ಕನ್ನಡಪ್ರಭ ವಾರ್ತೆ ಮದ್ದೂರು

ಕಸಾಯಿ ಖಾನೆಗೆ ಗೋವು ಸಾಗಾಣಿಕೆ ಮಾಡುತ್ತಿದ್ದ ಗೂಡ್ಸ್ ಟೆಂಪೋವನ್ನು ಗೋ ಸಮೇತ ಹಿಂದೂಪರ ಸಂಘಟನೆ ಕಾರ್ಯಕರ್ತರು ಪೊಲೀಸರ ವಶಕ್ಕೆ ಒಪ್ಪಿಸಿರುವ ಘಟನೆ ಶನಿವಾರ ರಾತ್ರಿ ಪಟ್ಟಣದಲ್ಲಿ ಜರುಗಿದೆ.

ಪ್ರಕರಣದ ಸಂಬಂಧ ಮದ್ದೂರು ಮುಸ್ಲಿಂ ಬ್ಲಾಕ್‌ನ ಒಂದನೇ ಕ್ರಾಸ್ ನಿವಾಸಿ ನಾಜೀರ್ ಹಾಗೂ ಮಳವಳ್ಳಿ ತಾಲೂಕು ಶಿವನಸಮುದ್ರದ ಮಲ್ಲಿಕ್ಯಾತನಹಳ್ಳಿ ಶ್ರೀಕಂಠ ಅಲಿಯಾಸ್ ಭಕ್ತ ಬಂಧಿತ ಆರೋಪಿಗಳು.

ಬಂಧಿತರ ವಿರುದ್ಧ ಜಾನುವಾರ ಹತ್ಯೆ ಪ್ರತಿಬಂಧಕ ಮತ್ತು ಸುರಕ್ಷಾದ ಕಾಯ್ದೆ ಕಲಂ 192 ಅನ್ವಯ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ. ಶಿವನಸಮುದ್ರದಿಂದ ಮದ್ದೂರು ರಾಮ್ ರಹೀಮ್ ನಗರ ಬಡಾವಣೆ ಕಸಾಯಿ ಖಾನೆಗೆ ಟೆಂಪೋದಲ್ಲಿ ಗೋ ಸಾಗಾಣಿಕೆ ಮಾಡಲಾಗುತ್ತಿದೆ ಎಂಬ ಮಾಹಿತಿ ಮೇರೆಗೆ ಹಿಂದೂಪರ ಸಂಘಟನೆ ಸಚಿನ್, ಕದಲೂರು ನವೀನ, ಯೋಗಾನಂದ, ವೀರಭದ್ರ ಸ್ವಾಮಿ ಸೇರಿದಂತೆ ಹಲವು ಕಾರ್ಯಕರ್ತರು ಹಳೇ ಎಂಸಿ .ರಸ್ತೆಯ ಕೆನರಾ ಬ್ಯಾಂಕ್‌ನ ಬಾಬು ಬೀಡಾ ಅಂಗಡಿ ಬಳಿ ದಾಳಿ ನಡೆಸಿ ಗೋ ರಕ್ಷಣೆ ಮಾಡಿದ್ದಾರೆ.

ಪೊಲೀಸರ ವಶಕ್ಕೆ ಪಡೆದ ಗೋವನ್ನು ಪೊಲೀಸರ ಅನುಮತಿ ಮೇರೆಗೆ ಮೈಸೂರಿನ ಪಿಂಜರಾ ಪೋಲ್ ವಶಕ್ಕೆ ನೀಡಲಾಗಿದೆ. ಬಂಧಿತ ಆರೋಪಿಗಳನ್ನು ನ್ಯಾಯಾಲಯದ ಮುಂದೆ ಹಾಜರ್ ಪಡಿಸಿದ ನಂತರ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.ಪಂಚಪಾದದ ಬಸವ ಅನಾರೋಗ್ಯದಿಂದ ಸಾವು


