ಸಾರಾಂಶ
ಪುಣೆ: ಇಲ್ಲಿನ ಬಾರ್ನಲ್ಲಿ ಮದ್ಯ ಸೇವಿಸಿ ಪೋರ್ಷೆ ಕಾರಿನಿಂದ ಹೊಡೆದು ಇಬ್ಬರನ್ನು ಕೊಂದ 17 ವರ್ಷದ ಬಾಲಕನಿಗೆ ನೀಡಲಾಗಿದ್ದ ಜಾಮೀನನ್ನು ಬಾಲನ್ಯಾಯ ಮಂಡಳಿ ಬುಧವಾರ ರದ್ದುಗೊಳಿಸಿದೆ. ಈತನನ್ನು ಜೂ.5ರವರೆಗೆ ಮಕ್ಕಳ ನಿಗಾ ಕೇಂದ್ರಕ್ಕೆ ಕಳುಹಿಸಬೇಕು ಎಂದು ಅದು ಸೂಚಿಸಿದೆ.ಈತನನ್ನು ಕೋರ್ಟ್ ಇತ್ತೀಚೆಗೆ ಜಾಮೀನು ಮೇಲೆ ಬಿಡುಗಡೆ ಮಾಡಿದ್ದು ಆಕ್ರೋಶಕ್ಕೆ ಕಾರಣವಾಗಿತ್ತು. ಇದಾದ ಕೆಲವು ದಿನದಲ್ಲಿ ಜಾಮೀನು ರದ್ದಾಗಿದೆ.
ಈತ ಜಾಮೀನು ಮೇಲೆ ಇರುವುದು ಸುರಕ್ಷಿತವಲ್ಲ. ಏಕೆಂದರೆ ಈತನ ಮೇಲೆ ಜನರು ದಾಳಿ ನಡೆಸಬಹುದು. ಹೀಗಾಗಿ ತಮ್ಮ ವಶಕ್ಕೆ ನೀಡಿ. ಅಲ್ಲಿ ಸುರಕ್ಷಿತವಾಗಿರುತ್ತಾನೆ ಎಂದು ಪೊಲೀಸರು ವಾದ ಮಂಡಿಸಿದರು.
ಆದರೆ ಇದನ್ನು ವಿರೋಧಿಸಿದ ಬಾಲಕನ ಪರ ವಕೀಲರು, ‘ಬಾಲಕ ಖಿನ್ನನಾಗಿದ್ದಾನೆ. ಅದಕ್ಕೇ ಕುಡಿವ ಚಟ ಅಂಟಿಸಿಕೊಂಡಿದ್ದ. ಹೀಗಾಗಿ ತಾಯಿಯ ಬಳಿ ಇರುವುದು ಉತ್ತಮ. ಪೊಲೀಸ್ ವಶಕ್ಕೆ ಕೊಟ್ಟರೆ ಮತ್ತಷ್ಟು ಖಿನ್ನನಾಗುತ್ತಾನೆ’ ಎಂದರು. ಕೊನೆಗೆ ಕೋರ್ಟು ಈತನನ್ನು ಮಕ್ಕಳ ನಿಗಾ ಕೇಂದ್ರಕ್ಕೆ ಕಳಿಸಲು ಆದೇಶಿಸಿದೆ.
ಈ ಮುನ್ನ ಕೋರ್ಟು ಈತನಿಗೆ ಅಪಘಾತದ ಬಗ್ಗೆ 300 ಪದದ ಪ್ರಬಂಧ ಬರೆವ ‘ಶಿಕ್ಷೆ’ ನೀಡಿ ಜಾಮೀನು ಕೊಟ್ಟಿತ್ತು. ಕೋರ್ಟ್ನ ಈ ಆದೇಶ ಆಕ್ರೋಶಕ್ಕೆ ಕಾರಣವಾಗಿತ್ತು.