ದೇಸಾಯಿ ಸಿನಿಮಾ ಹೇಗಿದೆ ಎಂಬುದರ ವಿಷಯ ಇಲ್ಲಿದೆ.

ಚಿತ್ರ: ದೇಸಾಯಿ

ತಾರಾಗಣ : ಪ್ರವೀಣ್‌ ಕುಮಾರ್‌, ರಾದ್ಯಾ, ಕಲ್ಯಾಣಿ, ಮಧುಸೂದನ್‌ ರಾವ್‌, ಒರಟ ಪ್ರಶಾಂತ್‌, ಹರಿಣಿ, ಪ್ರಶಾಂತ್‌ ನಟನಾ,

ನಿರ್ದೇಶನ: ನಾಗಿರೆಡ್ಡಿ ಭಡ

ರೇಟಿಂಗ್: 3ಆರ್ 

ಕೇಶವಮೂರ್ತಿ

ಭಾಷೆಯಲ್ಲಿ ಕನ್ನಡ ಸಿನಿಮಾ, ಸಾಹಸ ಸನ್ನಿವೇಶಗಳಲ್ಲಿ ತೆಲುಗು ಚಿತ್ರಗಳನ್ನು ನೆನಪಿಸುವ ‘ದೇಸಾಯಿ’ ಚಿತ್ರದ್ದು ಕುಟುಂಬವೊಂದರ ಕತೆ, ವ್ಯಥೆಗಳನ್ನೇ ನಂಬಿಕೊಂಡು ತೆರೆ ಮೇಲೆ ತೆರೆದುಕೊಳ್ಳುತ್ತದೆ. ನಿರ್ದೇಶಕ ನಾಗಿರೆಡ್ಡಿ ಭಡ ಅವರು ದೊಡ್ಡ ತಾರಾಗಣವನ್ನು ಸೇರಿಸಿಕೊಂಡು ಸಿನಿಮಾ ಮಾಡಿದ್ದಾರೆ. ಕಾರಣವಿಲ್ಲದೆ ಬರುವ ದೃಶ್ಯಗಳು, ಆ್ಯಕ್ಷನ್‌ ಚಿತ್ರವೆಂದು ನಂಬಿಸುವ ಪ್ರಯತ್ನದ ಭಾಗವಾಗಿ ರೋಚಕ ಫೈಟ್‌ಗಳು, ನಾಯಕಿಗೆ ಬೇಸರ ಆದರೆ ಸಾಂಗು, ಲೆಕ್ಕಕ್ಕಿಲ್ಲದ ಹಾಸ್ಯಗಳು, ನೆನಪಿನಲ್ಲಿ ಉಳಿಯದ ಸಂಭಾಷಣೆಗಳನ್ನೇ ನಂಬಿಕೊಂಡು ‘ದೇಸಾಯಿ’ ಸಿನಿಮಾ ಮೂಡಿಬಂದಿದೆ.

ಗಾಣದ ಎಣ್ಣೆ ತಯಾರಿಸುವುದೇ ಕುಲಕಸುಬು ಎಂದುಕೊಂಡಿರುವ, ಒಳ್ಳೆಯತನಕ್ಕೆ ಬ್ರಾಂಡ್‌ ಅಂಬಾಸಿಡರ್‌ ಎನಿಸಿಕೊಂಡಿರುವ ದೇಸಾಯಿ ಕುಟುಂಬವೇ ಚಿತ್ರದ ಕೇಂದ್ರಬಿಂದು. ಈ ಕುಟುಂಬದ ಪಾತ್ರಗಳ ಮೂಲಕ ಉತ್ತರ ಕರ್ನಾಟಕದ ಶ್ರೀಮಂತ ಮನೆಯ ಫ್ಯಾಮಿಲಿ ಡ್ರಾಮಾಗಳನ್ನು ಹೇಳುತ್ತಾ ಹೋಗುತ್ತದೆ ಸಿನಿಮಾ. ತನ್ನ ತಂದೆಗೆ ಹೇಳದೆ ಮದುವೆ ಆಗಿರೋ ಹೀರೋ ಅಪ್ಪ, ಕುಟುಂಬದಿಂದ ದೂರ ಆಗಿದ್ದಾರೆ. ಹಳ್ಳಿಯಲ್ಲಿ ನೆಲೆಸಿರುವ ಹೀರೋ ತಾನನ ಕುಟುಂಬಕ್ಕೆ ಏನೋ ಕಂಟಕ ಇದೆ. ಈಗ ಮೊಮ್ಮಗ ಬಂದು ಈ ಕಂಟಕರನ್ನು ಸದೆಬಡಿದು, ದೂರ ಆದ ಕುಟುಂಬಗಳು, ಸಂಬಂಧಗಳನ್ನು ಹತ್ತಿರ ಮಾಡುವುದಕ್ಕೆ ಏನೆಲ್ಲ ಮಾಡುತ್ತಾನೆ ಎಂಬುದು ಸಿನಿಮಾ.

ತುಂಬಾ ದಿನಗಳ ನಂತರ ಮರಳಿ ಬಂದಿರುವ ಒರಟ ಪ್ರಶಾಂತ್‌ ಖಡಕ್‌ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರದ ಹಾಡುಗಳು ಕೇಳುವಂತಿವೆ. ರಾದ್ಯಾ ಪಾತ್ರ ಕತೆಗೆ ಪೂರಕವಾಗಿದೆ. ಸಾಹಸ ದೃಶ್ಯಗಳಲ್ಲಿ ನಟ ಪ್ರವೀಣ್‌ ಕುಮಾರ್‌ ಸಾಹಸ ದೃಶ್ಯಗಳಲ್ಲಿ ‘ಹೀರೋ’. ಪ್ರಶಾಂತ್‌ ನಟನಾ, ಹರಿಣಿ, ಕಲ್ಯಾಣಿ ಅವರ ಪಾತ್ರಗಳು ಸೆಂಟಿಮೆಂಟ್‌ ಸಾರಥಿಗಳು.