ರಾಜ್ಯದಲ್ಲಿ ಸೈಬರ್ ಅಪರಾಧ ಕೃತ್ಯಗಳು ಹಾಗೂ ಮಾದಕ ವಸ್ತು ಮಾರಾಟ ಜಾಲದ ವಿರುದ್ಧ ಕಾರ್ಯಾಚರಣೆ ವಿಧಾನ ಕುರಿತು ಹದಿನೈದು ದಿನಗಳಲ್ಲಿ ನೀಲ ನಕ್ಷೆ ರೂಪಿಸುವಂತೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ರಾಜ್ಯದಲ್ಲಿ ಸೈಬರ್ ಅಪರಾಧ ಕೃತ್ಯಗಳು ಹಾಗೂ ಮಾದಕ ವಸ್ತು ಮಾರಾಟ ಜಾಲದ ವಿರುದ್ಧ ಕಾರ್ಯಾಚರಣೆ ವಿಧಾನ ಕುರಿತು ಹದಿನೈದು ದಿನಗಳಲ್ಲಿ ನೀಲ ನಕ್ಷೆ ರೂಪಿಸುವಂತೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.ನಗರದ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಎಸಿಪಿ ಮೇಲ್ಮಟ್ಟದ ಅಧಿಕಾರಿಗಳ ಜತೆ ಬುಧವಾರ ಸುದೀರ್ಘವಾಗಿ ಮೂರು ತಾಸುಗಳು ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ತಂತ್ರಜ್ಞಾನ ಬಳಕೆ ಹೆಚ್ಚಾದಂತೆ ಸೈಬರ್ ಅಪರಾಧವೂ ಬೆಳೆಯುತ್ತಿದೆ. ಇದರ ನಿಯಂತ್ರಣಕ್ಕೆ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಅದನ್ನು ಮತ್ತಷ್ಟು ಹೆಚ್ಚಿಸುವ ನಿಟ್ಟಿನಲ್ಲಿ ಯೋಜಿಸಲಾಗುತ್ತದೆ. ಇದಕ್ಕೆ ಖಾಸಗಿ ಸಹಭಾಗಿತ್ವ ಸಹ ಪಡೆಯಲಾಗುತ್ತದೆ ಎಂದು ಸಚಿವರು ತಿಳಿಸಿದರು.
ಸೈಬರ್ ಅಪರಾಧ ಕೃತ್ಯಗಳ ನಿಯಂತ್ರಣ ಹಾಗೂ ಡ್ರಗ್ಸ್ ವಿರುದ್ಧ ಹೊಸ ನೀತಿ ರೂಪಿಸುವ ಬಗ್ಗೆ ಸಹ ಪ್ರಸ್ತಾಪಿಸಲಾಗಿದ್ದು, ಈ ಸಂಬಂಧ ಅಧಿಕಾರಿಗಳ ಜತೆ ಸಮಾಲೋಚಿಸಿದ್ದೇನೆ. ನಾನೇ ಐಟಿ-ಬಿಟಿ, ಇ-ಆಡಳಿತ ಹಾಗೂ ಗೃಹ ಇಲಾಖೆಗಳ ಮಂತ್ರಿ ಆಗಿದ್ದೇನೆ. ಹೀಗಾಗಿ ಸೈಬರ್ ಕ್ರೈಂ ನಿಯಂತ್ರಣಕ್ಕೆ ಆ ಇಲಾಖೆಗಳ ಒಟ್ಟಾಗಿ ಕೆಲಸ ಮಾಡಿಸುತ್ತೇನೆ ಎಂದರು.ಅದೇ ರೀತಿ ಡ್ರಗ್ಸ್ ಮಾರಾಟ ನಿರ್ಮೂಲನೆ ಕಾರ್ಯಾಚರಣೆಯನ್ನೂ ಚುರುಕುಗೊಳಿಸಲಾಗುತ್ತದೆ. ರಾಜ್ಯಕ್ಕೆ ಮಹಾರಾಷ್ಟ್ರ, ಕೇರಳ ಹಾಗೂ ಆಂಧ್ರಪ್ರದೇಶ ಸೇರಿದಂತೆ ಹೊರ ರಾಜ್ಯಗಳಿಂದ ಡ್ರಗ್ಸ್ ಸಾಗಣೆ ಆಗುತ್ತಿರುವುದು ಪತ್ತೆಯಾಗಿದೆ. ಹೀಗಾಗಿ ನೆರೆಹೊರೆ ರಾಜ್ಯಗಳಲ್ಲಿ ಡ್ರಗ್ಸ್ ವಿರುದ್ಧ ಕಾರ್ಯಾಚರಣೆ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತದೆ. ಹೊರ ರಾಜ್ಯಗಳ ಪೊಲೀಸರ ಸಮನ್ವಯತೆ ಸಾಧಿಸಿ ಡ್ರಗ್ಸ್ ಮಾರಾಟ ಜಾಲ ಕಡಿವಾಣ ಹಾಕಲಾಗುತ್ತದೆ ಎಂದು ಮಾಹಿತಿ ನೀಡಿದರು.
ರೌಡಿಗಳ ಸಂಗ ಮಾಡಿದರೆ ಕ್ರಮ: ಸಚಿವರೌಡಿಗಳ ಜತೆ ಪೊಲೀಸರು ಹುಟ್ಟುಹಬ್ಬ ಆಚರಣೆ ಹಾಗೂ ಪಾರ್ಟಿ ಮಾಡಿದರೆ ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಎಚ್ಚರಿಕೆ ನೀಡಿದ್ದಾರೆ. ರಾಜ್ಯದಲ್ಲಿ ಕೆಲ ಕಡೆ ರೌಡಿಗಳ ಹುಟ್ಟು ಆಚರಣೆಗೆ ಹೋಗುವುದು, ಅವರ ಮನೆಗೆ ಊಟಕ್ಕೆ ಹೋಗುವುದು, ಸೆಲ್ಫಿ ತೆಗೆದುಕೊಳ್ಳುವುದು ಕೆಳ ಹಂತದಲ್ಲಿ ನಡೆಯುತ್ತಿದೆ. ಇವೆಲ್ಲ ನಿಲ್ಲಿಸುವಂತೆ ಸ್ಪಷ್ಟವಾಗಿ ಸೂಚಿಸಿದ್ದೇನೆ ಎಂದು ಹೇಳಿದರು. ರೌಡಿಗಳ ಸಂಗ ಮಾಡುವ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಬೇಕು. ಕಾನೂನು ರಕ್ಷಿಸುವ ಪೊಲೀಸರೇ ರೌಡಿಗಳ ಜತೆ ಸ್ನೇಹ ಮಾಡುವುದು ಸರಿಯಲ್ಲ ಎಂದು ಸಚಿವರು ಮಾರ್ಮಿಕವಾಗಿ ನುಡಿದರು.