ಬೆಂಗಳೂರಿನಲ್ಲಿ ಬಂಧಿತನಾದ ಉತ್ತರ ಭಾರತ ವಲಯದ ಪ್ರಮುಖ ನಿಷೇಧಿತ ಮಾವೋವಾದಿ ನಾಯಕ : ಸಿಸಿಬಿ ಹಾಗೂ ಉಗ್ರನ ನಿಗ್ರಹ ದಳದಿಂದ ಕಾರ್ಯಾಚರಣೆ

| Published : Sep 07 2024, 01:32 AM IST / Updated: Sep 07 2024, 04:21 AM IST

man arrest
ಬೆಂಗಳೂರಿನಲ್ಲಿ ಬಂಧಿತನಾದ ಉತ್ತರ ಭಾರತ ವಲಯದ ಪ್ರಮುಖ ನಿಷೇಧಿತ ಮಾವೋವಾದಿ ನಾಯಕ : ಸಿಸಿಬಿ ಹಾಗೂ ಉಗ್ರನ ನಿಗ್ರಹ ದಳದಿಂದ ಕಾರ್ಯಾಚರಣೆ
Share this Article
  • FB
  • TW
  • Linkdin
  • Email

ಸಾರಾಂಶ

ತನ್ನ ಸ್ನೇಹಿತೆ ಭೇಟಿಗೆ ಬೆಂಗಳೂರಿಗೆ ಬಂದಿದ್ದ ನಿಷೇಧಿತ ಮಾವೋವಾದಿ ನಕ್ಸಲ್ ಸಂಘಟನೆಯ ಉತ್ತರ ಭಾರತ ವಲಯದ ಪ್ರಮುಖ ನಾಯಕನನ್ನು ಸಿಸಿಬಿ ಹಾಗೂ ಉಗ್ರನ ನಿಗ್ರಹ ದಳಗಳು ಬಂಧಿಸಿವೆ.  

ಬೆಂಗಳೂರು :  ತನ್ನ ಸ್ನೇಹಿತೆ ಭೇಟಿಗೆ ನಗರಕ್ಕೆ ಬಂದಿದ್ದ ನಿಷೇಧಿತ ಮಾವೋವಾದಿ ನಕ್ಸಲ್ ಸಂಘಟನೆಯ ಉತ್ತರ ಭಾರತ ವಲಯದ ಪ್ರಮುಖ ನಾಯಕನೊಬ್ಬನನ್ನು ಸಿಸಿಬಿ ಹಾಗೂ ಉಗ್ರನ ನಿಗ್ರಹ ದಳಗಳು ಜಂಟಿ ಕಾರ್ಯಾಚರಣೆ ನಡೆಸಿ ಸೆರೆ ಹಿಡಿದಿವೆ.

ತಮಿಳುನಾಡು ರಾಜ್ಯ ಪಣೈಯೂರು ಚೆನ್ನೈ ನಗರದ ಅನಿರುದ್ಧ ರಾಜನ್‌ ಬಂಧಿತನಾಗಿದ್ದು, ಆತನಿಂದ ಮೊಬೈಲ್‌, ಪೆನ್‌ಡ್ರೈವ್‌ಗಳು, ನಕಲಿ ಆಧಾರ್ ಕಾರ್ಡ್‌ಗಳು ಹಾಗೂ ಕೆಲ ದಾಖಲೆಗಳನ್ನು ಜಪ್ತಿ ಮಾಡಲಾಗಿದೆ. ಮೆಜೆಸ್ಟಿಕ್ ಕೆಂಪೇಗೌಡ ಬಸ್‌ ನಿಲ್ದಾಣದಲ್ಲಿ ಗುರುವಾರ ಬೆಳಗ್ಗೆ ರಾಜನ್‌ನನ್ನು ಬಂಧಿಸಿದ ಪೊಲೀಸರು, ಬಳಿಕ ನ್ಯಾಯಾಲಯ ಮುಂದೆ ಹಾಜರುಪಡಿಸಿ ಹೆಚ್ಚಿನ ತನಿಖೆ ಸಲುವಾಗಿ 14 ದಿನ ಕಸ್ಟಡಿಗೆ ಪಡೆದಿದ್ದಾರೆ. ಈ ಪ್ರಕರಣದ ಸಮಗ್ರ ತನಿಖೆಗೆ ಸಿಸಿಬಿಗೆ ವಹಿಸಿ ನಗರ ಪೊಲೀಸ್ ಆಯುಕ್ತರು ಆದೇಶಿಸಿದ್ದಾರೆ. ರಾಜನ್ ವಿರುದ್ಧ ಉಪ್ಪಾರಪೇಟೆ ಠಾಣೆಯಲ್ಲಿ ಕಾನೂನುಬಾಹಿರ ಚಟುವಟಿಕೆಗಳ ನಿಷೇಧ ಕಾಯ್ದೆ (ಯುಎಪಿಎ)ಯಡಿ ಎಫ್‌ಐಆರ್ ದಾಖಲಾಗಿದೆ.

