ತಮ್ಮ ವಿರುದ್ಧ ಕೆಲವರು ಸುಳ್ಳು ಜಾತಿ ನಿಂದನೆ ಪ್ರಕರಣ ದಾಖಲಿಸಿ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ವಿಷ ಕುಡಿದು ವ್ಯಾಪಾರಿಯೊಬ್ಬರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕಾಡುಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಬೆಂಗಳೂರು : ತಮ್ಮ ವಿರುದ್ಧ ಕೆಲವರು ಸುಳ್ಳು ಜಾತಿ ನಿಂದನೆ ಪ್ರಕರಣ ದಾಖಲಿಸಿ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ವಿಷ ಕುಡಿದು ವ್ಯಾಪಾರಿಯೊಬ್ಬರು ಆತ್ಮ*ತ್ಯೆಗೆ ಶರಣಾಗಿರುವ ಘಟನೆ ಕಾಡುಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಚನ್ನಸಂದ್ರದ ನಿವಾಸಿ ಪಾಪಣ್ಣ ಮೃತ ವ್ಯಕ್ತಿ
ಚನ್ನಸಂದ್ರದ ನಿವಾಸಿ ಪಾಪಣ್ಣ (40) ಮೃತ ವ್ಯಕ್ತಿ. ಈ ಪ್ರಕರಣ ಸಂಬಂಧ ಮೃತನ ಪರಿಚಿತರಾದ ಶ್ರೀನಿವಾಸ್ ಅಲಿಯಾಸ್ ಜೋಗಿ ಸೀನ, ಪ್ರಶಾಂತ್, ಸಂತೋಷ ಹಾಗೂ ಲಲಿತ್ ಕುಮಾರ್ ಸೇರಿ ನಾಲ್ವರನ್ನು ಬಂಧಿಸಲಾಗಿದೆ.
ಮನೆಯಲ್ಲಿ ವಿಷ ಸೇವಿಸಿ ಶುಕ್ರವಾರ ತಡ ರಾತ್ರಿ ಪಾಪಣ್ಣ ಅತ್ಮ*ತ್ಯೆ ಮಾಡಿಕೊಂಡಿದ್ದಾರೆ. ಕೂಡಲೇ ಅವರನ್ನು ರಕ್ಷಿಸಲು ಕುಟುಂಬದವರು ಯತ್ನಿಸಿದ್ದಾರೆ. ಅಷ್ಟರಲ್ಲಿ ಪಾಪಣ್ಣ ಕೊನೆಯುಸಿರೆಳೆದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಹಣ್ಣಿನ ವ್ಯಾಪಾರ ಮಾಡುವ ಪಾಪಣ್ಣ, ಕೆಲವು ವರ್ಷಗಳಿಂದ ಅದೇ ಪ್ರದೇಶದಲ್ಲಿ ನೆಲೆಸಿರುವ ಸೀನ ಹಾಗೂ ಪಾಪಣ್ಣ ಕುಟುಂಬಗಳ ಮಧ್ಯೆ ಮನಸ್ತಾಪವಾಗಿತ್ತು. ಈ ಎರಡು ಪರಿವಾರಗಳ ಮಹಿಳೆಯರು ನಡುವೆ ಬೀದಿ ಜಗಳಗಳು ನಡೆದಿದ್ದವು. ಕಳೆದ ಏಪ್ರಿಲ್ನಲ್ಲಿ ಕಾಡುಗೋಡಿ ಪೊಲೀಸ್ ಠಾಣೆಯಲ್ಲಿ ಪರಸ್ಪರ ಜಾತಿನಿಂದನೆ ದೂರು ದಾಖಲಿಸಿದ್ದರು. ಆಗ ಇಬ್ಬರ ದೂರು ಸ್ವೀಕರಿಸಿ ಎಫ್ಐಆರ್ ದಾಖಲಿಸಿದ ಪೊಲೀಸರು, ನಂತರ ಆ ಪ್ರಕರಣ ಮುಂದಿನ ತನಿಖೆಗೆ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯಕ್ಕೆ (ಡಿಸಿಇಆರ್) ವರ್ಗಾಯಿಸಿದರು. ಆದರೆ ತಮ್ಮ ಮೇಲೆ ಸುಳ್ಳು ಆರೋಪ ಮಾಡಲಾಗಿದ್ದು, ಬಿ ರಿಪೋರ್ಟ್ ಸಲ್ಲಿಸುವಂತೆ ಅಧಿಕಾರಿಗಳಿಗೆ ಪಾಪಣ್ಣ ಹಾಗೂ ಅವರ ಸೋದರ ಸಂಬಂಧಿ ಭಾಗ್ಯಮ್ಮ ಮನವಿ ಮಾಡಿದ್ದರು. ಇತ್ತೀಚಿಗೆ ಜಾತ್ರೆ ವೇಳೆ ಮತ್ತೆ ಎರಡು ಕುಟುಂಬಗಳ ಮಧ್ಯೆ ಜಗಳವಾಗಿದೆ. ಆಗ ಪಾಪಣ್ಣ ಹಾಗೂ ಅವರ ಕುಟುಂಬದವರ ವಿರುದ್ಧ ಎದುರಾಳಿ ನಯನ ದೂರು ನೀಡಿದ್ದರು. ಈ ಬೆಳವಣಿಗೆಯಿಂದ ಬೇಸತ್ತು ಪಾಪಣ್ಣ ಆತ್ಮ*ತ್ಯೆಗೆ ಶರಣಾಗಿದ್ದಾರೆ ಎಂದು ತಿಳಿದು ಬಂದಿದೆ.
