ಹವಾ ಸೃಷ್ಟಿಸಲು ದಾಳಿ ವಿಡಿಯೋ ಜಾಲತಾಣದಲ್ಲಿ ಹರಿಬಿಟ್ಟು ಜನರಿಗೆ ಭೀತಿ ಹುಟ್ಟಿಸುತ್ತಿದ್ದ ರೌಡಿ ಸೆರೆ!

| Published : Feb 21 2024, 02:05 AM IST / Updated: Feb 21 2024, 02:24 PM IST

Cyber crime
ಹವಾ ಸೃಷ್ಟಿಸಲು ದಾಳಿ ವಿಡಿಯೋ ಜಾಲತಾಣದಲ್ಲಿ ಹರಿಬಿಟ್ಟು ಜನರಿಗೆ ಭೀತಿ ಹುಟ್ಟಿಸುತ್ತಿದ್ದ ರೌಡಿ ಸೆರೆ!
Share this Article
  • FB
  • TW
  • Linkdin
  • Email

ಸಾರಾಂಶ

ಸ್ಥಳೀಯವಾಗಿ ಹವಾ ಸೃಷ್ಟಿಸಲು ತಾನು ಜನರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಕೃತ್ಯವನ್ನು ವಿಡಿಯೋ ಚಿತ್ರೀಕರಿಸಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟು ಭೀತಿ ಸೃಷ್ಟಿಸುತ್ತಿದ್ದ ಕುಖ್ಯಾತ ರೌಡಿಯೊಬ್ಬನನ್ನು ಮುಂಬೈ ನಗರದಲ್ಲಿ ಬಂಧಿಸಿ ಗೋವಿಂದಪುರ ಠಾಣೆ ಪೊಲೀಸರು ಕರೆ ತಂದಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಸ್ಥಳೀಯವಾಗಿ ಹವಾ ಸೃಷ್ಟಿಸಲು ತಾನು ಜನರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಕೃತ್ಯವನ್ನು ವಿಡಿಯೋ ಚಿತ್ರೀಕರಿಸಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟು ಭೀತಿ ಸೃಷ್ಟಿಸುತ್ತಿದ್ದ ಕುಖ್ಯಾತ ರೌಡಿಯೊಬ್ಬನನ್ನು ಮುಂಬೈ ನಗರದಲ್ಲಿ ಬಂಧಿಸಿ ಗೋವಿಂದಪುರ ಠಾಣೆ ಪೊಲೀಸರು ಕರೆ ತಂದಿದ್ದಾರೆ.

ಹೆಗಡೆ ನಗರದ ನಸ್ರುವುಲ್ಲಾ ಅಲಿಯಾಸ್ ನಸ್ರು ಬಂಧಿತನಾಗಿದ್ದು, ಆತನಿಂದ ಮಾರಕಾಸ್ತ್ರಗಳು ಸೇರಿದಂತೆ ಇತರೆ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. 

ಕಳೆದೊಂದು ವರ್ಷದಿಂದ ಪೊಲೀಸರಿಗೆ ಸಿಗದೆ ಹಾಗೂ ಹಳೇ ಪ್ರಕರಣಗಳ ವಿಚಾರಣೆಗೂ ನ್ಯಾಯಾಲಯಕ್ಕೆ ಹಾಜರಾಗದೆ ನಸ್ರು ತಪ್ಪಿಸಿಕೊಂಡಿದ್ದ. 

ಆತನ ಮೇಲೆ ಉದ್ಘೋಷಿತ ಅಪರಾಧಿ ಎಂದು ಘೋಷಿಸಿ ನ್ಯಾಯಾಲಯವು ಜಾಮೀನು ರಹಿತ ವಾರೆಂಟ್ ಜಾರಿಗೊಳಿಸಿತು. ಈ ಹಿನ್ನಲೆಯಲ್ಲಿ ಪೂರ್ವ ವಿಭಾಗದ ಡಿಸಿಪಿ ಡಿ.ದೇವರಾಜ ಸಾರಥ್ಯದಲ್ಲಿ ಆರೋಪಿ ಪತ್ತೆಗೆ ಹುಡುಕಾಟ ನಡೆಸಿದ ಪೊಲೀಸರು, ಕೊನೆಗೆ ಮುಂಬೈನಲ್ಲಿ ಪತ್ತೆ ಹಚ್ಚಿದ್ದಾರೆ.

