ಸಾರಾಂಶ
ಎಚ್.ಡಿ.ಕೋಟೆ : ಮಗಳು ಮನೆ ಬಿಟ್ಟು ಹೋಗಿದ್ದರಿಂದ ನೊಂದ ಒಂದೇ ಕುಟುಂಬದ ಮೂವರು ಡೆತ್ನೋಟ್ ಬರೆದಿಟ್ಟು ಹೆಬ್ಬಾಳ ಜಲಾಶಯದ ನೀರಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೈಸೂರು ಜಿಲ್ಲೆ ಎಚ್.ಡಿ.ಕೋಟೆ ತಾಲೂಕಿನ ಬೂದನೂರಲ್ಲಿ ನಡೆದಿದೆ.
ಬೂದನೂರು ಗ್ರಾಮದ ನಿವಾಸಿಗಳಾದ ಮಹದೇವಸ್ವಾಮಿ (55) ಮಂಜುಳಾ (42) ಮತ್ತು ಪುತ್ರಿ ಹರ್ಷಿತಾ (18) ಆತ್ಮಹತ್ಯೆ ಮಾಡಿಕೊಂಡವರು. ಈ ಕುಟುಂಬ ಕಳೆದ 8 ವರ್ಷಗಳಿಂದ ಎಚ್.ಡಿ.ಕೋಟೆಯಲ್ಲಿ ನೆಲೆಸಿದ್ದು, ಶನಿವಾರ ಮುಂಜಾನೆ 6 ಗಂಟೆಗೆ ಬೈಕ್ನಲ್ಲಿ ಹೆಬ್ಬಾಳ ಜಲಾಶಯಕ್ಕೆ ಆಗಮಿಸಿದ್ದರು. ಡೆತ್ ನೋಟ್ ಬರದಿಟ್ಟು ದಡದಲ್ಲಿ ಬೈಕ್ ನಿಲ್ಲಿಸಿ, ಚಪ್ಪಲಿಗಳನ್ನು ಸಹ ಅಲ್ಲೇ ಬಿಟ್ಟು ನೀರಿಗೆ ಹಾರಿದ್ದಾರೆ. ಬೂದನೂರು ಗ್ರಾಮಸ್ಥರು ಆ ಮಾರ್ಗವಾಗಿ ಸಂಚರಿಸುವಾಗ ಬೈಕ್ ಮತ್ತು ಚಪ್ಪಲಿಗಳನ್ನು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಹದೇವಸ್ವಾಮಿ ಅವರ ಓರ್ವ ಪುತ್ರಿ ಮನೆ ಬಿಟ್ಟು ಹೋಗಿದ್ದರಿಂದ ಮನನೊಂದು ಮೂವರು ಸಾಮೂಹಿಕ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ಇದೆ.
2 ಗಂಟೆಯಾದರೂ ಬಾರದ ಸಿಬ್ಬಂದಿ: ಮಾಹಿತಿ ನೀಡಿ 2 ಗಂಟೆ ಕಳೆದರೂ ಕೂಡ ಪಟ್ಟಣದಲ್ಲೇ ಇರುವ ಹೆಬ್ಬಾಳ ಜಲಾಶಯಕ್ಕೆ ಪೊಲೀಸ್ ಸಿಬ್ಬಂದಿ ಮತ್ತು ಅಗ್ನಿಶಾಮಕ ಸಿಬ್ಬಂದಿ ಆಗಮಿಸಿರಲಿಲ್ಲ. ಇದರಿಂದ ಸಾಗರೋಪಾದಿಯಲ್ಲಿ ನೆರೆದಿದ್ದ ಸಾರ್ವಜನಿಕರು ಹಿಡಿ ಶಾಪ ಹಾಕಿದ್ದು, ಆಕ್ರೋಶ ವ್ಯಕ್ತಪಡಿಸಿದ್ದಾರೆ.