ಸಾರಾಂಶ
ಬೆಂಗಳೂರು : ಇತ್ತೀಚೆಗೆ ಜಿವನಹಳ್ಳಿ ರೈಲ್ವೆ ಹಳಿ ಬಳಿ ನಡೆದಿದ್ದ ವಿಘ್ನೇಶ್ ಅಲಿಯಾಸ್ ಅಪ್ಪು(34) ಎಂಬಾತನ ಕೊಲೆ ಪ್ರಕರಣ ಸಂಬಂಧ ನಾಲ್ವರು ಆರೋಪಿಗಳನ್ನು ಪುಲಕೇಶಿನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಜೀವನಹಳ್ಳಿಯ ಅರುಣ್ ಕುಮಾರ್, ಜಾನ್ ಜಾಕೋಬ್ ಆ್ಯಂಡ್ರೋ, ಪ್ರಶಾಂತ್, ಸಂಜೀವ್ ಬಂಧಿತರು. ಆರೋಪಿಗಳು ಜೂ.29ರಂದು ರಾತ್ರಿ ಜೀವನಹಳ್ಳಿ ರೈಲ್ವೆ ಹಳಿ ಬಳಿ ಕುರುಬರಹಳ್ಳಿ ನಿವಾಸಿ ವಿಘ್ನೇಶ್ ಎಂಬಾತನ ಮೇಲೆ ಚಾಕುವಿನಿಂದ ಇರಿದು ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿ ಪರಾರಿ ಆಗಿದ್ದರು. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ತನಿಖೆ ಕೈಗೊಂಡು ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೊಲೆಯಾದ ಅಪ್ಪು ಈ ಹಿಂದೆ ಜೀವನಹಳ್ಳಿ ಕೊಳಗೇರಿಯಲ್ಲಿ ನೆಲೆಸಿದ್ದ. ಏರಿಯಾದಲ್ಲಿ ಪ್ರಾಬಲ್ಯ ಸಾಧಿಸಲು ಏರಿಯಾದ ಹುಡುಗರ ಮೇಲೆ ವಿನಾಕಾರಣ ಹಲ್ಲೆ ಮಾಡುತ್ತಿದ್ದ. ಅದರಂತೆ ಇತ್ತೀಚೆಗೆ ಆರೋಪಿಗಳಾದ ಅರುಣ್ ಕುಮಾರ್ ಮತ್ತು ಜಾನ್ ಜಾಕೋಬ್ ಮೇಲೆ ಹಲ್ಲೆ ಮಾಡಿದ್ದ. ಸುಖಾಸುಮ್ಮನೆ ತಮ್ಮ ಹಲ್ಲೆ ಮಾಡಿದ್ದಕ್ಕೆ ಅರುಣ್ ಮತ್ತು ಜಾನ್ ಕೋಪಗೊಂಡಿದ್ದರು. ಅಪ್ಪು ಮೇಲೆ ದ್ವೇಷ ಸಾಧಿಸುತ್ತಿದ್ದರು. ಕೊಲೆಯಾದ ಅಪ್ಪು ವಿರುದ್ಧ ಈ ಹಿಂದೆ ಪುಲಕೇಶಿನಗರ ಠಾಣೆ ಪೊಲೀಸರು ಮಾದಕವಸ್ತು ಮಾರಾಟದ ಆರೋಪದಡಿ ಎನ್ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದರು.ಅವನದೇ ಚಾಕು ಕಿತ್ತು ಇರಿತ
ಅಪ್ಪು ಜೀವನಹಳ್ಳಿ ಕೊಳಗೇರಿಯಿಂದ ಕುರುಬರಹಳ್ಳಿಗೆ ತನ್ನ ವಾಸ್ತವ್ಯ ಬದಲಿಸಿದ್ದ. ಕಳೆದ ಶನಿವಾರ ಮಧ್ಯಾಹ್ನ ಜೀವನಹಳ್ಳಿಗೆ ಬಂದಿದ್ದ ಅಪ್ಪು ಮತ್ತೆ ಅರುಣ್ ಮತ್ತು ಜಾನ್ ಜತೆಗೆ ಕಿರಿಕ್ ತೆಗೆದು ಗಲಾಟೆ ಮಾಡಿ ಹೋಗಿದ್ದ. ರಾತ್ರಿ ಮತ್ತೆ ಜೀವನಹಳ್ಳಿಯ ರೈಲ್ವೆ ಹಳಿ ಬಳಿ ಬಂದಿದ್ದ ಅಪ್ಪು, ಅರುಣ್, ಜಾನ್ ಸೇರಿ ನಾಲ್ವರು ಆರೋಪಿಗಳ ಜತೆಗೆ ಗಲಾಟೆ ಮಾಡಿದ್ದ. ಇದರಿಂದ ಕೆರಳಿದ ಆರೋಪಿಗಳು ಅಪ್ಪು ಬಳಿ ಇದ್ದ ಚಾಕುವನ್ನೇ ಕಿತ್ತುಕೊಂಡು ಹೊಟ್ಟೆ, ಎದೆ ಭಾಗಕ್ಕೆ ಹಲವು ಬಾರಿ ಇರಿದ್ದರು. ಅಷ್ಟಕ್ಕೆ ಸುಮ್ಮನಾಗದೆ ಅಲ್ಲೇ ಇದ್ದ ಕಲ್ಲು ತೆಗೆದು ಅಪ್ಪು ತಲೆ ಮೇಲೆ ಎತ್ತಿಹಾಕಿ ಕೊಲೆ ಮಾಡಿ ಪರಾರಿಯಾಗಿದ್ದರು.ಸುಖಾಸುಮ್ಮನೆ ಹಲ್ಲೆ ಮಾಡಿದ್ದಕ್ಕೆ ದ್ವೇಷ
ರೈಲ್ವೆ ಹಳಿ ಬಳಿ ಮೃತದೇಹ ಬಿದ್ದಿರುವ ಬಗ್ಗೆ ಸ್ಥಳೀಯರು ನೀಡಿದ ಮಾಹಿತಿ ಮೇರೆಗೆ ಪುಲಕೇಶಿನಗರ ಠಾಣೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲಿಸಿದ್ದರು. ಬಳಿಕ ಮೃತದೇಹದ ಗುರುತ ಪತ್ತೆಹಚ್ಚಿದ್ದರು. ಈ ಸಂಬಂಧ ಕೊಲೆ ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗೆ ಮುಂದಾಗಿದ್ದ ಪೊಲೀಸರು ಈಗ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಸುಖಾಸುಮ್ಮನೆ ತಮ್ಮ ಮೇಲೆ ಹಲ್ಲೆ ಮಾಡಿದ್ದಕ್ಕಾಗಿ ವಿಘ್ನೇಶ್ ಅಲಿಯಾಸ್ ಅಪ್ಪುನನ್ನು ಕೊಲೆ ಮಾಡಿದ್ದಾಗಿ ಆರೋಪಿಗಳು ವಿಚಾರಣೆ ವೇಳೆ ತಪ್ಪೊಪ್ಪಿಕೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.