ಉ.ಭಾರತದ ನಕ್ಸಲ್ ಕೊರಿಯರ್ ಅನಿರುದ್ಧ:

ತಮಿಳುನಾಡಿನ ಚೆನ್ನೈ ನಗರದ ಅನಿರುದ್ಧ ರಾಜನ್‌ ಬಿಕಾಎಂ ಪದವೀಧರನಾಗಿದ್ದು, 2018ರಲ್ಲಿ ಎಡಪಂಥೀಯ ವಾದದ ಕಡೆ ಆಕರ್ಷಿತನಾಗಿ ನಿಷೇಧಿತ ಸಿಪಿಐ (ಮಾವೋವಾದಿ) ಸಂಘಟನೆ ಜತೆ ಗುರುತಿಸಿಕೊಂಡಿದ್ದ. ತರುವಾಯ ಆ ಸಂಘಟನೆಯಲ್ಲಿ ತನ್ನ ಚುರುಕಿನ ಚಟುವಟಿಕೆಗಳಿಂದ ನಕ್ಸಲೀಯರ ಕಮಾಂಡರ್‌ಗಳ ವಿಶ್ವಾಸವನ್ನು ಅಲ್ಪಾವಧಿಯಲ್ಲೇ ಆತನ ಗಳಿಸಿದ. ಇದರಿಂದ ಪ್ರಮುಖ ನಿರ್ಧಾರಗಳಲ್ಲಿ ಆತ ಪ್ರಭಾವಿಸುವಂತಾದ. ಪ್ರಸುತ್ತ ಉತ್ತರ ಭಾರತದಲ್ಲಿ ಮಾವೋವಾದಿಗಳ ನಡುವೆ ‘ಕೊರಿಯರ್‌’ ಪಾತ್ರವನ್ನು ಅನಿರುದ್ಧ ನಿರ್ವಹಿಸುತ್ತಿದ್ದ ಎಂದು ಪೊಲೀಸರು ಹೇಳಿದ್ದಾರೆ.

ಬೆಂಗಳೂರಿನಲ್ಲಿ ಖಾಸಗಿ ಕಂಪನಿಯಲ್ಲಿ ಉದ್ಯೋಗದಲ್ಲಿರುವ ತನ್ನ ಸ್ನೇಹಿತೆಯ ಭೇಟಿಗೆ ಆಗಾಗ್ಗೆ ರಾಜನ್ ಬಂದು ಹೋಗುತ್ತಿದ್ದ. ಇತ್ತೀಚಿಗೆ ಆತನ ಚಲನವಲನದ ಬಗ್ಗೆ ಮಾಹಿತಿ ಕಲೆ ಹಾಕಿದ ಸಿಸಿಬಿ ಹಾಗೂ ಎಟಿಎಸ್‌ ತಂಡಗಳು, ರಾಜನ್‌ ಮೇಲೆ ನಿಗಾವಹಿಸಿದ್ದರು. ಆ ವೇಳೆ ಬೆಂಗಳೂರಿಗೆ ರಾಜನ್ ಬಂದು ತಾತ್ಕಾಲಿಕವಾಗಿ ಅಜ್ಞಾತ ಸ್ಥಳದಲ್ಲಿರುವ ಮಾಹಿತಿ ಪೊಲೀಸರಿಗೆ ಸಿಕ್ಕಿತು. ಭೂಗತವಾಗಿದ್ದುಕೊಂಡೇ ಕಾನೂನುಬಾಹಿರ ಚಟುವಟಿಕೆಗಳಲ್ಲಿ ತನ್ನ ಸದಸ್ಯರ ಜತೆ ಆತ ಸಕ್ರಿಯವಾಗಿದ್ದು, ಬೆಂಗಳೂರಿನಲ್ಲಿ ಓಡಾಟಕ್ಕೆ ಬಿಎಂಟಿಸಿ ಬಸ್ ಬಳಸುತ್ತಿದ್ದ ಸುಳಿವು ಬಾತ್ಮೀದಾರರಿಂದ ಸಿಕ್ಕಿತು. ಈ ಮಾಹಿತಿ ಪಡೆದ ಕೂಡಲೇ ಚುರುಕಾದ ಪೊಲೀಸರು, ಗುರುವಾರ ರಾತ್ರಿ ಮೆಜೆಸ್ಟಿಕ್‌ ಕೆಂಪೇಗೌಡ ಬಸ್‌ ನಿಲ್ದಾಣದಲ್ಲಿ ಆತ ಬೇರೆಡೆ ಹೋಗಲು ಸಜ್ಜಾಗಿದ್ದಾಗ ಬಂಧಿಸಿದ್ದಾರೆ.

