ಸಾರಾಂಶ
ಬೈಕ್ಗೆ ಟಿಪ್ಪರ್ ಲಾರಿ ಗುದ್ದಿ ಕಂಪನಿ ನೌಕರನ ಸಾವು; ಕೆಳಗೆ ಬಿದ್ದವನ ಮೇಲೆ ಹರಿದ ಲಾರಿ ಚಕ್ರ
ಕನ್ನಡಪ್ರಭ ವಾರ್ತೆ ಬೆಂಗಳೂರು
ಬೈಕ್ಗೆ ಟಿಪ್ಪರ್ ಲಾರಿ ಡಿಕ್ಕಿಯಾಗಿ ಖಾಸಗಿ ಕಂಪನಿ ಉದ್ಯೋಗಿಯೊಬ್ಬರು ಮೃತಪಟ್ಟಿರುವ ಘಟನೆ ಕುಮಾರಸ್ವಾಮಿ ಲೇಔಟ್ ಸಂಚಾರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.ಜೆ.ಪಿ.ನಗರ 1ನೇ ಹಂತ ಸಾರಕ್ಕಿ ಸಮೀಪದ ನಿವಾಸಿ ಅರುಣ್ ಕುಮಾರ್ (28) ಮೃತ ದುರ್ದೈವಿ. ತನ್ನ ಸ್ನೇಹಿತ ಮನೆಗೆ ಹೋಗಿ ಶನಿವಾರ ರಾತ್ರಿ 11 ಗಂಟೆಗೆಯಲ್ಲಿ ಅರುಣ್ ಮರಳುವಾಗ ಅಂಜನಾಪುರ 80 ಅಡಿ ರಸ್ತೆಯಲ್ಲಿ ಈ ಅವಘಡ ಸಂಭವಿಸಿದೆ. ಈ ಘಟನೆ ಸಂಬಂಧ ಲಾರಿ ಚಾಲಕನನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ತನ್ನ ಕುಟುಂಬದ ಜತೆ ನೆಲೆಸಿದ್ದ ಅರುಣ್, ಖಾಸಗಿ ಕಂಪನಿಯಲ್ಲಿ ಲೆಕ್ಕಾಧಿಕಾರಿಯಾಗಿ ಕೆಲಸ ಮಾಡುತ್ತಿದ್ದರು. ಬನ್ನೇರುಘಟ್ಟ ರಸ್ತೆ ಸಮೀಪ ಸ್ನೇಹಿತನನ್ನು ಭೇಟಿಯಾಗಲು ಶನಿವಾರ ಮಧ್ಯಾಹ್ನ ಅರುಣ್ ತೆರಳಿದ್ದರು. ಅಲ್ಲಿಂದ ರಾತ್ರಿ 11 ಗಂಟೆಯಲ್ಲಿ ಮನೆಗೆ ಅಂಜನಾಪುರ 80 ರಸ್ತೆಯಲ್ಲಿ ಅರುಣ್ ಮನೆಗೆ ಮರಳುತ್ತಿದ್ದರು. ಅದೇ ವೇಳೆ ನೈಸ್ ರಸ್ತೆಯಿಂದ ಕೆಂಭತ್ತನಹಳ್ಳಿ ಕಡೆಗೆ ತೆರಳುತ್ತಿದ್ದ ಟಿಪ್ಪರ್ ಲಾರಿ ಬೈಕ್ಗೆ ಡಿಕ್ಕಿಯಾಗಿದೆ. ಆಗ ಕೆಳಗೆ ಬಿದ್ದ ಅರುಣ್ ಮೇಲೆ ಟಿಪ್ಪರ್ ಲಾರಿ ಚಕ್ರಗಳು ಹರಿದ ಪರಿಣಾಮ ಗಂಭೀರವಾಗಿ ಗಾಯಗೊಂಡು ಆತ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದು ಪೊಲೀಸರು ವಿವರಿಸಿದ್ದಾರೆ.