ಕೃಷ್ಣಂ ಪ್ರಣಯ ಸಖಿ ಚಿತ್ರದ ನಂತರ ರಾಮ್ ಚಿತ್ರದ ಶೂಟಿಂಗ್‌ನಲ್ಲಿ ಗೋಲ್ಡನ್‌ ಸ್ಟಾರ್‌

| Published : Nov 15 2024, 12:33 AM IST / Updated: Nov 15 2024, 05:12 AM IST

Golden Star Ganesh

ಸಾರಾಂಶ

ಕೃಷ್ಣಂ ಪ್ರಣಯ ಸಖಿ ಚಿತ್ರದ ನಂತರ ಗಣೇಶ್‌ ಏನು ಮಾಡುತ್ತಿದ್ದಾರೆ ಎನ್ನುವ ಕುತೂಹಲಕ್ಕೆ ಇಲ್ಲಿದೆ ಉತ್ತರ.

ಆರ್‌. ಕೇಶವಮೂರ್ತಿ

ಕೃಷ್ಣಂ ಪ್ರಣಯ ಸಖಿ ಚಿತ್ರದ ಯಶಸ್ಸಿನಲ್ಲಿ ಸೈಲೆಂಟ್‌ ಆಗಿಬಿಟ್ಟಿದ್ದೀರಲ್ಲ?

ಅಯ್ಯೋ ಎಲ್ಲಿ ಸೈಲೆಂಟ್‌ ಆಗಿದ್ದೇನೆ! ಹೊಸ ಚಿತ್ರದ್ದು 12 ದಿನಗಳ ಶೂಟಿಂಗ್‌ ಮುಗಿಸಿದ್ದೇನೆ. ಮತ್ತೊಂದು ಶೆಡ್ಯೂಲ್‌ ಚಿತ್ರೀಕರಣಕ್ಕೆ ತಯಾರಿ ಮಾಡಿಕೊಳ್ಳುತ್ತಿದ್ದೇನೆ.

ಯಾವ ಚಿತ್ರದ ಶೂಟಿಂಗ್‌ನಲ್ಲಿದ್ದೀರಿ?

ನನ್ನ ಮತ್ತು ರಮೇಶ್‌ ಅರವಿಂದ್‌ ಕಾಂಬಿನೇಶನ್‌ನ ‘ಯುವರ್ಸ್‌ ಸಿನ್ಸಿಯರ್ಲಿ ರಾಮ್‌’ ಚಿತ್ರದ್ದು. ಮೈಸೂರಿನಲ್ಲಿ ಚಿತ್ರೀಕರಣ. ಈಗಷ್ಟೇ ಮೊದಲ ಹಂತದ ಶೂಟಿಂಗ್‌ ಮುಗಿಸಿದ್ದೇವೆ.

ರೆಟ್ರೂ ರೀತಿ ಸಿನಿಮಾ ಅಲ್ವಾ, ಯಾವ ರೀತಿ ಇರುತ್ತದೆ ಸಿನಿಮಾ?

ಹಳೆಯ ಫೀಲ್‌ ಇರುವ ಮೇಕಿಂಗ್‌ ಸಿನಿಮಾ. ಓಲ್ಡ್‌ ಈಸ್‌ ಗೋಲ್ಡ್‌ ಎನ್ನುವ ದಿನಗಳ ಕತೆ. ನಾವು ಶೂಟಿಂಗ್‌ ಮಾಡುವ ಜಾಗಗಳು, ಕಾಸ್ಟ್ಯೂಮ್‌ ಎಲ್ಲವೂ ರೀ ಕ್ರಿಯೇಟ್‌ ಮಾಡಬೇಕಿದೆ. ಸೆಟ್‌ಗಳಲ್ಲೇ ಹೆಚ್ಚಿನ ಶೂಟಿಂಗ್‌ ಇದೆ. ಹೀಗಾಗಿ ಚಿತ್ರೀಕರಣಕ್ಕೆ ಮೈಸೂರು ಆಯ್ಕೆ ಮಾಡಿದ್ದೇವೆ. ಯಾವ ರೀತಿ ಸಿನಿಮಾ ಎಂಬುದಕ್ಕೆ ನೀವು ಟೈಟಲ್‌ ಟೀಸರ್‌ ನೋಡಿದ್ದೀರಲ್ಲ, ಇಡೀ ಸಿನಿಮಾ ಅಷ್ಟೇ ಭಾವುಕ, ಆಪ್ತವಾಗಿ ಮೂಡಿ ಬರುತ್ತದೆ.