ದೇಣಿಗೆ, ನೇಮಕಾತಿಯಲ್ಲಿ ಪ್ರಮುಖ ಪಾತ್ರ

ಕಳೆದ ನಾಲ್ಕೈದು ವರ್ಷಗಳಿಂದ ಎಡ ಪಂಥೀಯ ಉಗ್ರ ಚಟುವಟಿಕೆಗಳ ಬಗ್ಗೆ ಸಹಾನುಭೂತಿಯುಳ್ಳ ವ್ಯಕ್ತಿಗಳ ಜೊತೆಯಲ್ಲಿ ಅನಿರುದ್ಧ ಸಂಪರ್ಕದಲ್ಲಿದ್ದು, ಆತ ಕೊರಿಯರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ. ಈ ನಿಷೇಧಿತ ನಕ್ಸಲ್ ಸಂಘಟನೆಗೆ ಹಣ ಸಂಗ್ರಹ ಹಾಗೂ ಆ ಸಂಘಟನೆಗೆ ಯುವಕರ ನೇಮಕಾತಿಯಲ್ಲಿ ರಾಜನ್‌ ಪ್ರಮುಖ ಪಾತ್ರವಹಿಸಿದ್ದ. ಈ ಸಂಘಟನೆ ವಿಸ್ತಣೆ ಸಲುವಾಗಿ ದೇಶ ವ್ಯಾಪ್ತಿ ರಹಸ್ಯ ಸಭೆಗಳನ್ನು ಏರ್ಪಡಿಸಿ ಯುವಕರನ್ನು ಒಟ್ಟುಗೂಡಿಸುತ್ತಿದ್ದ. ಬಳಿಕ ದೇಶದ ಸಾರ್ವಭೌಮತೆಗೆ, ಏಕತೆಗೆ, ಸಮಗ್ರತೆಗೆ ಹಾಗೂ ಭದ್ರತೆಗೆ ಹಾನಿಯುಂಟು ಮಾಡಿ ದೇಶದಲ್ಲಿ ನಕ್ಸಲ್ ಸಂಘಟನೆಯ ಆಡಳಿತ ನಡೆಸುವ ದುರುದ್ದೇಶ ಹೊಂದಿದ್ದ. ಈ ಅಪರಾಧಿಕ ಕೃತ್ಯಗಳನ್ನು ಎಸಗುವ ಸಲುವಾಗಿ ಬೆಂಗಳೂರಿಗೆ ರಾಜನ್‌ ಬಂದಿದ್ದ ಎಂಬುದು ಗೊತ್ತಾಗಿದೆ ಎಂದು ಪೊಲೀಸರ ದೂರಿನಲ್ಲಿ ಉಲ್ಲೇಖವಾಗಿದೆ.

ನಾನೇಕೆ ಮಾಹಿತಿ ಕೊಡಲಿ: ರಾಜನ್

ಮೆಜೆಸ್ಟಿಕ್‌ ಬಸ್‌ ನಿಲ್ದಾಣದಲ್ಲಿ ಎರಡು ಬ್ಯಾಗ್‌ಗಳನ್ನು ಹಿಡಿದುಕೊಂಡು ಹೊರ ರಾಜ್ಯಕ್ಕೆ ಹೊರಡಲು ಅಣಿಯಾಗಿದ್ದ ರಾಜನ್‌ನನ್ನು ಪೊಲೀಸರು ವಶಕ್ಕೆ ಪಡೆದರು. ಆಗ ಆತನ್ನು ಪ್ರಶ್ನಿಸಿದಾಗ ತನ್ನ ಹೆಸರನ್ನು ರಾಜನ್‌ ಎಂದು ಆಂಗ್ಲ ಭಾಷೆಯಲ್ಲಿ ಹೇಳಿದ್ದಾನೆ. ಆದರೆ ಹೆಚ್ಚಿನ ವಿವರ ಕೇಳಿದಾಗ ನೀಡಲು ರಾಜನ್‌ ನಿರಾಕರಿಸಿದ್ದಾನೆ. ಬಳಿಕ ಆತನ್ನು ವಶಕ್ಕೆ ಪಡೆದು ಮಡಿವಾಳದಲ್ಲಿರುವ ವಿಚಾರಣಾ ಕೇಂದ್ರಕ್ಕೆ ಕರೆದೊಯ್ದು ಪ್ರಶ್ನಿಸಿದಾಗ ಕೊನೆಗೆ ತನ್ನ ವಿವರ ಬಹಿರಂಗಪಡಿಸಿದ್ದಾನೆ.