ಜನರ ಮೇಲೆ ಹಲ್ಲೆ: ರೌಡಿ ನಸ್ರು ವೃತ್ತಿಪರ ಕ್ರಿಮಿನಲ್ ಆಗಿದ್ದು, ಕಳೆದ ಹತ್ತು ವರ್ಷಗಳಿಂದ ಆತ ಕಾನೂನುಬಾಹಿರ ಕೃತ್ಯಗಳಲ್ಲಿ ಸಕ್ರಿಯವಾಗಿದ್ದ. ಜನರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ವಿಡಿಯೋ ಚಿತ್ರೀಕರಿಸಿಕೊಂಡು ಜನರಿಗೆ ಭಯಗೊಳಿಸುತ್ತಿದ್ದ ಆತ, ತನ್ನ ಕುಟುಂಬದ ಜತೆ ಹೆಗಡೆ ನಗರದಲ್ಲಿ ವಾಸವಾಗಿದ್ದ. 

ಆತನ ಮೇಲೆ ಗೋವಿಂದಪುರ, ಮಾದನಾಯಕನಹಳ್ಳಿ, ಬಿಡದಿ, ಎಚ್‌ಎಸ್‌ಆರ್‌ ಲೇಔಟ್‌, ಹೆಬ್ಬಾಳ, ಕೆ.ಜಿ.ಹಳ್ಳಿ, ಡಿ.ಜೆ.ಹಳ್ಳಿ, ಸಂಪಿಗೆಹಳ್ಳಿ, ಹೆಣ್ಣೂರು, ಬೇಗೂರು, ಸದಾಶಿವನಗರ ಸೇರಿದಂತೆ ಇತರೆ ಠಾಣೆಗಳಲ್ಲಿ ಮಾರಾಣಾಂತಿಕ ಹಲ್ಲೆ, ಸುಲಿಗೆ ಮತ್ತು ದರೋಡೆ ಸೇರಿ 12ಕ್ಕೂ ಹೆಚ್ಚಿನ ಪ್ರಕರಣಗಳು ದಾಖಲಾಗಿವೆ. 

ಈ ಕಾನೂನುಬಾಹಿರ ಕೃತ್ಯಗಳ ಹಿನ್ನಲೆಯಲ್ಲಿ ಆತನ ಮೇಲೆ ಗೋವಿಂದಪುರ ಠಾಣೆಯಲ್ಲಿ ರೌಡಿಪಟ್ಟಿ ತೆರೆಯಲಾಗಿತ್ತು. ಕಳೆದೊಂದು ವರ್ಷದಿಂದ ನಸ್ರು ತಲೆಮರೆಸಿಕೊಂಡಿದ್ದ ಎಂದು ಅಧಿಕಾರಿಗಳು ವಿವರಿಸಿದ್ದಾರೆ.

ಇನ್ನು ಹಳೇ ಪ್ರಕರಣಗಳ ವಿಚಾರಣೆಗೆ ನ್ಯಾಯಾಲಯಗಳಿಗೆ ಆತ ನಿರಂತರವಾಗಿ ಗೈರಾಗಿದ್ದ. ಹೀಗಾಗಿ ನಸ್ರು ವಿರುದ್ಧ 10 ಜಾಮೀನುರಹಿತ ವಾರೆಂಟ್‌ಗಳು ಹಾಗೂ ಒಂದು ಪ್ರಕರಣದಲ್ಲಿ ಉದ್ಘೋಷಿತ ಅಪರಾಧಿ ಎಂದು ನ್ಯಾಯಾಲಯವು ಪ್ರಕಟಿಸಿತ್ತು. 

ಈ ಹಿನ್ನಲೆಯಲ್ಲಿ ನಸ್ರು ಪತ್ತೆಗೆ ವಿಶೇಷ ತಂಡವನ್ನು ಪೂರ್ವ ವಿಭಾಗದ ಡಿಸಿಪಿ ದೇವರಾಜ್ ರಚಿಸಿದ್ದರು. ಈ ತಂಡವು ಕರ್ನಾಟಕ, ತಮಿಳುನಾಡು ಹಾಗೂ ಆಂಧ್ರಪ್ರದೇಶ ರಾಜ್ಯಗಳಲ್ಲಿ ಹುಡುಕಾಟ ನಡೆಸಿದರೂ ನಸ್ರು ಪತ್ತೆಯಾಗಿರಲಿಲ್ಲ. 

ಕೊನೆಗೆ ಮುಂಬೈನಗರದಲ್ಲಿ ಆತ ತಲೆಮರೆಸಿಕೊಂಡಿರುವ ಬಗ್ಗೆ ಲಭ್ಯವಾದ ಖಚಿತ ಮಾಹಿತಿ ಮೇರೆಗೆ ಇನ್ಸ್‌ಪೆಕ್ಟರ್ ಜಯರಾಜ್‌ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ಸೆರೆ ಹಿಡಿದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.