ಸಿ 2ನೇ ಅಪರ ನ್ಯಾಯಾಧೀಶ ಎನ್.ವಿ.ಕೋನಪ್ಪ ಅವರ ಮುಂದೆ ಹಾಜರು ಪಡಿಸಿದ ನಂತರ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು.

ಬಳಿಕ ಆರೋಪಿ ಪೇದೆ ಕಳ್ಳರಿಂದ ಚಿನ್ನಾಭರಣ ಪಡೆದಿದ್ದ ಸ್ಥಳದ ಮಹಜರು ನಡೆಸಬೇಕಾದ ಹಿನ್ನೆಲೆಯಲ್ಲಿ ನ್ಯಾಯಾಂಗ ಬಂಧನದಲ್ಲಿದ್ದ ಪೇದೆ ಕೆಂಡಗಣ್ಣನನ್ನು ನ್ಯಾಯಾಲಯದ ಅನುಮತಿ ಪಡೆದು ಕೆಲವು ಗಂಟೆಗಳ ಕಾಲ ಪೊಲೀಸ್ ಕಸ್ಟಡಿಗೆ ತೆಗೆದುಕೊಳ್ಳಲಾಗಿತ್ತು. ಮಹಜರು ಪೂರ್ಣಗೊಂಡ ನಂತರ ಮತ್ತೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಯಿತು.