ಹಣದಾಸೆಗೆ ವೃದ್ದೆಯನ್ನು ಕೊಲೆಗೈದು ಶೌಚಾಲಯದ ಯುಜಿಡಿ ಗುಂಡಿಯಲ್ಲಿ ಹೂತು ಹಾಕಿರುವ ಘಟನೆ ಕೆ.ಆರ್.ನಗರ ತಾಲೂಕಿನ ತಿಪ್ಪೂರು ಗ್ರಾಮದಲ್ಲಿ ನಡೆದಿದೆ. ಲೇಟ್ ಮೂಡ್ಲಶೆಟ್ಟಿ ಎಂಬವರ ಪತ್ನಿ ಗೌರಮ್ಮ (90) ಕೊಲೆಯಾದವರು. ಅದೇ ಗ್ರಾಮದ ವೀರಭದ್ರ ಎಂಬಾತ ಹಣಕ್ಕಾಗಿ ಕೊಲೆಗೈದು ಜೈಲು ಪಾಲಾಗಿದ್ದಾನೆ.

ಕನ್ನಡಪ್ರಭ ವಾರ್ತೆ ಕೆ.ಆರ್.ನಗರ

ಹಣದಾಸೆಗೆ ವೃದ್ದೆಯನ್ನು ಕೊಲೆಗೈದು ಶೌಚಾಲಯದ ಯುಜಿಡಿ ಗುಂಡಿಯಲ್ಲಿ ಹೂತು ಹಾಕಿರುವ ಘಟನೆ ತಾಲೂಕಿನ ತಿಪ್ಪೂರು ಗ್ರಾಮದಲ್ಲಿ ನಡೆದಿದೆ.

ಲೇಟ್ ಮೂಡ್ಲಶೆಟ್ಟಿ ಎಂಬವರ ಪತ್ನಿ ಗೌರಮ್ಮ (90) ಕೊಲೆಯಾದವರು. ಅದೇ ಗ್ರಾಮದ ವೀರಭದ್ರ ಎಂಬಾತ ಹಣಕ್ಕಾಗಿ ಕೊಲೆಗೈದು ಜೈಲು ಪಾಲಾಗಿದ್ದಾನೆ.

ಕೊಲೆಯಾದ ವೃದ್ಧೆಗೆ ಮೂವರು ಪುತ್ರರು ಹಾಗೂ ಓರ್ವ ಪುತ್ರಿ ಇದ್ದು, ‌ಮೂವರು ಪ್ರತ್ಯೇಕವಾಗಿ ವಾಸವಾಗಿದ್ದರು. ಗೌರಮ್ಮ ಅವರಿಗೆ ವೀರಭದ್ರ ಪರಿಚಿತನಾಗಿದ್ದು, ಬಹಳಷ್ಟು ವಿಶ್ವಾಸ ಗಳಿಸಿದ್ದ, ಆದ್ದರಿಂದ ಗೌರಮ್ಮ ಅವರ ಬ್ಯಾಂಕ್ ಖಾತೆಯಲ್ಲಿನ‌ ಹಣ ಡ್ರಾ ಮಾಡುವುದು, ಇತರೆ ಕೆಲಸವನ್ನು ಮಾಡಿಕೊಡುತ್ತಿದ್ದು, ಈಗ್ಗೆ ಹದಿನೈದು ದಿನಗಳ ಹಿಂದೆ ಗೌರಮ್ಮ ವೀರಭದ್ರನ ಜೊತೆ ಬ್ಯಾಂಕ್ ಹೋಗಿ 75 ಸಾವಿರ ಹಣ ಡ್ರಾ ಮಾಡಿದ್ದಾರೆ.