ರಮೇಶ್‌ ಅರವಿಂದ್‌ ಅವರ ಜತೆಗಿನ ನಿಮ್ಮ ಕೆಲಸ ಹೇಗಿದೆ?

ನನ್ನ ಜತೆಗೆ ಅವರ ಪಾತ್ರದ ಚಿತ್ರೀಕರಣ ಇನ್ನೂ ಶುರುವಾಗಿಲ್ಲ. ಇಲ್ಲಿಯವರೆಗೂ ನನ್ನ ಪಾತ್ರದ ಚಿತ್ರೀಕರಣ ಮಾತ್ರ ಆಗಿದೆ. ಮುಂದಿನ ಶೆಡ್ಯೂಲ್‌ನಲ್ಲಿ ರಮೇಶ್‌ ಅರವಿಂದ್‌ ಅವರು ಬರಬಹುದು.

ಕೃಷ್ಣಂ ಪ್ರಣಯ ಸಖಿ ಚಿತ್ರದ ಯಶಸ್ಸಿನ ಬಗ್ಗೆ ಏನು ಹೇಳುತ್ತೀರಿ?

ಅದು ಕನ್ನಡ ಚಿತ್ರರಂಗದ ಗೆಲುವು. ಒಂದು ಸಿನಿಮಾ ಗೆದ್ದರೆ ಎಷ್ಟು ಪಾಸಿಟಿವ್‌ ವಾತಾವರಣ ಇರುತ್ತದೆ ಎಂಬುದನ್ನು ನೋಡಿದ್ದೇನೆ. ಎಲ್ಲಾ ಕನ್ನಡ ಸಿನಿಮಾಗಳು ಹೀಗೆ ಗೆಲ್ಲಬೇಕು ಅಂತ ಆಶಿಸುತ್ತೇನೆ.

ಕೃಷ್ಣಂ ಪ್ರಣಯ ಸಖಿ ಚಿತ್ರದ ಪಾರ್ಟ್‌ 2 ಬರಲಿದೆಯೇ?

ಸದ್ಯಕ್ಕೆ ಆ ರೀತಿಯ ಯಾವ ಆಲೋಚನೆಯೂ ಇಲ್ಲ.

ನಿಮ್ಮ ಸಿನಿಮಾ ಮತ್ತೆ ಯಾವಾಗ ಪ್ರೇಕ್ಷಕರ ಮುಂದೆ?

ಮುಂದಿನ ವರ್ಷವೇ ಬರೋದು. ‘ಯುವರ್ಸ್‌ ಸಿನ್ಸಿಯರ್ಲಿ ರಾಮ್‌’ ಚಿತ್ರ ಬರಲಿದೆ. ಇದರ ಜತೆಗೆ ಮತ್ತೊಂದು.

ಕತೆಗಳ ಆಯ್ಕೆಯಲ್ಲಿ ಏನಾದರೂ ಬದಲಾವಣೆ ಮಾಡಿಕೊಂಡಿದ್ದೀರಾ?

ಹಾಗೇನು ಇಲ್ಲ. ಕಲಾವಿದನಾಗಿ ಎಲ್ಲಾ ರೀತಿಯ ಕತೆಗಳನ್ನು ಕೇಳಬೇಕು. ಯಾವ ಕತೆ ಗೆಲ್ಲುತ್ತದೆ ಎಂಬುದು ಮೊದಲೇ ಗೊತ್ತಾಗಲ್ಲ. ನನ್ನ ಪ್ರಕಾರ ಒಳ್ಳೆಯ ಸಿನಿಮಾ ಅಥವಾ ಕತೆ ಎಂದರೆ ಕಲಾವಿದನನ್ನು ತೃಪ್ತಿ ಪಡಿಸಬೇಕು, ಪ್ರೇಕ್ಷಕನನ್ನು ಚಿತ್ರಮಂದಿರಕ್ಕೆ ಕರೆಸಿ ಎಂಗೇಜ್‌ ಮಾಡಿಸಬೇಕು, ನಿರ್ಮಾಪಕನಿಗೆ ಕಾಸು ಬರಬೇಕು.

