ಪೊಲೀಸ್ ವಸತಿಗೃಹದಲ್ಲಿ ಕಾನ್ಸ್ಟೇಬಲ್ ಪತ್ನಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೆ.ಆರ್.ಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ಪೊಲೀಸ್ ವಸತಿಗೃಹದಲ್ಲಿ ಕಾನ್ಸ್ಟೇಬಲ್ ಪತ್ನಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೆ.ಆರ್.ಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.ಎಚ್ಎಎಲ್ ಪೊಲೀಸ್ ಠಾಣೆಯಲ್ಲಿ ಪೊಲೀಸ್ ಕಾನ್ಸ್ಟೇಬಲ್ ಆಗಿ ಕಾರ್ಯನಿರ್ವಹಿಸುತ್ತಿರುವ ರಾಜೇಶ್ ಆರಾಧ್ಯ ಅವರ ಪತ್ನಿ ಲಕ್ಷ್ಮೀ ಪ್ರಿಯಾ (26) ಶುಕ್ರವಾರ ರಾತ್ರಿ ನೇಣು ಹಾಕಿಕೊಂಡಿದ್ದಾರೆ. ಈ ಸಂಬಂಧ ಲಕ್ಷ್ಮೀ ಪ್ರಿಯಾ ತಂದೆ ವರದಕ್ಷಿಣೆ ಕಿರುಕುಳದ ಆರೋಪ ಮಾಡಿ ನೀಡಿದ ದೂರಿನನ್ವಯ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. 3 ವರ್ಷದ ಹಿಂದೆ ಮದುವೆಯಾಗಿದ್ದ ಲಕ್ಷ್ಮೀಪ್ರಿಯಾ ಮತ್ತು ರಾಜೇಶ್ ಆರಾಧ್ಯ ಅವರಿಗೆ ಒಂದು ಮಗುವಿದೆ. ಅಕ್ರಮ ಸಂಬಂಧವಿದೆ ವಿಷಯಕ್ಕೆ ದಂಪತಿಯ ಜಗಳ ಮಾಡುತ್ತಿದ್ದರು. ಶುಕ್ರವಾರವು ಜಗಳವಾಗಿದ್ದು, ಮನನೊಂದ ಲಕ್ಷ್ಮೀ ಪ್ರಿಯಾ ಆತ್ಮಹತ್ಯೆಗೆ ಶರಣಾಗಿದ್ದಾರೆ. ಸ್ಥಳದಲ್ಲಿ ಯಾವುದೇ ಡೆತ್ನೋಟ್ ಪತ್ತೆಯಾಗಿಲ್ಲ. ವಿಚಾರಣೆ ವೇಳೆ ರಾಜೇಶ್ ಆರಾಧ್ಯ ವರದಕ್ಷಿಣೆ ಕಿರುಕುಳದ ಆರೋಪವನ್ನು ನಿರಾಕರಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ತಂದೆಯ ದೂರಿನಲ್ಲಿ ಏನಿದೆ?:ಲಕ್ಷ್ಮೀ ಪ್ರಿಯಾ ಅವರ ವಿವಾಹವನ್ನು ಮೂರು ವರ್ಷಗಳ ಹಿಂದೆ ರಾಜೇಶ್ ಆರಾಧ್ಯ ಎಂಬುವರೊಂದಿಗೆ ನೆರವೇರಿಸಲಾಗಿತ್ತು. ವಿವಾಹದ ನಂತರ ರಾಜೇಶ್ ಆರಾಧ್ಯ ಹಾಗೂ ಅವರ ತಂದೆ-ತಾಯಿ ನನ್ನ ಮಗಳಿಗೆ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡುತ್ತಿದ್ದರು. ಮಗಳು ಮಗುವಿಗೆ ಜನ್ಮ ನೀಡಿದ ಮೇಲೆ 6 ತಿಂಗಳ ಕಾಲ ನಮ್ಮ ಮನೆಯಲ್ಲಿದ್ದರು. ಮೇ 22 ರಂದು ಮಧ್ಯಾಹ್ನ 2.30 ರ ಸುಮಾರಿಗೆ ನನ್ನ ಚಿಕ್ಕ ಮಗಳಾದ ಜಯಶ್ರೀ ಅವರಿಗೆ ಲಕ್ಷ್ಮೀ ಪ್ರಿಯಾ ವಾಟ್ಸ್ಆ್ಯಪ್ ಮೂಲಕ ತಮ್ಮ ಮೊಬೈಲ್ ಪಾಸ್ ವರ್ಡ್ ಕಳುಹಿಸಿದ್ದರು. ತಕ್ಷಣ ನಾನು ಲಕ್ಷ್ಮೀ ಪ್ರಿಯಾಗೆ ಕರೆ ಮಾಡಿದಾಗ ಆಕೆ ಕರೆ ಸ್ವೀಕರಿಸುವುದಿಲ್ಲ. ನಂತರ ನಾನು ರಾಜೇಶ್ ಆರಾಧ್ಯಗೆ ಕರೆ ಮಾಡಿದಾಗ, ಲಕ್ಷ್ಮೀ ಪ್ರಿಯಾ ಅವರು ಮೃತಪಟ್ಟಿರುವುದಾಗಿ ತಿಳಿಸಿದರು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.