ಸಾರಾಂಶ
ಅಯೋಗ್ಯ ಸಿನಿಮಾ ಎರಡನೇ ಭಾಗದಲ್ಲಿ ಹೊರಬರುತ್ತಿದೆ. ಸಿನಿಮಾ ಬಗ್ಗೆ ನೀನಾಸಂ ಸತೀಶ್ ಮಾತನಾಡಿದ್ದಾರೆ.
ಕನ್ನಡಪ್ರಭ ಸಿನಿವಾರ್ತೆ6 ವರ್ಷಗಳ ಹಿಂದೆ ರಿಲೀಸ್ ಆದ ಸತೀಶ್ ನೀನಾಸಂ ಹಾಗೂ ರಚಿತಾ ರಾಮ್ ಜೋಡಿಯ ಸೂಪರ್ಹಿಟ್ ‘ಅಯೋಗ್ಯ’ ಸಿನಿಮಾದ ಎರಡನೇ ಭಾಗ ಸೆಟ್ಟೇರಲು ಸಜ್ಜಾಗಿದೆ. ಅಯೋಗ್ಯ ಸಿನಿಮಾದ ಮುಂದುವರಿದ ಕತೆಯುಳ್ಳ ಈ ಸಿನಿಮಾದಲ್ಲೂ ಸತೀಶ್ ಹಾಗೂ ರಚಿತಾ ನಾಯಕ, ನಾಯಕಿ ಆಗಿ ನಟಿಸುತ್ತಿದ್ದಾರೆ.
ಆ ಸಿನಿಮಾ ನಿರ್ದೇಶಿಸಿದ್ದ ಮಹೇಶ್ ಅವರೇ ಈ ಚಿತ್ರದ ನಿರ್ದೇಶಕ. ಅರ್ಜುನ್ ಜನ್ಯ ಸಂಗೀತ ನಿರ್ದೇಶನದ, ಎಂ ಮುನೇಗೌಡ ನಿರ್ಮಾಣದ ಈ ಸಿನಿಮಾ ಡಿ.11ಕ್ಕೆ ಸೆಟ್ಟೇರಲಿದೆ.ಈ ಕುರಿತು ನೀನಾಸಂ ಸತೀಶ್, ‘ನಾನು ಈ ಕತೆ ಕೇಳಿದಾಗಲೇ ಎಕ್ಸೈಟ್ ಆಗಿದ್ದೆ. ಒಂದು ವರ್ಷ ಸ್ಕ್ರಿಪ್ಟ್ ಮೇಲೆ ಕೆಲಸ ಮಾಡಲಾಗಿದೆ. ಮೊದಲನೇ ಭಾಗದಲ್ಲಿ ಇದ್ದ ವಾತಾವರಣದಲ್ಲಿಯೇ ಕತೆ ನಡೆಯುತ್ತದೆ. ಆದರೆ ಎರಡನೇ ಭಾಗ ಎಂದಾಗ ಪ್ರೇಕ್ಷಕರ ನಿರೀಕ್ಷೆ ಜಾಸ್ತಿಯೇ ಇರುತ್ತದೆ. ಅದಕ್ಕೆ ತಕ್ಕಂತೆ ಗುಣಮಟ್ಟವೂ ಚೆನ್ನಾಗಿರಬೇಕು. ಅದನ್ನೆಲ್ಲಾ ಪ್ಲಾನ್ ಮಾಡಿದ್ದೇವೆ. ಬಜೆಟ್ ಕೂಡ ದೊಡ್ಡದಾಗಿದೆ. ಚೆನ್ನಾಗಿ ಮಾಡಿ ಅಂತ ನಿರ್ಮಾಪಕ ಮುನೇಗೌಡರು ಹೇಳಿದ್ದಾರೆ. ಗೆದ್ದೇ ಗೆಲ್ತೀವಿ ಎಂಬ ವಿಶ್ವಾಸದಲ್ಲಿ ನಿಮ್ಮ ಮುಂದೆ ಬರುತ್ತೇವೆ’ ಎಂದು ಹೇಳಿದರು.
ಈ ಮಧ್ಯೆ ‘ಅಶೋಕ ಬ್ಲೇಡ್’ ಚಿತ್ರದ ಚಿತ್ರೀಕರಣವೂ ಜನವರಿಯಲ್ಲಿ ಆರಂಭವಾಗಲಿದೆ ಎಂದು ಸತೀಶ್ ನೀನಾಸಂ ತಿಳಿಸಿದ್ದಾರೆ. ಈ ಚಿತ್ರದ ಸಂಕಲನಕಾರರಾಗಿದ್ದ ಮನು ಶೇಡ್ಗಾರ್ ‘ಅಶೋಕ ಬ್ಲೇಡ್’ ನಿರ್ದೇಶನದ ಹೊಣೆ ಹೊತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.