ಸಾರಾಂಶ
ಸಿನಿವಾರ್ತೆ
‘ನನ್ನ ಹೊಸ ಚಿತ್ರದಲ್ಲಿ ನಾನು ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ. ತುಂಬಾ ಖಡಕ್ ಆಗಿರುವ ಮಾಸ್ ಪೊಲೀಸ್ ಕ್ಯಾರೆಕ್ಟರ್ ಈ ಚಿತ್ರದಲ್ಲಿದೆ. ‘ಶತ್ರು’ ಚಿತ್ರದಲ್ಲಿ ನಾನು ಪೊಲೀಸ್ ಪಾತ್ರ ಮಾಡಿದ್ದೆ. 11 ವರ್ಷಗಳ ನಂತರ ಮತ್ತೆ ಪೊಲೀಸ್ ಆಗುತ್ತಿದ್ದೇನೆ. ಪ್ರೇಮ ಕತೆಗಳನ್ನೇ ಹೆಚ್ಚಾಗಿ ಮಾಡುತ್ತಿದ್ದೆ. ಮಾಸ್ ಸಿನಿಮಾ ಮಾಡಬೇಕು ಎಂದು ತುಂಬಾ ದಿನಗಳಿಂದ ಕಾಯುತ್ತಿದ್ದೆ. ಈ ಚಿತ್ರದ ಮೂಲಕ ಮತ್ತೆ ಆ್ಯಕ್ಷನ್- ಮಾಸ್ ಜಾನರ್ಗೆ ಮರಳಿದ್ದೇನೆ’.
- ಹೀಗೆ ಹೇಳಿದ್ದು ನೆನಪಿರಲಿ ಪ್ರೇಮ್. ತಮ್ಮ ಹೊಸ ಸಿನಿಮಾದ ಮುಹೂರ್ತ ಸಂದರ್ಭದಲ್ಲಿ ಅವರು ಮಾತನಾಡಿದರು. ಈ ಚಿತ್ರವನ್ನು ತೇಜಸ್ ನಿರ್ದೇಶಿಸುತ್ತಿದ್ದಾರೆ. ಈ ಸಿನಿಮಾ ಕುರಿತು ತೇಜಸ್, ‘ಈ ಚಿತ್ರಕ್ಕೆ ಇನ್ನೂ ಹೆಸರಿಟ್ಟಿಲ್ಲ. ಪ್ರೇಮ್ ಅವರನ್ನು ಈ ಚಿತ್ರದ ಮೂಲಕ ರೀ ಬ್ರ್ಯಾಂಡಿಂಗ್ ಮಾಡುತ್ತಿದ್ದೇವೆ. ಕತೆಗೆ ಪ್ರೇಮ್ ಸೂಕ್ತವಾಗಿದ್ದಾರೆ. ಆ್ಯಕ್ಷನ್ ಜತೆಗೆ ಸಸ್ಪೆನ್ಸ್, ಥ್ರಿಲ್ಲರ್ ಕೂಡ ಇರುತ್ತದೆ. ಈ ತಿಂಗಳ ಕೊನೆಯಲ್ಲಿ ಶೂಟಿಂಗ್ಗೆ ಹೋಗಲಿದ್ದೇವೆ. ರಂಗಾಯಣ ರಘು ಚಿತ್ರದ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ’ ಎಂದರು.
ವಾಸುಕಿ ವೈಭವ್ ಸಂಗೀತ, ಆನಂದ್ ಮೀನಾಕ್ಷಿ ಕ್ಯಾಮೆರಾ ಚಿತ್ರಕ್ಕಿದೆ. ಮಧು ಗೌಡ ಚಿತ್ರದ ನಿರ್ಮಾಪಕರು. ‘ಚಿತ್ರಕ್ಕೆ ಇಂತಿಷ್ಟೇ ಬಜೆಟ್ ಅಂತಿಲ್ಲ. ಯಾವುದೇ ಕೊರತೆ ಆಗದಂತೆ ಚಿತ್ರವನ್ನು ಮಾಡಬೇಕು ಎನ್ನುವ ನಿಟ್ಟಿನಲ್ಲಿ ತಯಾರಿ ಮಾಡಿಕೊಂಡಿದ್ದೇವೆ’ ಎಂದು ಮಧು ಗೌಡ ಹೇಳಿದರು.