ಬಳಿಕ ತುರ್ತಾಗಿ ಹಣ ಬೇಕು ಕೊಡಿ ಎಂದು ಗೌರಮ್ಮ ಅವರ ಬಳಿ ಇದ್ದ 75 ಸಾವಿರ ಹಣ ಪಡೆದಿದ್ದಾನೆ, ವಾರ ಕಳೆದ ನಂತರ ಗೌರಮ್ಮ ಹಣ ಕೊಡು ಎಂದು ಕೇಳಿದಾಗ ಕೊಡುತ್ತೇನೆ ಎಂದು ಸಬೂಬು ಹೇಳಿ ರಾತ್ರಿ ವೇಳೆ ವೃದ್ಧೆ ಗೌರಮ್ಮ ಮನೆಗೆ ಹೋಗಿ ಕಪಾಳಕ್ಕೆ ಹೊಡೆದು ಉಸಿರುಗಟ್ಟಿಸಿ ಕೊಲೆ ಮಾಡಿ ನಂತರ ಮನೆಯ ಹಿಂದೆ ಇರುವ ಶೌಚಾಲಯದ ಯುಜಿಡಿಗುಂಡಿಗೆ ಹಾಕಿ ಮುಚ್ಷಿದ್ದಾನೆ. ಗೌರಮ್ಮ ಕಾಣದಿರುವ ಬಗ್ಗೆ ಮಕ್ಕಳು ಹುಡುಕಾಟ ನಡೆಸಿದ್ದಾರೆ. ಇದೇ ವೇಳೆಯಲ್ಲಿ ವೀರಭದ್ರ ಕೂಡ ಗ್ರಾಮದಿಂದ ನಾಪತ್ತೆಯಾಗಿದ್ದ, ಅನುಮಾನ‌ಗೊಂಡ ಗೌರಮ್ಮನ ಮಕ್ಕಳು ಪಟ್ಟಣದ ಪೊಲೀಸ್ ಠಾಣೆಗೆ ದೂರು ನೀಡಲಾಗುತ್ತದೆ.

ತನಿಖೆ ಆರಂಭಿಸಿದ ಪೊಲೀಸರು ವೀರಭದ್ರ ಗ್ರಾಮಕ್ಕೆ ಬಂದ‌ನಂತರ ಪೊಲೀಸ್ ಠಾಣೆಗೆ ಕರೆ ತಂದು ವಿಚಾರಣೆ ನಡೆಸುವ ವೇಳೆ ಹಣಕ್ಕಾಗಿ ಗೌರಮ್ಮ ಅವರನ್ನು ಕೊಲೆಗೈದಿರುವುದಾಗಿ ಒಪ್ಪಿಕೊಂಡು ಶವವನ್ನು ಶೌಚಾಲಯದ ಯುಜಿಡಿ ಗುಂಡಿ ಹಾಕಿರುವುದಾಗಿ ಬಾಯಿಬಿಟ್ಟ. ತಿಪ್ಪೂರು ಗ್ರಾಮಕ್ಕೆ ಈತನನ್ನು ಕರೆತಂದ ಪೊಲೀಸರು ಶೌಚಾಲಯದ ಯುಜಿಡಿ ಗುಂಡಿಯೊಳಗೆ ಗೌರಮ್ಮಳ ಶವ ಇದ್ದು, ಹೊರ ತೆಗೆದು ಮರಣೋತ್ತರ ಪರೀಕ್ಷೆ ಕಳುಹಿಸಿದರು. ಕೊಲೆ‌ ಆರೋಪಿ ವೀರಭದ್ರನ್ನು ಪಟ್ಟಣದ ಪೊಲೀಸರು ಹೆಚ್ಷಿನ ವಿಚಾರಣೆಗಾಗಿ ವಶಕ್ಕೆ ಪಡೆದಿದ್ದಾರೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ್ ಬಾಲದಂಡಿ, ಎಎಸ್ಪಿ ಮಲ್ಲಿಕ್, ಡಿವೈಎಸ್ಪಿ ಟಿ.ಬಿ. ರಾಜಣ್ಣ ತಿಪ್ಪೂರು ಗ್ರಾಮಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು. ಪೊಲೀಸ್ ಇನ್ಸ್ ಪೆಕ್ಟರ್ ಶಿವಪ್ರಕಾಶ್ ತನಿಖೆ ನಡೆಸುತ್ತಿದ್ದಾರೆ.