ಮುಂದಿನ ತಿಂಗಳು ತೆರೆಗೆ ಬರುವ ಸಾಧ್ಯತೆಗಳು ಇರುವ ಭಗೀರಥ ಸಿನಿಮಾದ ಟೀಸರ್ ಬಿಡುಗಡೆ ಆಗಿದೆ.

 ಸಿನಿವಾರ್ತೆ

‘ಭಗೀರಥ’ ಚಿತ್ರದ ಟೀಸರ್‌ ಬಿಡುಗಡೆ ಆಗಿದೆ. ರಾಮ್ ಜನಾರ್ದನ್‌ ನಿರ್ದೇಶನದ ಈ ಚಿತ್ರದ ಟೀಸರ್‌ ಬಿಡುಗಡೆ ಮಾಡಿದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎನ್‌ ಎಂ ಸುರೇಶ್‌ ಪತ್ರಿಕಾಗೋಷ್ಟಿಗೆ ಒಂದೂವರೆ ಗಂಟೆ ತಡವಾಗಿ ಬಂದ ಚಿತ್ರದ ನಾಯಕನ ಪರವಾಗಿ ಕ್ಷಮೆ ಕೇಳಿದರು.

ರಾಮ್‌ ಜನಾರ್ದನ್‌, ‘ಪ್ರೀತಿ ಪ್ರೇಮದ ಕತೆಯನ್ನು ಒಳಗೊಂಡ ಸಿನಿಮಾ. ಆದರೂ ಈಗ ಸಮಾಜದಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ಮೇಲೆ ಬೆಳಕು ಚೆಲ್ಲುವ ಕತೆ ಇಲ್ಲಿದೆ. ರಾಜಕೀಯ, ಹಗರಣಗಳು, ಇದರ ನಡುವೆ ಒಬ್ಬನ ಹೋರಾಟ, ಮಾಧ್ಯಮಗಳ ಪಾತ್ರದ ಸುತ್ತ ಸಿನಿಮಾ ಮೂಡಿ ಬಂದಿದೆ’ ಎಂದರು.

ಪಬ್ಲಿಕ್‌ ಸ್ಟಾರ್‌ ಬಿರುದಿನ ಜೆಪಿ ಅಲಿಯಾಸ್‌ ಜಯಪ್ರಕಾಶ್‌, ‘ಸಮಾಜ ಸೇವೆ ಜತೆಗೆ ಸಿನಿಮಾ ಮಾಡುತ್ತಿದ್ದೇನೆ. ಕಮರ್ಷಿಯಲ್ ನೆರಳಿನಲ್ಲಿ ಸಮಾಜಕ್ಕೆ ಸಂದೇಶ ಕೊಡುವ ಸಿನಿಮಾ ಇದು’ ಎಂದರು.

ಈ ಚಿತ್ರ ನಿರ್ಮಿಸಿರುವುದು ಕೆ ರಮೇಶ್‌ ಹಾಗೂ ಬಿ ಬೈರಪ್ಪ. ಜಯಪ್ರಕಾಶ್‌ ನಾಯಕ, ಚಂದನ ರಾಘವೇಂದ್ರ ನಾಯಕಿ. ಶ್ರೇಯಾ ಪಾವನಾ ಮತ್ತೊಬ್ಬ ನಾಯಕಿ.