ಸಾರಾಂಶ
ನಾಗಮಂಗಲ : ಕಬಡ್ಡಿ ಪಂದ್ಯಾವಳಿ ವೇಳೆ ರಾಜ್ಯ ಮಟ್ಟದ ಕಬಡ್ಡಿ ಆಟಗಾರ ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ತಾಲೂಕಿನ ಸುಖಧರೆ ಗ್ರಾಮದಲ್ಲಿ ಶುಕ್ರವಾರ ಮುಂಜಾನೆ ಸಂಭವಿಸಿದೆ.
ಉಡುಪಿ ಜಿಲ್ಲೆ ಹೆಬ್ರಿ ತಾಲೂಕಿನ ಮುಟ್ಲುಪಾಡಿಯ ನಡುಮನೆ ನಿವಾಸಿ ಪ್ರೀತಂಶೆಟ್ಟಿ (26) ಮೃತಪಟ್ಟ ದುರ್ದೈವಿ.
ತಾಲೂಕಿನ ಹೊಣಕೆರೆ ಹೋಬಳಿಯ ಸುಖಧರೆ ಗ್ರಾಮದಲ್ಲಿ 63ನೇ ವರ್ಷದ ಹನುಮಜಯಂತಿ ಅಂಗವಾಗಿ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿ ಆಯೋಜಿಸಲಾಗಿತ್ತು. ಈ ಪಂದ್ಯಾವಳಿಯಲ್ಲಿ ಪ್ರೊ.ಕಬಡ್ಡಿ ಆಟಗಾರರು ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ನುರಿತ ಆಟಗಾರರ ತಂಡಗಳಾಗಿ 14ಕ್ಕೂ ಹೆಚ್ಚು ತಂಡಗಳು ಭಾಗವಹಿಸಿದ್ದವು.
ಮೃತ ಪ್ರೀತಂಶೆಟ್ಟಿ ಎನ್ಜೆಆರ್ ನಾಗಮಂಗಲ ತಂಡದಲ್ಲಿ ಆಟವಾಡುತ್ತಿದ್ದರು. ಮೊದಲ ಹಂತದ ಪಂದ್ಯದಲ್ಲಿ ಗೆಲುವು ಸಾಧಿಸಿ ನಂತರ ಫೈನಲ್ ಹಂತಕ್ಕೆ ತಲುಪಿದ್ದರು. ಆದರೆ, ಫೈನಲ್ ಪಂದ್ಯ ಆಡುವಷ್ಟರಲ್ಲಿ ಎದೆನೋವು ಮತ್ತು ವಾಂತಿ ಆರಂಭವಾಗಿದ್ದರಿಂದ ತಂಡದ ಇತರೆ ಆಟಗಾರರು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯದಲ್ಲಿಯೇ ಮೃತಪಟ್ಟಿದ್ದಾರೆ.
ತಾಲೂಕಿನ ಆದಿಚುಂಚನಗಿರಿ ಆಸ್ಪತ್ರೆಯ ಶವಾಗಾರದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ನಂತರ ಪ್ರೀತಂಶೆಟ್ಟಿ ಮೃತದೇಹವನ್ನು ವಾರಸುದಾರರಿಗೆ ಹಸ್ತಾಂತರಿಸಲಾಯಿತು.
ಕಬಡ್ಡಿ ಆಟಗಾರರು ಹಾಗೂ ಸಾರ್ವಜನಿಕರು ಪ್ರೀತಂಶೆಟ್ಟಿ ನಿಧನಕ್ಕೆ ಕಂಬನಿ ಮಿಡಿದರು. ನಾಗಮಂಗಲ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.
ಜೈಲಿನಲ್ಲಿದ್ದ ಮಗನನ್ನು ನೋಡಲು ಹೋದ ತಂದೆಯೂ ಜೈಲುಪಾಲು...!
ಮಂಡ್ಯ: ಜೈಲಿನಲ್ಲಿದ್ದ ಮಗನನ್ನು ನೋಡಲು ಹೋದ ತಂದೆಯ ಬ್ಯಾಗ್ನಲ್ಲಿ ಗಾಂಜಾ ಪತ್ತೆಯಾದ ಹಿನ್ನೆಲೆಯಲ್ಲಿ ಪೊಲೀಸರು ಬಂಧಿಸಿರುವ ಘಟನೆ ನಗರದ ಜಿಲ್ಲಾ ಕಾರಾಗೃಹದಲ್ಲಿ ನಡೆದಿದೆ.
ಮಳವಳ್ಳಿ ತಾಲೂಕಿನ ಹಲಗೂರು ಗ್ರಾಮದ ಮಧುಸೂದನ್ ನನ್ನು ಪೊಲೀಸರು ಈ ಹಿಂದೆ ಪ್ರಕರಣದಲ್ಲಿ ಬಂಧಿಸಿ ಜಿಲ್ಲಾ ಕಾರಾಗೃಹದಲ್ಲಿ ಇರಿಸಲಾಗಿತ್ತು. ಆತನಿಗೆ ಬಟ್ಟೆ ಕೊಡಲು ತಂದೆ ಶಿವಣ್ಣ ಪೊಲೀಸ್ ಠಾಣೆಗೆ ತೆರಳಿದ್ದರು.
ಸ್ನೇಹಿತನಿಂದ ಬಟ್ಟೆ ಬ್ಯಾಗ್ ಪಡೆದುಕೊಂಡು ಜೈಲಿಗೆ ತಂದು ಕೊಡುವಂತೆ ತನ್ನ ತಂದೆ ಶಿವಣ್ಣಗೆ ಪುತ್ರ ಮಧುಸೂದನ್ ಕರೆ ಮಾಡಿದ್ದ. ಈ ಹಿನ್ನೆಲೆಯಲ್ಲಿ ಮಗನ ಮಾತಿನಂತೆ ಅಪರಿಚಿತ ವ್ಯಕ್ತಿಯಿಂದ ಬಟ್ಟೆ ಬ್ಯಾಗ್ ಪಡೆದು ಜೈಲಿಗೆ ಬಂದಿದ್ದಾನೆ.
ಈ ವೇಳೆ ಜೈಲು ಸಿಬ್ಬಂದಿ ಬ್ಯಾಗ್ ಪರಿಶೀಲಿಸಿದಾಗ 20 ಗ್ರಾಂ ಗಾಂಜಾ ಪತ್ತೆಯಾಗಿದೆ. ಹೀಗಾಗಿ ಶಿವಣ್ಣರನ್ನು ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ನಂತರ ಪೊಲೀಸರು ಬಂಧಿಸಿ ಹೆಚ್ಚಿನ ವಿಚಾರಣೆಗೆ ಒಳಪಡಿಸಿದಾಗ ಮಗನ ಸೂಚನೆಯಂತೆ ಅಪರಿಚಿತನಿಂದ ಬ್ಯಾಗ್ ಪಡೆದು ಜೈಲಿಗೆ ತಂದಿದ್ದೇನೆ ಎಂದು ಹೇಳಿದ್ದಾರೆ. ಮಂಡ್ಯ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.