ಶ್ರೀರಾಮನ ಒಳ್ಳೇತನ, ಕೃಷ್ಣನ ತುಂಟತನ ಬೆರೆತ ಪಾತ್ರ ನನ್ನದು: ರಿಷಿ

| Published : May 10 2024, 01:32 AM IST / Updated: May 10 2024, 07:51 AM IST

ಶ್ರೀರಾಮನ ಒಳ್ಳೇತನ, ಕೃಷ್ಣನ ತುಂಟತನ ಬೆರೆತ ಪಾತ್ರ ನನ್ನದು: ರಿಷಿ
Share this Article
  • FB
  • TW
  • Linkdin
  • Email

ಸಾರಾಂಶ

ರಿಷಿ ನಟನೆಯ ರಾಮನ ಅವತಾರ ಇಂದು ಬಿಡುಗಡೆಯಾಗಿದೆ. ಈ ಹಿನ್ನೆಲೆಯಲ್ಲಿ ಕವಲುದಾರಿ ನಟನ ಸಂದರ್ಶನ

ಪ್ರಿಯಾ ಕೆರ್ವಾಶೆ

ಆ ರಾಮ ಏಕಪತ್ನೀವ್ರತಸ್ಥ. ನೀವು ಈ ಸಿನಿಮಾದಲ್ಲಿ ಇಬ್ಬಿಬ್ರು ಹುಡುಗೀರ ಹಿಂದೆ ಸುತ್ತೋದು ಕಾಣ್ತಿದೆ?

ಆ ರಾಮನ ಮೌಲ್ಯಗಳನ್ನು ಈ ರಾಮ ಪಾಲಿಸುತ್ತಾನೆ. ಹಾಗೇ ಕೃಷ್ಣನ ತುಂಟತನವೂ ಇವನಲ್ಲಿದೆ. ಇಬ್ಬಿಬ್ರು ಹುಡುಗೀರ ಕಥೆ ಬಹಳ ಇಂಟರೆಸ್ಟಿಂಗ್‌ ಆಗಿ ಬಂದಿದೆ.

- ಕಂಪ್ಲೀಟ್‌ ಸಿನಿಮಾ ಕಾಮಿಡಿಯಾಗಿಯೇ ಇದೆಯಾ?

ಸಿನಿಮಾದಲ್ಲಿ ಕಾಮಿಡಿಯ ಹೊದಿಕೆ ಇದೆ. ಲೈಟ್‌ ಡ್ರಾಮಾ ಇದೆ. ಈ ಕಾಲಕ್ಕೆ ಸಂವಾದಿಯಾಗುವಂಥಾ, ಜನರನ್ನು ಚಿಂತನೆಗೆ ಹಚ್ಚುವ ಅನೇಕ ಅಂಶಗಳಿವೆ.

- ಸಿನಿಮಾದ ಥೀಮ್‌ ಏನು?

ಊರನ್ನು ಉದ್ಧಾರ ಮಾಡಬೇಕು ಎಂದು ಹೊರಟ ನಾಯಕನಿಗೆ ಆಗುವ ಅನಾಹುತಗಳು, ಈ ಜರ್ನಿ ಎಲ್ಲೆಲ್ಲ ಕರ್ಕೊಂಡು ಹೋಗುತ್ತೆ ಎನ್ನುವುದು ಸಿನಿಮಾದ ಒನ್‌ಲೈನ್‌. ಇನ್ನೊಂದು ಕಡೆ ರಾಮಾಯಣ ಮೌಲ್ಯಗಳ ಲೆನ್ಸ್‌ನಲ್ಲಿ ಬದುಕನ್ನು ನೋಡಲು ಶುರು ಮಾಡಿದರೆ ನಮ್ಮ ಗ್ರಹಿಕೆ, ಜೀವನ ಶೈಲಿ ಹೇಗೆ ಬದಲಾಗಬಹುದು ಎಂಬುದನ್ನೂ ಸೂಕ್ಷ್ಮವಾಗಿ ಹೇಳಲು ಹೊರಟಿದ್ದೇವೆ.

- ಸಿನಿಮಾದ ಯಾವ ಅಂಶ ನಿಮಗಿಷ್ಟವಾಯಿತು?

