ದಕ್ಷಿಣ ಭಾರತದಲ್ಲೂ ಸಂಸತ್‌ ಅಧಿವೇಶನ ನಡೆಸಬೇಕು ಎಂಬ ಕೂಗು : ದಕ್ಷಿಣದ ಸಂಸದರಿಂದಲೇ ಅಸಪ್ವರ

| Published : Dec 03 2024, 12:31 AM IST / Updated: Dec 03 2024, 06:36 AM IST

Yaduveer

ಸಾರಾಂಶ

ದಕ್ಷಿಣ ಭಾರತದಲ್ಲೂ ಸಂಸತ್‌ ಅಧಿವೇಶನ ನಡೆಸಬೇಕು ಎಂಬ ಕೂಗು ಕೇಳಿಬಂದಿದೆ.   ವೈಎಸ್ಸಾರ್‌ ಕಾಂಗ್ರೆಸ್ ಸಂಸದ ಮದ್ದಿಲ ಗುರುಮೂರ್ತಿ ಈ ಬೇಡಿಕೆ ಇರಿಸಿದ್ದು, ವರ್ಷಕ್ಕೆ ಕನಿಷ್ಠ 2 ಅಧಿವೇಶನಗಳನ್ನು ದಕ್ಷಿಣದಲ್ಲಿ ನಡೆಸಬೇಕು ಆಗ್ರಹಿಸಿ ಕೇಂದ್ರ ಸಂಸದೀಯ ಸಚಿವ ಕಿರಣ್‌ ರಿಜಿಜು ಅವರಿಗೆ ಪತ್ರ ಬರೆದಿದ್ದಾರೆ.

ನವದೆಹಲಿ: ದಕ್ಷಿಣ ಭಾರತದಲ್ಲೂ ಸಂಸತ್‌ ಅಧಿವೇಶನ ನಡೆಸಬೇಕು ಎಂಬ ಕೂಗು ಕೇಳಿಬಂದಿದೆ. ಆಂಧ್ರಪ್ರದೇಶದ ವೈಎಸ್ಸಾರ್‌ ಕಾಂಗ್ರೆಸ್ ಸಂಸದ ಮದ್ದಿಲ ಗುರುಮೂರ್ತಿ ಈ ಬೇಡಿಕೆ ಇರಿಸಿದ್ದು, ವರ್ಷಕ್ಕೆ ಕನಿಷ್ಠ 2 ಅಧಿವೇಶನಗಳನ್ನು ದಕ್ಷಿಣದಲ್ಲಿ ನಡೆಸಬೇಕು ಆಗ್ರಹಿಸಿ ಕೇಂದ್ರ ಸಂಸದೀಯ ಸಚಿವ ಕಿರಣ್‌ ರಿಜಿಜು ಅವರಿಗೆ ಪತ್ರ ಬರೆದಿದ್ದಾರೆ.

ಆದರೆ ಇದರ ಬೆನ್ನಲ್ಲೇ ದಕ್ಷಿಣದ ಸಂಸದರಿಂದಲೇ ಇದಕ್ಕೆ ಅಸಪ್ವರ ವ್ಯಕ್ತವಾಗಿದೆ. ಮೈಸೂರು ಸಂಸದ ಯದುವೀರ ಒಡೆಯರ್‌, ಈ ಪ್ರಸ್ತಾಪ ವಿರೋಧಿಸಿ, ‘ಸಂಸತ್‌ ಕಲಾಪ ನಡೆಸುವುದಕ್ಕೆ ಇಡೀ ಸರ್ಕಾರಿ ತಂತ್ರವನ್ನೇ ದಕ್ಷಿಣಕ್ಕೆ ಸ್ಥಳಾಂತರ ಮಾಡಬೇಕಾಗುತ್ತದೆ. ಇದು ತುಂಬಾ ಕ್ಲಿಷ್ಟಕರ ಪ್ರಕ್ರಿಯೆ ಹಾಗೂ ಸಮಯ ವ್ಯರ್ಥಕ್ಕೆ ಕಾರಣವಾಗುತ್ತದೆ’ ಎಂದಿದ್ದಾರೆ.

ಗುರುಮೂರ್ತಿ ವಾದವೇನು?:

‘ದೆಹಲಿಯಲ್ಲಿನ ಹವಾಮಾನ ವೈಪರೀತ್ಯದ ಸಂದರ್ಭದಲ್ಲಿ ಸಂಸದರು ಎದುರಿಸುತ್ತಿರುವ ಸವಾಲುಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಹಾಗೂ ರಾಷ್ಟ್ರೀಯ ಏಕೀಕರಣವನ್ನು ಬಲಪಡಿಸುವ ವಿಶಾಲ ಗುರಿ ದೃಷ್ಟಿಕೋನದೊಂದಿಗೆ ದಕ್ಷಿಣದಲ್ಲೂ ವರ್ಷಕ್ಕೆ 2 ಸಂಸತ್‌ ಅಧಿವೇಶನ ನಡೆಸಬೇಕು’ ಎಂದು ವೈಎಸ್ಸಾರ್‌ ಕಾಂಗ್ರೆಸ್‌ ಸಂಸದ ಗುರುಮೂರ್ತಿ ಕೋರಿದ್ದಾರೆ.

ಒಡೆಯರ್‌ ಹೇಳಿದ್ದೇನು?:

ಗುರುಮೂರ್ತಿ ಆಗ್ರಹಕ್ಕೆ ಎನ್‌ಡಿಟೀವಿ ಮುಂದೆ ಪ್ರತಿಕ್ರಿಯಿಸಿದ ಮೈಸೂರು ಬಿಜೆಪಿ ಸಂಸದ ಒಡೆಯರ್, ‘ರಾಷ್ಟ್ರ ನಿರ್ಮಾಣ ಎಂಬುದು ಒಂದು ಉದಾತ್ತ ಪ್ರಕ್ರಿಯೆಯಾಗಿದೆ. ಅಸ್ತಿತ್ವದಲ್ಲಿರುವ ಚೌಕಟ್ಟಿನಲ್ಲೇ ರಾಷ್ಟ್ರನಿರ್ಮಾಣ ನಡೆದಿದೆ. ಇನ್ನು ಉತ್ತರದ ಹವಾಮಾನಕ್ಕೆ ಸಂಬಂಧಿಸಿ ಗುರುಮೂರ್ತಿ ಪ್ರಶ್ನೆ ಎತ್ತಿದ್ದಾರೆ. ನಾವು ಕಲಾಪ ನಡೆಸುವುದು ಸಂಸತ್ತಿನ 4 ಗೋಡೆಗಳ ನಡುವೆ. ಅಲ್ಲಿ ಸಮಸ್ಯೆ ಆಗದಂತೆ ಎಲ್ಲ ಮುನ್ನೆಚ್ಚರಿಕೆ ವಹಿಸಲಾಗಿದೆ. ಹೀಗಾಗಿ ದಕ್ಷಿಣದಲ್ಲಿ ಅಧಿವೇಶನ ನಡೆಸಿ ಎಂಬ ಕೋರಿಕೆ ಸ್ವೀಕಾರಾರ್ಹವಲ್ಲ’ ಎಂದರು.