ಸಾರಾಂಶ
ನಾಗಮಂಗಲ : ಬಡಕುಟುಂಬಕ್ಕೆ ಸೇರಿದ ಗೂಡ್ಸ್ ವಾಹನಕ್ಕೆ ಕಿಡಿಗೇಡಿಗಳು ಬೆಂಕಿ ಹಚ್ಚಿದ ಪರಿಣಾಮ ವಾಹನ ಸೇರಿದಂತೆ ಅದರಲ್ಲಿದ್ದ ಆಟಿಕೆ ವಸ್ತುಗಳು ಸುಟ್ಟು ಭಸ್ಮವಾಗಿರುವ ಘಟನೆ ತಾಲೂಕಿನ ಬೆಳ್ಳೂರು ಕ್ರಾಸ್ನ ಕೆಂಬಾರೆ ಗ್ರಾಮದಲ್ಲಿ ಗುರುವಾರ ತಡರಾತ್ರಿ ಸಂಭವಿಸಿದೆ.
ಕಿಡಿಗೇಡಿಗಳು ನಡೆಸಿರುವ ಕೃತ್ಯಕ್ಕೆ ಗ್ರಾಮದ ಗೀತಾ ಮತ್ತು ಮಹೇಶ್ ದಂಪತಿಗೆ ಸೇರಿದ ಗೂಡ್ಸ್ ವಾಹನ ಮತ್ತು ಆಟಿಕೆ ವಸ್ತುಗಳು ಸುಟ್ಟು ಭಸ್ಮವಾಗಿ ಲಕ್ಷಕ್ಕೂ ಹೆಚ್ಚು ನಷ್ಟವುಂಟಾಗಿದೆ ಎನ್ನಲಾಗಿದೆ.
ಆಸುಪಾಸಿನ ಹಳ್ಳಿಗಳಲ್ಲಿ ಗ್ರಾಮ ದೇವತೆಗಳ ಹಬ್ಬ ನಡೆಯುತ್ತಿರುವುದರಿಂದ ಸಾಲ ಮಾಡಿ ಖರೀದಿಸಿದ್ದ ಆಟಿಕೆ ವಸ್ತುಗಳ ಪೈಕಿ ಒಂದಷ್ಟು ಸಾಮಗ್ರಿಗಳನ್ನು ಮಾರಾಟ ಮಾಡಿ ಇನ್ನುಳಿದ ಆಟಿಕೆ ವಸ್ತುಗಳನ್ನು ಗೂಡ್ಸ್ ವಾಹನದಲ್ಲಿಯೇ ಇಟ್ಟಿದ್ದೆವು.
ಆದರೆ, ಗುರುವಾರ ತಡರಾತ್ರಿ ಕಿಡಿಗೇಡಿಗಳು ಬೆಂಕಿ ಹಚ್ಚಿರುವುದರಿಂದ ಗೂಡ್ಸ್ವಾಹನ ಮತ್ತು ಅದರಲ್ಲಿದ್ದ ಎಲ್ಲಾ ಆಟಿಕೆ ವಸ್ತುಗಳು ಸುಟ್ಟು ಹೋಗಿವೆ. ಮಾಡಿರುವ ಸಾಲವನ್ನು ತೀರಿಸಿ ಮುಂದೆ ನಾವು ಜೀವನ ನಡೆಸುವುದಾದರೂ ಹೇಗೆಂದು ದಿಕ್ಕು ತೋಚದಂತಾಗಿದೆ. ಘಟನೆಯಿಂದಾಗಿ ನಮ್ಮ ಕುಟುಂಬ ಬೀದಿಗೆ ಬರುವಂತಾಗಿದೆ ಎಂದು ಗೀತಾ ಮಹೇಶ್ ದಂಪತಿ ಅಳಲು ತೋಡಿಕೊಂಡಿದ್ದಾರೆ.
ಕೆಲ ದಿನಗಳ ಹಿಂದೆ ಇದೇ ಗ್ರಾಮದ ಆನಂದ ಎಂಬುವರ ದ್ವಿಚಕ್ರ ವಾಹನಕ್ಕೆ ಕಿಡಿಗೆಡಿಗಳು ಬೆಂಕಿ ಹಚ್ಚಿದ್ದರು. ಈಗ ಮಕ್ಕಳ ಆಟಿಕೆ ವಸ್ತುಗಳಿದ್ದ ಗೂಡ್ಸ್ ವಾಹನಕ್ಕೆ ಬೆಂಕಿ ಹಚ್ಚಿದ್ದಾರೆ. ಹಾಗಾಗಿ ಪೊಲೀಸರು ಕಿಡಿಗೇಡಿಗಳನ್ನು ಪತ್ತೆಹಚ್ಚಿ ಕಾನೂನು ಕ್ರಮ ಜರುಗಿಸುವ ಜೊತೆಗೆ ಸಂಕಷ್ಟಕ್ಕೀಡಾಗಿರುವ ಬಡ ಕುಟುಂಬಕ್ಕೆ ನ್ಯಾಯ ದೊರಕಿಸಬೇಕು ಎಂದು ಸ್ಥಳೀಯರಾದ ನರಸಿಂಹಮೂರ್ತಿ ಮತ್ತು ಮುನಿರಾಜು ಮನವಿ ಮಾಡಿದ್ದಾರೆ.
ಫಟನೆ ಸಂಬಂಧ ಬೆಳ್ಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಮುಂದಿನ ಕ್ರಮವಹಿಸಿದ್ದಾರೆ.