ಸಾರಾಂಶ
ಗ್ರೀನ್ ಆಸ್ಕರ್ ಗೌರವಕ್ಕೆ ಭಾಜನವಾಗಿರುವ ಕಪ್ಪೆರಾಗ ಮ್ಯೂಸಿಕಲ್ ಡಾಕ್ಯುಮೆಂಟರಿ ನಾಳೆ (ಮಾ.16) ಬಿಡುಗಡೆಯಾಗುತ್ತಿದೆ.
ಇಡೀ ಜಗತ್ತಿನಲ್ಲಿ ಪಶ್ಚಿಮ ಘಟ್ಟಗಳ ಶರಾವತಿ ಕಣಿವೆಯ ಹಳ್ಳವೊಂದರಲ್ಲಿ ಮಾತ್ರ ಇರುವ ‘ಕುಂಬಾರ’ ಎಂಬ ವಿಶಿಷ್ಟ ಕಪ್ಪೆ ಪ್ರಭೇದದ ಕುರಿತ ಮ್ಯೂಸಿಕಲ್ ಸಾಕ್ಷ್ಯಚಿತ್ರ ‘ಕಪ್ಪೆರಾಗ’. ಪ್ರಶಾಂತ್ ಎಸ್ ನಾಯಕ ಈ ಸಿನಿಮಾದ ನಿರ್ದೇಶಕ ಹಾಗೂ ಛಾಯಾಗ್ರಾಹಕ. ಬೆಂಗಳೂರಿನ ಪ್ರೆಸ್ಟೀಜ್ ಶ್ರೀಹರಿ ಖೋಡೆ ಸೆಂಟರ್ ಫಾರ್ ಪರ್ಫಾಮಿಂಗ್ ಆರ್ಟ್ಸ್ ಸಭಾಂಗಣದಲ್ಲಿ ಮಾ.16 ಸಂಜೆ 4 ಗಂಟೆಗೆ ನಡೆಯುವ ಕಾರ್ಯಕ್ರಮದಲ್ಲಿ ಈ ಕಿರುಚಿತ್ರ ಬಿಡುಗಡೆಯಾಗಲಿದೆ. ಇತ್ತೀಚೆಗೆ ನಡೆದ ಸುದ್ದಿಗೋಷ್ಠಿಯಲ್ಲಿ ನಿರ್ದೇಶಕ ಪ್ರಶಾಂತ್, ‘ಕಪ್ಪೆರಾಗ’ ಎಂಬ ಆರು ನಿಮಿಷಗಳ ಡಾಕ್ಯುಮೆಂಟರಿ ಹಿಂದಿರುವ ನಾಲ್ಕೈದು ವರ್ಷಗಳ ಪರಿಶ್ರಮದ ಕಥೆ ಹೇಳಿದರು. ನಿರ್ಮಾಪಕ ಹಾಗೂ ಹಾಡು ಬರೆದ ಪ್ರದೀಪ್ ಕೆ ಶಾಸ್ತ್ರಿ, ಸಂಗೀತ ನಿರ್ದೇಶಕ ಅಶ್ವಿನ್ ಪಿ ಕುಮಾರ್, ಈ ಸಾಕ್ಷ್ಯಚಿತ್ರದಲ್ಲಿ ಹಾಡಿದ ಅರುಂಧತಿ ವಸಿಷ್ಠ ಹಾಗೂ ಚಿತ್ರತಂಡದವರು ಸುದ್ದಿಗೋಷ್ಠಿಯಲ್ಲಿದ್ದರು.