ಸಾರಾಂಶ
ಕೇರಳ ಲಾಟರಿ ಟಿಕೆಟ್ ಪಡೆದ ಕರ್ನಾಟಕ ರಾಜ್ಯದ ಮೂಲದವರಿಗೆ ಕೋಟ್ಯಂತರ ರು. ಬಹುಮಾನ ರೂಪದಲ್ಲಿ ಹರಿದುಬರುತ್ತಿರುವುದರಿಂದ ಕೇರಳ ಲಾಟರಿಗೆ ಬೇಡಿಕೆ ಸೃಷ್ಟಿಯಾಗಿದೆ.
ಪಾಂಡವಪುರ : ಕೇರಳ ಲಾಟರಿ ಟಿಕೆಟ್ ಪಡೆದ ಕರ್ನಾಟಕ ರಾಜ್ಯದ ಮೂಲದವರಿಗೆ ಕೋಟ್ಯಂತರ ರು. ಬಹುಮಾನ ರೂಪದಲ್ಲಿ ಹರಿದುಬರುತ್ತಿರುವುದರಿಂದ ಕೇರಳ ಲಾಟರಿಗೆ ಬೇಡಿಕೆ ಸೃಷ್ಟಿಯಾಗಿದೆ. ಇದನ್ನು ಲಾಭ ಮಾಡಿಕೊಳ್ಳಲು ಹಲವರು ಕೇರಳ ರಾಜ್ಯಕ್ಕೆ ತೆರಳಿ ಅಲ್ಲಿಂದ ಲಾಟರಿ ಟಿಕೆಟ್ಗಳನ್ನು ತಂದು ಇಲ್ಲಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿರುವ ಸಂಗತಿ ಬೆಳಕಿಗೆ ಬಂದಿದೆ.
ಪಟ್ಟಣದ ಬಸವನಗುಡಿ ಬೀದಿಯಲ್ಲಿ ವಾಸವಾಗಿರುವ ಅರೋಕ್ಯಸ್ವಾಮಿ ಅಲಿಯಾಸ್ ವಿನ್ಸೆಂಟ್ ತನ್ನ ಮನೆಯ ಮುಂಭಾಗದಲ್ಲಿ ಹೊಒಂಗೆ ಮರದ ಕೆಳಗೆ ಕೇರಳ ರಾಜ್ಯದಿಂದ ಲಾಟರಿ ಟಿಕೆಟ್ಗಳನ್ನು ತಂದು ಮಾರಾಟ ಮಾಡುತ್ತಿದ್ದನು. ಬಾತ್ಮೀದಾರರಿಂದ ಬಂದ ಖಚಿತ ಮಾಹಿತಿ ಆಧರಿಸಿ ದಾಳಿ ಮಾಡಿದಾಗ ಆತನ ಕೈಯ್ಯಲ್ಲಿ ಕೇರಳ ರಾಜ್ಯದ ಲಾಟರಿ ಟಿಕೆಟ್ಗಳಿದ್ದವು. ಈ ಟಿಕೆಟ್ಗಳನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡಲು ತಂದಿರುವುದಾಗಿ ತಿಳಿಸಿದನು.
ಕೇರಳ ರಾಜ್ಯದ ಲಾಟರಿ ಟಿಕೆಟ್ಗಳನ್ನು ಮಾರಾಟ ಮಾಡಲು ಯಾವುದೇ ಪರವಾನಗಿ ಇಲ್ಲದೆ ಮಾರಾಟ ಮಾಡುತ್ತಿದ್ದನು. ಲಾಟರಿ ಟಿಕೆಟ್ಗಳನ್ನು ಪರಿಶೀಲಿಸಿದಾಗ ವಿವಿಧ ಸರಣಿಯ ಒಟ್ಟು ೬೦ ಲಾಟರಿ ಟಿಕೆಟ್ಗಳಿರುವುದು ಕಂಡುಬಂದಿದೆ. ಪಾಂಡವಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಅಕ್ರಮ ರಸಗೊಬ್ಬರ ಸಾಗಾಟ, ಕಲಬೆರೆಕೆ ಮಾಹಿತಿ ನೀಡಿ: ಪ್ರತಿಭಾ
ಮದ್ದೂರು:
ಮಂಡ್ಯ ಜಿಲ್ಲೆಯಲ್ಲಿ ಅಕ್ರಮ ರಸಗೊಬ್ಬರ ಸಾಗಾಟ ಮತ್ತು ಕಲಬೆರಕೆ ಮಾಡುವವರು ಹಾಗೂ ಜಿಲ್ಲೆಗೆ ನಿರ್ದಿಷ್ಟವಾಗಿ ಗೊತ್ತು ಮಾಡಲಾದ ರಸಗೊಬ್ಬರಗಳನ್ನು ಇತರೆ ರಾಜ್ಯಗಳಿಗೆ ಅಕ್ರಮವಾಗಿ ಮಾರಾಟ ಮಾಡುವ ವ್ಯವಸ್ಥಿತ ಜಾಲದ ವಿರುದ್ಧ ಜಿಲ್ಲಾ ಕೃಷಿ ಅಧಿಕಾರಿ ಅವಿರತವಾಗಿ ಹೋರಾಟ ಮಾಡುತ್ತಿದ್ದಾರೆ. ತಾಲೂಕಿನ ವ್ಯಾಪ್ತಿ ರಸಗೊಬ್ಬರ ಮಾರಾಟಗಾರರು ಅಕ್ರಮ ಹಾಗೂ ಕಳಪೆ ದರ್ಜೆ ರಸಗೊಬ್ಬರ ಮಾರಾಟ ಮಾಡುತ್ತಿರುವವರ ಬಗ್ಗೆ ಅಥವಾ ಯಾವುದೇ ಅಕ್ರಮ ಚಟುವಟಿಕೆಗಳು ಕಂಡರೂ ಮಂಡ್ಯ ಜಿಲ್ಲಾ ಜಂಟಿ ಕೃಷಿ ನಿರ್ದೇಶಕರು ಅಥವಾ ತಾಲೂಕು ಕೃಷಿ ನಿರ್ದೇಶಕರಿಗೆ ಹಾಗೂ ಕೃಷಿ ಅಧಿಕಾರಿಗಳಿಗೆ ಮಾಹಿತಿ ನೀಡುವಂತೆ ಸಹಾಯಕ ಕೃಷಿ ನಿರ್ದೇಶಕರಾದ ಎಚ್.ಜಿ.ಪ್ರತಿಭಾ ತಿಳಿಸಿದ್ದಾರೆ.