ಸಾರಾಂಶ
ಚಿತ್ರ: ಕೃಷ್ಣಂ ಪ್ರಣಯ ಸಖಿ
ತಾರಾಗಣ: ಗಣೇಶ್, ಮಾಳವಿಕಾ ನಾಯರ್, ಶರಣ್ಯಾ ಶೆಟ್ಟಿ, ರಂಗಾಯಣ ರಘು, ಸಾಧು ಕೋಕಿಲ
ನಿರ್ದೇಶನ: ಶ್ರೀನಿವಾಸ ರಾಜು
ರೇಟಿಂಗ್ : 3
ಪ್ರಿಯಾ ಕೆರ್ವಾಶೆ
ಈ ಸಿನಿಮಾದಲ್ಲಿ ಪ್ರಮುಖವಾಗಿ ಗಮನ ಸೆಳೆಯೋದು ಎರಡು ಅಂಶ. ಮೊದಲನೆಯದು ಹಾಡು, ಎರಡನೆಯದು ಆ ಹಾಡಿಗೆ ಡ್ರೀಮೀ ಟಚ್ ಕೊಡುವ ವಿಶುವಲ್ಸ್. ಹೀಗೆ ಸಿನಿಮಾವನ್ನು ದೃಶ್ಯ ಕಾವ್ಯವಾಗಿಸಿದ ಕ್ರೆಡಿಟ್ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ, ಛಾಯಾಗ್ರಾಹಕ ವೆಂಕಟ್ ರಾಮ್ ಪ್ರಸಾದ್ ಹಾಗೂ ಸಂಕಲನಕಾರ ಕೆ ಎಂ ಪ್ರಕಾಶ್ ಅವರಿಗೆ ಸಲ್ಲಬೇಕು.
ಇದೊಂದು ಪ್ರೇಮ ಕಥೆ. ಜೊತೆಗೆ ಹಾಸ್ಯದ ಹೊನಲಿದೆ. ಮನಸ್ಸಿಗೆ ಬೇಜಾರಾಗೋ ಅಂಶ ಕಡಿಮೆ. ಹೀಗಾಗಿ ಕಥೆ ಗಾಢವಾಗಿ ಮನಸ್ಸಿಗೆ ತಟ್ಟೋದಕ್ಕಿಂತ ನವಿರಾಗಿ ಕಚಗುಳಿ ಇಡುತ್ತದೆ.
ಸಿನಿಮಾ ಶುರುವಾಗೋದೇ ಬಿಲಿಯನೇರ್ ಕೃಷ್ಣನ ರಾಸಲೀಲೆಯಿಂದ. ಕನಸಲ್ಲೂ ನನಸಲ್ಲೂ ಮದುವೆಯ ಹಂಬಲದಲ್ಲಿರುವ ಆತನಿಗೆ ವಯಸ್ಸು 32, ಇನ್ನೂ ಸಿಂಗಲ್. ಅಷ್ಟಗಲ ಕಣ್ಣುಗಳಲ್ಲಿ ಭಾವನೆ ಚಿಮ್ಮಿಸುವ ಹುಡುಗಿ ಪ್ರಣಯ, ಈ ಕೃಷ್ಣನ ಸೆಕ್ರೆಟರಿಯಂತೆ ಜೊತೆಗಿರುತ್ತಾಳೆ.
ಸೀನ್ ಕಟ್ ಮಾಡಿದರೆ ಪ್ರಣಯ ಅನಾಥಾಶ್ರಮದಲ್ಲಿದ್ದಾಳೆ. ಆಕಸ್ಮಿಕವಾಗಿ ಕೃಷ್ಣ ಅವಳನ್ನು ನೋಡಿದ್ದಾನೆ. ಮೊದಲ ನೋಟದಲ್ಲೇ ಲವ್ವಾಗಿದೆ. ಅವಳ ಮನ ಗೆಲ್ಲಲು ಕೃಷ್ಣ, ಡ್ರೈವರ್ ಆಗಿ ಅನಾಥಾಶ್ರಮಕ್ಕೆ ಬರುತ್ತಾನೆ. ಅಲ್ಲಿ ಶುರುವಾಗುವ ಪ್ರೀತಿ, ಕೃಷ್ಣ ಬಿಲಿಯನೇರ್ ಅಂತ ಪ್ರಣಯನಿಗೆ ತಿಳಿದ ಮೇಲೂ ಉಳಿಯುತ್ತಾ ಅನ್ನೋದು ಒಂದು ಟ್ವಿಸ್ಟ್, ಹೀಗೆ ಸಿಕ್ಕ ಪ್ರಣಯ, ಕೃಷ್ಣನ ಐಶಾರಾಮಿ ಮನೆಯಲ್ಲಿ ಸಹಾಯಕಿಯಂತೆ ಯಾಕಿರುತ್ತಾಳೆ ಅನ್ನೋದು ಕಥೆಯ ಇನ್ನೊಂದು ಟ್ವಿಸ್ಟ್.
ಗಣೇಶ್ ಎಂದಿನಂತೆ ಕೃಷ್ಣನ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಮಾಳವಿಕಾ ನಾಯರ್ ಕಣ್ಣುಗಳಲ್ಲೇ ಮಾತಾಡೋದು ಚಂದ. ರಂಗಾಯಣ ರಘು ತೆಲುಗು ಮಿಶ್ರಿತ ಕನ್ನಡದಲ್ಲಿ ನಗಿಸುತ್ತಾರೆ. ಸಾಧುಕೋಕಿಲ, ಗಿರೀಶ್ ಶಿವಣ್ಣ ಕೀಟಲೆಯೂ ಎಂಟರ್ಟೇನಿಂಗ್. ಆದರೆ ಥಿಯೇಟರ್ನಿಂದ ಹೊರಬಂದಮೇಲೂ ಮನಸ್ಸಲ್ಲುಳಿಯುವುದು ಹಾಡಿನ ಗುಂಗು ಮತ್ತು ದೃಶ್ಯದ ಸೊಗಸು.