ಹೆಸರು ಕೈಬಿಡಲು 55 ಲಕ್ಷ ರು.ಲಂಚ: ಸಿಸಿಬಿ ಪೇದೆ ಸಸ್ಪೆಂಡ್‌

| Published : Jul 13 2024, 01:37 AM IST / Updated: Jul 13 2024, 06:35 AM IST

ಹೆಸರು ಕೈಬಿಡಲು 55 ಲಕ್ಷ ರು.ಲಂಚ: ಸಿಸಿಬಿ ಪೇದೆ ಸಸ್ಪೆಂಡ್‌
Share this Article
  • FB
  • TW
  • Linkdin
  • Email

ಸಾರಾಂಶ

ಬೆಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಅಕ್ರಮ ಭೂ ವ್ಯವಹಾರ ಪ್ರಕರಣದಲ್ಲಿ ಕೆಲ ಆರೋಪಿಗಳ ಹೆಸರು ಕೈಬಿಡಲು ₹55 ಲಕ್ಷ ಲಂಚ ಪಡೆದ ಆರೋಪದಡಿ ಸಿಸಿಬಿ ಹೆಡ್‌ಕಾನ್‌ಸ್ಟೇಬಲ್‌ವೊಬ್ಬರನ್ನು ಸೇವೆಯಿಂದ ಅಮಾನತುಗೊಳಿಸಿರುವುದು.

 ಬೆಂಗಳೂರು ::  ಬೆಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಅಕ್ರಮ ಭೂ ವ್ಯವಹಾರ ಪ್ರಕರಣದಲ್ಲಿ ಕೆಲ ಆರೋಪಿಗಳ ಹೆಸರು ಕೈಬಿಡಲು ₹55 ಲಕ್ಷ ಲಂಚ ಪಡೆದ ಆರೋಪದಡಿ ಸಿಸಿಬಿ ಹೆಡ್‌ಕಾನ್‌ಸ್ಟೇಬಲ್‌ವೊಬ್ಬರನ್ನು ಸೇವೆಯಿಂದ ಅಮಾನತುಗೊಳಿಸಿ ನಗರದ ಹೆಚ್ಚುವರಿ ಪೊಲೀಸ್‌ ಆಯುಕ್ತ (ಅಪರಾಧ) ಡಾ। ಚಂದ್ರಗುಪ್ತ ಆದೇಶಿಸಿದ್ದಾರೆ.

ಹೆಡ್‌ ಕಾನ್‌ಸ್ಟೇಬಲ್ ಯತೀಶ್ ಅಮಾನತುಗೊಂಡಿದ್ದು, ಈ ಬಗ್ಗೆ ಕರ್ತವ್ಯಲೋಪದ ಆರೋಪ ಸಂಬಂಧ ಸಿಸಿಬಿ ಡಿಸಿಪಿ ನೀಡಿದ ವರದಿ ಆಧರಿಸಿ ಹೆಚ್ಚುವರಿ ಆಯುಕ್ತರು ಅಮಾನತುಗೊಳಿಸಿದ್ದಾರೆ. ಈ ಬಗ್ಗೆ ಇಲಾಖಾ ಮಟ್ಟದ ವಿಚಾರಣೆಗೆ ಸಹ ಅವರು ಸೂಚಿಸಿದ್ದಾರೆ.

ಎರಡು ವರ್ಷಗಳ ಹಿಂದೆ ಅಕ್ರಮ ಭೂ ಅವ್ಯವಹಾರ ಸಂಬಂಧ ಶೇಷಾದ್ರಿಪುರ ಪೊಲೀಸ್ ಠಾಣೆಯಲ್ಲಿ ಬಿಡಿಎ ಅಧಿಕಾರಿಗಳು ಹಾಗೂ ದಲ್ಲಾಳಿಗಳ ವಿರುದ್ಧ ಪ್ರಕರಣಗಳು ದಾಖಲಾಗಿದ್ದವು. ಈ ಪ್ರಕರಣದ ತನಿಖೆ ಸಿಸಿಬಿ ನಡೆಸಿತ್ತು. ಆ ಪ್ರಕರಣದ ಕೆಲ ಆರೋಪಿಗಳಿಂದ ಹಣ ಪಡೆದು ದೋಷಾರೋಪ ಪಟ್ಟಿಯಲ್ಲಿ ಹೆಸರು ಕೈ ಬಿಡಲು ಯತೀಶ್‌ ಯತ್ನಿಸಿದ್ದ ಆರೋಪ ಕೇಳಿ ಬಂದಿತ್ತು. ಈ ಕೃತ್ಯದ ಮಾಹಿತಿ ಪಡೆದ ಸಿಸಿಬಿ ಡಿಸಿಪಿ, ಕೂಡಲೇ ಹೆಚ್ಚುವರಿ ಆಯುಕ್ತರ ಗಮನಕ್ಕೆ ತಂದಿದ್ದರು.

ಆಗ ಆಂತರಿಕ ಮಟ್ಟದ ವಿಚಾರಣೆ ನಡೆಸಿ ವರದಿ ನೀಡುವಂತೆ ಡಿಸಿಪಿಗೆ ಹೆಚ್ಚುವರಿ ಆಯುಕ್ತರು ಸೂಚಿಸಿದ್ದರು. ಅದರಂತೆ ಪ್ರಕರಣದ ತನಿಖಾಧಿಕಾರಿ ಸೇರಿದಂತೆ ಕೆಲ ಅಧಿಕಾರಿಗಳಿಂದ ವಿವರಣೆ ಪಡೆದ ಡಿಸಿಪಿ, ಹಣ ಪಡೆದು ಆರೋಪಿಗಳ ಪರವಾಗಿ ಯತೀಶ್ ಯತ್ನಿಸಿರುವುದು ಖಚಿತವಾಯಿತು. ಈ ಮಾಹಿತಿ ಮೇರೆಗೆ ಹೆಚ್ಚುವರಿ ಆಯುಕ್ತರಿಗೆ ಶಿಸ್ತು ಕ್ರಮಕ್ಕೆ ಶಿಫಾರಸು ಮಾಡಿದರು. ಅದರಂತೆ ಯತೀಶ್ ತಲೆದಂಡವಾಗಿದೆ ಎಂದು ಸಿಸಿಬಿ ಮೂಲಗಳು ತಿಳಿಸಿವೆ.