ಪೀಟರ್‌ ಸಿನಿಮಾ ಇವತ್ತೇ ರಿಲೀಸ್‌

ಸುಕೇಶ್‌ ಶೆಟ್ಟಿ ನಿರ್ದೇಶನ, ರವಿ ಹಿರೇಮಠ್‌, ರಾಕೇಶ್‌ ಹೆಗ್ಗದ್ದೆ ನಿರ್ಮಾಣ, ರಾಜೇಶ್‌ ಧ್ರುವ, ರವೀಷ್ಕಾ ಶೆಟ್ಟಿ, ಡಾ.ಜಾನ್ವಿ ರಾಯಲ ನಟನೆಯ ‘ಪೀಟರ್‌’ ಸಿನಿಮಾ ಇಂದು ಬಿಡುಗಡೆ. ಈ ಹಿನ್ನೆಲೆಯಲ್ಲಿ ಸಿನಿಮಾ ಬಗ್ಗೆ ರಾಜೇಶ್‌ ಧ್ರುವ ಮಾತು.

- ಪೀಟರ್‌ ಸಿನಿಮಾದ ಮುಖ್ಯ ಹೈಲೈಟ್‌ ಅಂದರೆ ಬದುಕಿನ ಕಟುವಾಸ್ತವವನ್ನು ಭಿನ್ನ ಶೈಲಿಯಲ್ಲಿ ನಿರೂಪಿಸಿರುವುದು. ಇಲ್ಲಿ ಯಾವುದೂ ಫೇಕ್‌ ಅನಿಸೋದಿಲ್ಲ. ಪಾತ್ರ, ಸನ್ನಿವೇಶ, ಪರಿಸರ ಎಲ್ಲವೂ ಬಹಳ ಸಹಜವಾಗಿ ಜೀವಂತಿಕೆಯಿಂದ ಮೂಡಿಬಂದಿದೆ.

- ನಾನು ನಿರ್ವಹಿಸಿರುವ ಪಾತ್ರ ಪೀಟರ್‌. ಆತ ಮಾನವೀಯ ಗುಣದ, ಹಣದ ಲಾಲಸೆ ಇಲ್ಲದ, ಗೆಳೆತನಕ್ಕೆ ಮಹತ್ವ ಕೊಡುವ ಹುಡುಗ. ಆತನ ಬದುಕಿನಲ್ಲೂ ಸಂಬಂಧಗಳ ಸಂಕೀರ್ಣತೆ, ಪ್ರೇಮದ ಬಿಸುಪುಗಳೆಲ್ಲ ಇವೆ. ಅದನ್ನೂ ಮೀರಿ ಚೆಂಡೆ ಅವನ ಎಕ್ಸ್‌ಪ್ರೆಶನ್‌ ಆಗಿದೆ. ಆ ಚೆಂಡೆಯ ಪೆಟ್ಟು ಬದುಕಿನ ಮೇಲೂ ಬಿದ್ದಾಗ ಹೇಗೆ ಎಲ್ಲವೂ ಬದಲಾಗುತ್ತದೆ ಎಂಬುದು ಸಿನಿಮಾದ ಒನ್‌ಲೈನ್‌.


- ಇಡೀ ಸಿನಿಮಾ ಹಳ್ಳಿಯಲ್ಲೇ ನಡೆಯುತ್ತದೆ. ಅಲ್ಲಿನ ಸಣ್ಣ ಸಣ್ಣ ವಿವರಗಳು, ಜನರ ಮನಸ್ಥಿತಿ, ಪ್ರೇಮ, ಗೆಳೆತನ, ಲಾಲಸೆ, ದ್ವೇಷ ಎಲ್ಲವೂ ಸಿನಿಮಾದಲ್ಲಿ ಬರುತ್ತದೆ.

- ಚಿತ್ರದ ಆರಂಭದಿಂದಲೂ ನಾವು ಪ್ರೇಕ್ಷಕರ ಜೊತೆಗೆ ಕನೆಕ್ಷನ್‌ ಇಟ್ಟುಕೊಂಡಿದ್ದೇವೆ. ಹೀಗಾಗಿ ಈ ಸಿನಿಮಾವನ್ನು ಜನ ಪ್ರೀತಿಯಿಂದ ನೋಡುವ ಭರವಸೆ ಇದೆ. ಪ್ರೀಮಿಯರ್‌ ಶೋಗಳಿಗೆ ಉತ್ತಮ ಪ್ರತಿಕ್ರಿಯೆ ಸಿಗುತ್ತಿರುವುದು ನಮ್ಮ ಭರವಸೆ ಹೆಚ್ಚಿಸಿದೆ.

ಸದ್ಯಕ್ಕೆ ಕಿರುತೆರೆ, ಹಿರಿತೆರೆ ಎಂಬ ಭಿನ್ನತೆ ಇಲ್ಲ

- ನನ್ನ ವೈಯಕ್ತಿಕ ವಿಚಾರಕ್ಕೆ ಬಂದರೆ ಕಿರುತೆರೆ ಹಿನ್ನೆಲೆಯಿಂದ ಬಂದಿರುವ ನನಗೆ ಸದ್ಯಕ್ಕೆ ಕಿರುತೆರೆ, ಹಿರಿತೆರೆ ಎಂಬ ಭಿನ್ನತೆ ಇಲ್ಲ. ಪ್ರತಿಭೆಗೆ ನೀರೆರೆಯುವಂಥಾ ಕೆಲಸ ಮಾಡುತ್ತ ಹೋಗಬೇಕು, ಪ್ರಾಮಾಣಿಕತೆಯಿಂದ ಬೆಳೆಯಬೇಕು ಅನ್ನುವ ಆಸೆ ಇದೆ.