ಈಗ ಚಿತ್ರ ಮಾಡುವುದಕ್ಕಿರುವ ಅನುಕೂಲತೆಗಳೇನು?

ಭಾಷೆಯ ಬೇಲಿ ಇಲ್ಲ. ಕತೆಗಳಿಗೆ, ಕಲಾವಿದರಿಗೆ ಯಾವ ಬೌಂಡರಿಯೂ ಇಲ್ಲ. ಒಳ್ಳೆಯ ಸಿನಿಮಾ ಮಾಡಿದರೆ ಯಾವುದೇ ಭಾಷೆಯ ಪ್ರೇಕ್ಷಕರನ್ನೂ ಬೇಕಾದರೂ ತಲುಪಬಹುದು.

ಇತ್ತೀಚೆಗೆ ನೀವು ನೋಡಿದ ಸಿನಿಮಾಗಳು ಯಾವುವು?

ಶೂಟಿಂಗ್‌ ಒತ್ತಡದಲ್ಲಿ ನೋಡಕ್ಕೆ ಆಗುತ್ತಿಲ್ಲ. ನೋಡಿದರೂ ಪೂರ್ತಿ ನೋಡುತ್ತಿಲ್ಲ. ಹೆಚ್ಚು ಹೆಚ್ಚು ಪುಸ್ತಕ ಓದುತ್ತಿದ್ದೇನೆ. ನನ್ನ ಓದು ಕತೆಗಳನ್ನು ಕೇಳಕ್ಕೆ, ನನ್ನ ಪಾತ್ರಗಳನ್ನು ಡಿಸೈನ್‌ ಮಾಡಿಕೊಳ್ಳುವುದಕ್ಕೆ ಅನುಕೂಲ ಆಗುತ್ತಿದೆ. ಎಲ್ಲಕ್ಕಿಂತ ಮುಖ್ಯವಾಗಿ ನಾಲೆಡ್ಜ್‌ಗಾಗಿ ಓದುತ್ತಿದ್ದೇನೆ.

ತುಳು ಚಿತ್ರ ನಿರ್ಮಾಣ ಮಾಡುತ್ತಿದ್ದೀರಲ್ಲ?

ಹೌದು. ಅದರ ಎಲ್ಲಾ ಜವಾಬ್ದಾರಿ ನನ್ನ ಪತ್ನಿ ಶಿಲ್ಪಾ ಅವರದ್ದು. ಅವರೇ ಆ ಚಿತ್ರಕ್ಕೆ ನಿರ್ಮಾಪಕರು. ಈಗ ಸ್ಕ್ರಿಪ್ಟ್‌ ಫೈನಲ್‌ ಆಗಿದೆ. ಮಂಗಳೂರಿನ ಹೊಸ ಪ್ರತಿಭೆ ನಿತ್ಯ ಪ್ರಕಾಶ್‌ ಎಂಬುವವರನ್ನು ಈ ಚಿತ್ರದ ಮೂಲಕ ಪರಿಚಯಿಸುತ್ತಿದ್ದೇವೆ.

ತುಳು ಚಿತ್ರ ನಿರ್ಮಾಣ ಮಾಡೋ ಐಡಿಯಾ ನಿಮ್ಮದಾ ಅಥವಾ ಮನೆಯವರದ್ದಾ?

ಈ ಯೋಚನೆ ಶಿಲ್ಪಾ ಅವರದ್ದೇ. ಅವರ ಮಾತೃ ಭಾಷೆ ತುಳು. ನಮ್ಮ ಮಾತೃ ಭಾಷೆಯಲ್ಲೊಂದು ಚಿತ್ರ ನಿರ್ಮಿಸಬೇಕು ಎಂದು ಕೇಳಿದರು. ನಾನು ಮಾಡು ಅಂತ ಹೇಳಿದೆ. ನನಗೂ ಖುಷಿ ಆಗಿದೆ. ಗೋಲ್ಡನ್‌ ಮೂವೀಸ್‌ ಮೂಲಕ ಚಿತ್ರ ನಿರ್ಮಿಸುತ್ತಿದ್ದೇವೆ. ಕತೆ ಕೇಳಿದ್ದಾರೆ. ಎಕ್ಸೈಟ್‌ ಆಗಿದ್ದಾರೆ. ಫನ್‌ ಆಂಡ್‌ ಎಮೋಷನ್‌ ಇರುವ ಕತೆ.