ತಾವು ಆತ್ಮ*ತ್ಯೆ ಮಾಡಿಕೊಳ್ಳುವುದಾಗಿ ಹೇಳಿ ಕುಟುಂಬದವರು ಹಾಗೂ ಸ್ನೇಹಿತರಿಗೆ ವಿಡಿಯೋವೊಂದನ್ನು ರಾತ್ರಿ ಪಾಪಣ್ಣ ಕಳುಹಿಸಿದ್ದರು. ಕೂಡಲೇ ಈ ವಿಡಿಯೋ ನೋಡಿ ಪಾಪಣ್ಣ ರಕ್ಷಣೆಗೆ ಕುಟುಂಬದವರು ಧಾವಿಸಿದ್ದಾರೆ. ಆದರೆ ಅಷ್ಟರಲ್ಲಿ ರಾಸಾಯನಿಕ ಸೇವಿಸಿ ಅವರು ಕೊನೆಯುಸಿರೆಳೆದಿದ್ದರು.
ವಿಡಿಯೋ ಮಾಡಿಟ್ಟು ಆತ್ಮಹತ್ಯೆ
ಆತ್ಮ*ತ್ಯೆಗೂ ಮುನ್ನ ತಮ್ಮ ಸಾವಿಗೆ ಕಾರಣದ ಬಗ್ಗೆ 2.5 ನಿಮಿಷಗಳ ವಿಡಿಯೋವನ್ನು ಚಿತ್ರೀಕರಿಸಿ ಸ್ನೇಹಿತರಿಗೆ ಪಾಪಣ್ಣ ಕಳುಹಿಸಿದ್ದರು. ಇದರಲ್ಲಿ ತಮ್ಮ ಮೇಲೆ ಸುಳ್ಳು ಅಟ್ರಾಸಿಟಿ ಕೇಸ್ ದಾಖಲಿಸಿ ಜೋಗಿ ಸೀನ, ಪ್ರಶಾಂತ್, ಲಲಿತ್ ಕುಮಾರ್, ಸಂತೋಷ ಕಿರುಕುಳ ನೀಡುತ್ತಿದ್ದಾರೆ. ನನ್ನ ಸಾವಿಗೆ ಈ ನಾಲ್ವರೇ ಕಾರಣರಾಗಿದ್ದಾರೆ ಎಂದು ದೂರಿದ್ದರು. ಹಣಕ್ಕಾಗಿ ಸೀನ ಹಾಗೂ ಆತನ ಗ್ಯಾಂಗ್ ದಬ್ಬಾಳಿಕೆ ನಡೆಸುತ್ತಿದ್ದು, ಈಗಾಗಲೇ ಗ್ಯಾಂಗ್ಗೆ 10 ಲಕ್ಷ ರು. ಕೊಟ್ಟಿದ್ದೇನೆ. ಈಗ ಮತ್ತೆ ಹಣಕ್ಕೆ ಒತ್ತಾಯಿಸುತ್ತಿದ್ದಾರೆ ಎಂದು ಪಾಪಣ್ಣ ದೂರಿದ್ದರು. ಈ ಘಟನೆ ಸಂಬಂಧ ಮೃತನ ಪತ್ನಿ ದೂರು ಆಧರಿಸಿ ಎಫ್ಐಆರ್ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