ತಾನು 5 ವರ್ಷಗಳ ಹಿಂದೆ ಎಡಪಂಥೀಯ ವಿಷಯಗಳಲ್ಲಿ ಆಕರ್ಷಣೆಯಾಗಿದ್ದೆ. ಅಂದಿನಿಂದ ರಹಸ್ಯವಾಗಿ ಸಿ.ಪಿ.ಐ (ಮಾವೋವಾದಿ) ಸಂಘಟನೆಯವರೊಂದಿಗೆ ಸಂಪರ್ಕದಲ್ಲಿಟ್ಟುಕೊಂಡಿದ್ದೆ. ತನ್ನ ಬಳಿಯಲ್ಲಿರುವ ಪೆನ್‌ಡ್ರೈವ್‌ಗಳಲ್ಲಿ ಸಿಪಿಐ (ಮಾವೋವಾದಿ)ಗೆ ಸಂಬಂಧಿಸಿದ ಲೆಟರ್‌ಗಳು ಸೇರಿ ಇತರೆ ಮಾಹಿತಿಗಳಿವೆ ಎಂದು ರಾಜನ್ ವಿವರಿಸಿದ್ದಾನೆ. ಅಲ್ಲದೆ ತನ್ನ ಲ್ಯಾಪ್‌ಟಾಪ್ ಹಾಗೂ ಪೆನ್‌ಡ್ರೈವ್ ಅನ್ನು ಪೊಲೀಸರಿಗೆ ಆತ ಒಪ್ಪಿಸಿದ್ದಾನೆ. ಹಾಗೆಯೇ ಕೆಲವು ಪೆನ್ ಡ್ರೈವ್‌ಗಳು ಇಂದಿರಾನಗರದಲ್ಲಿರುವ ಆತನ ಸ್ನೇಹಿತನ ಮನೆಯಲ್ಲಿ ಪತ್ತೆಯಾದವು ಎಂದು ಪೊಲೀಸರು ಹೇಳಿದ್ದಾರೆ.

ನಕಲಿ ಆಧಾರ್ ಮಾಡಿಸಿದ್ದ

ನಿಷೇಧಿತ ನಕ್ಸಲ್‌ ಸಂಘಟನೆಯಲ್ಲಿ ತೊಡಗಿಸಿಕೊಳ್ಳುವ ಸಲುವಾಗಿ ವಿಕಾಸ್ ಘಾಡ್ಗೆ ಎಂಬ ನಕಲಿ ಆಧಾರ್ ಕಾರ್ಡ್ ಪತ್ತೆಯಾಗಿದೆ. ಅಲ್ಲದೆ ನಿಷೇಧಿತ ಸಂಘಟನೆಯ ವಿಚಾರಗಳನ್ನು ಪ್ರಚಾರ ಮಾಡಲು ಮತ್ತು ಸದಸ್ಯರನ್ನು ಸಂಪರ್ಕಿಸಲು ಅನಾಮಧೇಯ ವ್ಯಕ್ತಿಗಳ ಹೆಸರಿನಲ್ಲಿ ನಕಲಿ ಆಧಾ‌ರ್ ಕಾರ್ಡ್‌ ಗಳನ್ನು ರಾಜನ್‌ ಸೃಷ್ಟಿಸಿಕೊಳ್ಳುತ್ತಿದ್ದ. ಈ ದಾಖಲೆಯನ್ನು ಬಳಸಿ ಅಪರಿಚಿತರ ಹೆಸರಿನಲ್ಲಿ ಸಿಮ್ ಕಾರ್ಡ್‌ಗಳನ್ನು ಕೂಡ ರಾಜನ್‌ ಖರೀದಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ನಿಷೇಧಿತ ಮಾವೋ ಸಂಘಟನೆಯ ಬಂಧಿತ ಸದಸ್ಯನಿಗೆ ಕರ್ನಾಟಕದ ನಂಟಿನ ಕುರಿತು ತನಿಖೆ ನಡೆಸಲಾಗುತ್ತಿದೆ. ಬೆಂಗಳೂರಿನಲ್ಲಿ ಆತನ ಸಂಪರ್ಕದಲ್ಲಿದ್ದವರ ಪತ್ತೆ ಕಾರ್ಯ ಮುಂದುವರೆದಿದ್ದು, ಇದುವರೆಗೆ ವಿಚಾರಣೆ ವೇಳೆ ರಾಜ್ಯದಲ್ಲಿ ತನ್ನ ಚಟುವಟಿಕೆಗಳ ಕುರಿತು ಆರೋಪಿ ಮಾಹಿತಿ ನೀಡಿಲ್ಲ.

-ಡಾ। ಚಂದ್ರಗುಪ್ತ, ಹೆಚ್ಚುವರಿ ಪೊಲೀಸ್ ಆಯುಕ್ತ.