ಕೆ.ಆರ್.ಪೇಟೆ:ತಾಲೂಕಿನ ಬೆಡದಹಳ್ಳಿ ಕೊರಟೀಕೆರೆ ಗೇಟ್ ಬಳಿ ಇರುವ ಶ್ರೀಪಂಚಭೂತೇಶ್ವರ ಸುಕ್ಷೇತ್ರದ ಪಂಚಪಾದದ ಬಸವ ಅನಾರೋಗ್ಯದಿಂದ ಸಾವನಪ್ಪಿದೆ.ಹುಣಸೂರು ತಾಲೂಕು ದೇವರೂರು ಮಹಾ ಸಂಸ್ಥಾನದ ಕೊತ್ತೆಗಾಲದಲ್ಲಿ ಕಳೆದ 13 ಹಿಂದೆ ಹುಟ್ಟಿದ ಸುಮಾರು 3 ತಿಂಗಳ ಐದು ಕಾಲುಗಳಿರುವ ಗಂಡು ಕರುವನ್ನು ಡಾ.ಮಾದೇಶ್ ಗುರೂಜಿ ಅಣತಿಯಂತೆ ತಾಲೂಕಿನ ಬೆಡದಹಳ್ಳಿ ಪಂಚಭೂತೇಶ್ವರ ಸುಕ್ಷೇತ್ರಕ್ಕೆ ಕರೆ ತಂದು ಬೆಳಸಲಾಗಿತ್ತು.

ದಿನ ಕಳೆದಂತೆ ಬೆಳೆದ ಕರು ಕ್ಷೇತ್ರದಲ್ಲಿ ಪಂಚಪಾದ ಬಸವನಾಗಿ ಕೀರ್ತಿಗಳಿಸಿತ್ತು. ಕ್ಷೇತ್ರಕ್ಕೆ ಭೇಟಿ ನೀಡಿದ ಭಕ್ತರು ಬಸವಣ್ಣನನ್ನು ನೋಡಿ ಕಣ್ತುಂಬಿಕೊಂಡು ನಮಸ್ಕರಿಸಿ ಹೋಗುತ್ತಿದ್ದರು. ಕ್ಷೇತ್ರದಲ್ಲಿ ನಿತ್ಯ ನಡೆಯುತ್ತಿದ್ದ ದಾಸೋಹದಲ್ಲಿ ಮೊದಲು ಬಸವಣ್ಣನಿಗೆ ಪ್ರಸಾದ ನೀಡಿದ ನಂತರ ಭಕ್ತರಿಗೆ ಉಣ ಬಡಿಸುತ್ತಿದ್ದುದು ವಿಶೇಷವಾಗಿತ್ತು.ಕಳೆದ ಒಂದು ವಾರದಿಂದ ಅನಾರೋಗ್ಯ ತುತ್ತಾಗಿದ್ದ ಬಸವಣ್ಣನಿಗೆ ನಿತ್ಯ ಚಿಕಿತ್ಸೆ ನೀಡಿದರೂ ಪ್ರಯೋಜನಾಗಲಿಲ್ಲ. ಚಿಕಿತ್ಸೆ ಫಲಕಾರಿಯಾಗದೇ ಇಹ ಲೋಕ ತ್ಯಜಿಸಿದೆ. ಸದ್ಗುರು ಡಾ.ಮಾದೇಶ್ ಗುರೂಜಿಯವರ ಮಾರ್ಗದರ್ಶನದಲ್ಲಿ ಕ್ಷೇತ್ರದ ಪೀಠಾಧ್ಯಕ್ಷರಾದ ರುದ್ರಮುನಿ ಸ್ವಾಮೀಜಿಯವರು ಅಂತಿಮ ವಿಧಿವಿಧಾನಗಳನ್ನು ಪೂರೈಸಿದ ಬಳಿಕ ಕ್ಷೇತ್ರದ ಆವರಣದಲ್ಲಿ ಅಂತ್ಯ ಸಂಸ್ಕಾರ ನಡೆಸಲಾಯಿತು. ಹಲವಾರು ಭಕ್ತರು ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದರು.