ಜಮೀನಿಗೆ ತೆರಳಿದ್ದ ಯುವಕನನ್ನು ದುಷ್ಕರ್ಮಿಗಳು ಕುಡುಗೋಲಿನಿಂದ ಕೊಲೆ ಮಾಡಿರುವ ಘಟನೆ ಪಾಂಡವಪುರ ತಾಲೂಕು ಕಟ್ಟೇರಿ ಗ್ರಾಮದ ಕೋಳಿ ಭಾವಿ ದೇವಸ್ಥಾನ ಬಳಿಯ ದುದ್ದಘಟ್ಟದಲ್ಲಿ ನಡೆದಿದೆ. ಕೆಆರ್ಎಸ್ ಪೊಲೀಸ್ ಠಾಣಾ ವ್ಯಾಪ್ತಿಯ ಕಟ್ಟೇರಿ ಗ್ರಾಮದ ವಿಶ್ವೇಶ್ವರ ಅವರ ಪುತ್ರ ನವೀನ್ ಕುಮಾರ್ ಕೊಲೆಯಾದವರು.
ಶ್ರೀರಂಗಪಟ್ಟಣ:
ಜಮೀನಿಗೆ ತೆರಳಿದ್ದ ಯುವಕನನ್ನು ದುಷ್ಕರ್ಮಿಗಳು ಕುಡುಗೋಲಿನಿಂದ ಕೊಲೆ ಮಾಡಿರುವ ಘಟನೆ ಪಾಂಡವಪುರ ತಾಲೂಕು ಕಟ್ಟೇರಿ ಗ್ರಾಮದ ಕೋಳಿ ಭಾವಿ ದೇವಸ್ಥಾನ ಬಳಿಯ ದುದ್ದಘಟ್ಟದಲ್ಲಿ ನಡೆದಿದೆ. ತಾಲೂಕಿನ ಕೆಆರ್ಎಸ್ ಪೊಲೀಸ್ ಠಾಣಾ ವ್ಯಾಪ್ತಿಯ ಕಟ್ಟೇರಿ ಗ್ರಾಮದ ವಿಶ್ವೇಶ್ವರ ಅವರ ಪುತ್ರ ನವೀನ್ ಕುಮಾರ್(30) ಕೊಲೆಯಾದವರು.ಮೃತ ನವೀನ್ಕುಮಾರ್ ಎಷ್ಟು ಹೊತ್ತಾದರೂ ಮನೆಗೆ ಬಾರದ ಹಿನ್ನೆಲೆಯಲ್ಲಿ ತಂದೆ ವಿಶ್ವೇಶ್ವರ ಹುಡುಕಾಟ ನಡೆಸಿದ ವೇಳೆ ಜಮೀನಿನ ಸಮೀಪದಲ್ಲೇ ಸ್ಕೂಟರ್ ಮಾತ್ರ ನಿಂತಿದ್ದು, ನವೀನ್ಕುಮಾರ್ ಕಾಣಿಸಿರಲಿಲ್ಲ. ನಂತರ ಹುಡುಕಾಟ ನಡೆಸಿದಾಗ ಚಿಕ್ಕದೇವರಾಯ ನಾಲೆ, ಜಮೀನಿನ ಬಳಿಯ ಹುಲ್ಲಿನ ಮೇಲೆ ರಕ್ತದ ಗುರುತು ಕಂಡ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಮಾಹಿತಿ ಮೇರೆಗೆ ಸ್ಥಳಕ್ಕೆ ಕೆಆರ್ಸಾಗರ ಪೊಲೀಸ್ ಠಾಣೆ ವೃತ್ತ ನಿರೀಕ್ಷಕ ವಿವೇಕನಂದಾ ಮತ್ತು ಪಿಎಸ್ಐ ಜಗದೀಶ್ ಧೂಳ್ ಶೆಟ್ಟರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ನಂತರ ನಾಲೆ ನೀರು ಕಡಿಮೆ ಮಾಡಿಸಿ ನಾಲೆಯಲ್ಲಿ ಹುಡುಕಾಟ ನಡೆಸಿದಾಗ ಸೀತಾಪುರದ ಬಳಿ ನಾಲೆಯಲ್ಲಿ ನವೀನ್ ಕುಮಾರ್ ಮೃತದೇಹ ಪತ್ತೆಯಾಗಿದೆ. ತಲೆ, ಕಿವಿ, ಕೈಗೆ ಕುಡುಗೊಲಿನಿಂದ ಹೊಡೆದ ಗುರುತುಗಳು ಕಂಡು ಬಂದಿದ್ದು, ಕಿಡಿಗೇಡಿಗಳು ಕೊಲೆ ಮಾಡಿ ನಾಲೆಗೆ ಎಸೆದು ಪರಾರಿಯಾಗಿರುವುದಾಗಿ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ಕೊಲೆಯಾದ ನವೀನ್ ಸಹೋದರ ಗಿರೀಶ್ ಪೊಲೀಸರಿಗೆ ದೂರು ನೀಡಿ, ನನ್ನ ಅಣ್ಣ ನವೀನ್ ಜಮೀನಿನ ಬಳಿ ಹೋದಾಗ ಚೆಲುವರಾಜು ಮತ್ತು ಕಾಂತರಾಜು ಎಂಬುವವರು ಹುಲ್ಲು ಕುಯ್ಯುತ್ತಿದ್ದುದ್ದನ್ನು ಕಂಡು ಪ್ರಶ್ನೆ ಮಾಡಿದ್ದಕ್ಕೆ ಕುಡುಗೊಲಿನಿಂದ ಕೊಚ್ಚಿ ಕೊಲೆ ಮಾಡಿ ಚಿಕ್ಕದೇವರಾಯ ನಾಲೆಗೆ ಎಸೆದು ಪರಾರಿಯಾಗಿದ್ದಾರೆ ಎಂದು ಆರೋಪಿಸಿದ್ದಾರೆ.ಈ ಹಿಂದೆಯು ಸಹ ಗದ್ದೆ ತೆವರಿ ಮತ್ತು ನಮ್ಮ ಜಮೀನಿನಲ್ಲಿ ಕದ್ದು ಹುಲ್ಲು ಕುಯ್ಯುತ್ತಿದ್ದ ವಿಷಯವಾಗಿ ಕಟ್ಟೇರಿ ಗ್ರಾಮಸ್ಥರು ಸೇರಿ ಎರಡು ಬಾರಿ ನ್ಯಾಯ ಮಾಡಿ ಸಮಾಧಾನ ಮಾಡಿದ್ದರು. ಅಲ್ಲದೇ, ಕಾಂತರಾಜು ಒಂದು ಕೊಲೆ ಪ್ರಕರಣದಲ್ಲಿ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದು, ಇವರಿಬ್ಬರೇ ನನ್ನ ಅಣ್ಣ ನವೀನ್ ಕುಮಾರ್ ನನ್ನು ಕೊಲೆ ಮಾಡಿರುವುದಾಗಿ ಕೆಆರ್ ಎಸ್ ಠಾಣೆಗೆ ದೂರು ನೀಡಿದ್ದಾರೆ.
ಪ್ರಕರಣ ದಾಖಲಿಸಿಕೊಂಡ ಪೋಲಿಸರು ತನಿಖೆ ಕೈಗೊಂಡಿದ್ದಾರೆ. ಕೃತ್ಯ ನಡೆದ ಸ್ಥಳಕ್ಕೆ ಎಸ್ಪಿ ಶೋಭಾರಾಣಿ, ಶ್ರೀರಂಗಪಟ್ಟಣ ಡಿವೈಎಸ್ಪಿ ಕೃಷ್ಣಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.