ಸಾರಾಂಶ
ಸಿನಿವಾರ್ತೆ
‘ಭಾವ ತೀರ ಯಾನ ಪ್ರೇಮದ ಹೊಸ ಆಯಾಮದ ಬಗ್ಗೆ ಬೆಳಕು ಚೆಲ್ಲುವ ಸಿನಿಮಾ. ಇಲ್ಲೊಂದು ಪರಿಶುದ್ಧ ಪ್ರೇಮವಿದೆ. ಇದಕ್ಕೆ ಕೃಷ್ಣ ರಾಧೆಯರೇ ಸ್ಫೂರ್ತಿ’ ಎಂದು ನಿರ್ದೇಶಕ ಮಯೂರ್ ಅಂಬೆಕಲ್ಲು ಹೇಳಿದ್ದಾರೆ.
ಮಯೂರ್ ಹಾಗೂ ತೇಜಸ್ ಕಿರಣ್ ನಿರ್ದೇಶನದ ‘ಭಾವ ತೀರ ಯಾನ’ ಸಿನಿಮಾ ಫೆ.21ಕ್ಕೆ ಬಿಡುಗಡೆಯಾಗಲಿದೆ.
‘ತೇಜಸ್ ಹಾಗೂ ನಾನು ಕಾಲೇಜು ಸ್ನೇಹಿತರು. ಕಾಲೇಜು ದಿನದಿಂದಲೇ ಸಿನಿಮಾ ಬಗ್ಗೆ ಚರ್ಚಿಸುತ್ತ ಶಾರ್ಟ್ ಮೂವಿ ಮಾಡಿಕೊಂಡು ಬೆಳೆದವರು. ಈ ಹಿಂದೆ ಶಾಖಾಹಾರಿ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡುತ್ತಿದ್ದಾಗ, ಪೂರ್ಣ ಪ್ರಮಾಣದ ನಿರ್ದೇಶಕನಾಗಿ ಸಿನಿಮಾ ಮಾಡುವ ಹುಮ್ಮಸ್ಸು ಬಂತು. ಮೂರು ವರ್ಷಗಳ ಶ್ರಮ ಭಾವ ತೀರ ಯಾನ ಸಿನಿಮಾದ ಹಿಂದಿದೆ. ನಿಜವಾದ ಪ್ರೀತಿ, ಟ್ರಯಾಂಗಲ್ ಲವ್ಸ್ಟೋರಿ, ಊಹಿಸಲಸಾಧ್ಯ ಕ್ಲೈಮ್ಯಾಕ್ಸ್, ಹೊಸ ಸಾಧ್ಯತೆಗಳು ಸಿನಿಮಾ ಹೈಲೈಟ್’ ಎಂದೂ ಮಯೂರ್ ಹೇಳಿದ್ದಾರೆ.
ಮತ್ತೋರ್ವ ನಿರ್ದೇಶಕ, ನಾಯಕ ತೇಜಸ್ ಕಿರಣ್, ‘ಹೊಸ ವಿಚಾರವೊಂದರ ಭಾವಪೂರ್ಣ ಪ್ರಸ್ತುತಿ ನಮ್ಮ ಸಿನಿಮಾದ ವಿಶೇಷತೆ’ ಎಂದರು. ಶೈಲೇಶ್, ಲಕ್ಷ್ಮಣ ಬಿಕೆ ನಿರ್ಮಾಪಕರು.
ಫೆ.21ಕ್ಕೆ ಸಿನಿಮಾ ತೆರೆಗೆ ಬರಲಿದೆ. ಆರೋಹಿ ನೈನಾ, ಚಂದನಾ ಅನಂತಕೃಷ್ಣ ಹಾಗೂ ಅನೂಷಾ ಕೃಷ್ಣ ಈ ಸಿನಿಮಾದ ನಾಯಕಿಯರು. ರಮೇಶ್ ಭಟ್ ಹಾಗೂ ವಿದ್ಯಾ ಮೂರ್ತಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.