ಇಂದಿನ ಒತ್ತಡ, ಟೆನ್ಶನ್‌ನಲ್ಲಿ ಬದುಕುವ ಮಂದಿಗೆ ಒಳ್ಳೆ ಫ್ರೆಂಡ್‌ ಒಬ್ಬ ಹೆಗಲಿಗೆ ಕೈ ಹಾಕಿ ರಿಲೀಫ್‌ ನೀಡುವ ರೀತಿ ಸಿನಿಮಾವಿದೆ. ರಾಮಾಯಣದ ರಾಮನ ಪಾತ್ರವನ್ನೇ ತೆಗೆದುಕೊಂಡರೆ ಆತ ತನ್ನದಲ್ಲದ ತಪ್ಪಿಗೆ ಕಾಡಿಗೆ ಹೋದ. ಅಲ್ಲಿಗೆ ಹೋಗಿಯೂ ಒಳ್ಳೆಯದನ್ನೇ ಮಾಡಿದ. ಬದುಕಿನ ಸಂಘರ್ಷಗಳನ್ನು ಹಸನ್ಮುಖನಾಗಿಯೇ ಎದುರಿಸಿದ. ಯಾವತ್ತೂ ಯಾವುದರ ಬಗೆಗೂ ಕಂಪ್ಲೇಂಟ್‌ ಮಾಡಲಿಲ್ಲ. ಈ ರೀತಿಯನ್ನು ನಾವೆಲ್ಲ ಕಲೀಬೇಕು ಅನಿಸಿತು. ಇದು ಬಹಳ ಪ್ರಸ್ತುತ ಎಂದೂ ಅನಿಸಿತು.

- ರಾಮ ಅಂದಕೂಡಲೇ ಅಯೋಧ್ಯೆ ನೆನಪಾಗುತ್ತೆ. ಆ ವಿಚಾರ ಏನಾದ್ರೂ ಸಿನಿಮಾದಲ್ಲಿ ಬಂದಿದೆಯಾ?

ಇಲ್ಲಾ. ಇದು ರಾಮಮಂದಿರ ನಿರ್ಮಾಣಕ್ಕಿಂತ ಮೊದಲು ಮಾಡಿರುವ ಸಿನಿಮಾ.

- 99 ರು. ಬೆಲೆಗೆ ಸಿನಿಮಾ ನೀಡುತ್ತಿದ್ದೀರಿ. ಯಾವ ನಿರೀಕ್ಷೆ ಇಟ್ಟುಕೊಂಡಿದ್ದೀರಿ?

ಸಿನಿಮಾದ ಬೆಸ್ಟ್ ಅನುಭವ ಸಿಗುವುದು ಥಿಯೇಟರ್‌ನಲ್ಲೇ. ಹೀಗಾಗಿ ಜನ ಥಿಯೇಟರಿಗೆ ಬಂದು ಸಿನಿಮಾ ನೋಡಲಿ ಎಂಬ ಉದ್ದೇಶದಿಂದ 99 ರು. ಫಿಕ್ಸ್‌ ಮಾಡಿದೆವು. ಪ್ರೀಮಿಯರ್‌ ಶೋ ಹೌಸ್‌ ಫುಲ್‌ ಆಗಿತ್ತು.

- ನಿಮ್ಮ ಟ್ಯಾಲೆಂಟ್‌ಗೆ ತಕ್ಕಂಥಾ ಸಿನಿಮಾಗಳು ಬರ್ತಿವೆಯಾ?

ನಮ್ಮ ಇಂಡಸ್ಟ್ರಿಯಲ್ಲಿ ಟ್ಯಾಲೆಂಟ್‌ ಇದ್ದರೆ ಮಾತ್ರ ಅವಕಾಶ ಸಿಗುವುದು. ನಾನು ಖಾಲಿಯಂತೂ ಕೂತಿಲ್ಲ. ಉಳಿದಂತೆ ನಮ್ಮಲ್ಲಿ ಇನ್ನಷ್ಟು ಒಳ್ಳೊಳ್ಳೆ ಕತೆಗಳು ಬರಬೇಕು. ತಾಂತ್ರಿಕವಾಗಿ ನಮ್ಮ ಸಿನಿಮಾಗಳು ಬಲಗೊಳ್ಳಬೇಕಿದೆ.