ಸಾರಾಂಶ
ಜನಪ್ರಿಯ ನಟಿ ಸುಮನ್ ರಂಗನಾಥ್ ಹಾಗೂ ನಟ ರಾಕೇಶ್ ಮಯ್ಯ ಸಿನಿಮಾ ಬಿಡುಗಡೆ ಪ್ರಚಾರದಲ್ಲಿ ಭಾಗವಹಿಸಿಲ್ಲ. ಚಿತ್ರತಂಡದ ಸಂಪರ್ಕಕ್ಕೂ ಸಿಕ್ಕಿಲ್ಲ’ ಎಂದು ರವಿಕೆ ಪ್ರಸಂಗ ಸಿನಿಮಾದ ನಿರ್ದೇಶಕ ಸಂತೋಷ್ ಕೊಡಂಕೇರಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕನ್ನಡಪ್ರಭ ಸಿನಿವಾರ್ತೆ
‘ನಮ್ಮ ಚಿತ್ರದಲ್ಲಿ ನಟಿಸಿರುವ ಜನಪ್ರಿಯ ನಟಿ ಸುಮನ್ ರಂಗನಾಥ್ ಹಾಗೂ ನಟ ರಾಕೇಶ್ ಮಯ್ಯ ಸಿನಿಮಾ ಬಿಡುಗಡೆ ಪ್ರಚಾರದಲ್ಲಿ ಭಾಗವಹಿಸಿಲ್ಲ. ಚಿತ್ರತಂಡದ ಸಂಪರ್ಕಕ್ಕೂ ಸಿಕ್ಕಿಲ್ಲ. ಮೊದಲು ಪ್ರಚಾರಕ್ಕೆ ಬರುತ್ತೇವೆ ಎಂದಿದ್ದ ಈ ಕಲಾವಿದರು ಕೊನೆಯಲ್ಲಿ ಉಡಾಫೆಯಿಂದ ವರ್ತಿಸಿದ್ದು ನೋವು ತಂದಿದೆ’ ಎಂದು ರವಿಕೆ ಪ್ರಸಂಗ ಸಿನಿಮಾದ ನಿರ್ದೇಶಕ ಸಂತೋಷ್ ಕೊಡಂಕೇರಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಅವರು ಸಿನಿಮಾ ಬಿಡುಗಡೆ ವೇಳೆ ಎದುರಿಸಿದ ಸಮಸ್ಯೆಗಳ ವಿವರ ನೀಡಿದರು. ‘ಒಂದೆಡೆ ಕಲಾವಿದರ ಅಸಹಕಾರ ಸಮಸ್ಯೆಯಾದರೆ ಇನ್ನೊಂದೆಡೆ ಥಿಯೇಟರ್ಗೆ ಜನರನ್ನು ಕರೆತರುತ್ತೇವೆ, ಹಣ ನೀಡಿ, ಶೇ.50ರಷ್ಟು ಜನ ಬರಲಿಲ್ಲ ಅಂದರೆ ಸಿನಿಮಾ ಥಿಯೇಟರ್ನಿಂದ ಎತ್ತಂಗಡಿಯಾಗುತ್ತೆ. ನಾವು ಜನ ಕರೆತರುತ್ತೇವೆ ಎಂದು ಕೆಲವು ಏಜೆನ್ಸಿಗಳು ನಮ್ಮ ಬೆನ್ನು ಬಿದ್ದಿದ್ದವು. ಜೊತೆಗೆ ಸಿನಿಮಾಕ್ಕೆ ಪೈರಸಿ ಕಾಟವೂ ಎದುರಾಯ್ತು ’ ಎಂದು ನಿರ್ದೇಶಕ ಸಂತೋಷ್ ಕೊಡಂಕೇರಿ ಹೇಳಿದ್ದಾರೆ. ನಾಯಕಿ ಗೀತಾ ಭಾರತಿ, ನಿರ್ಮಾಪಕಿ ಪಾವನಾ ಸಂತೋಷ್ ಸುದ್ದಿಗೋಷ್ಠಿಯಲ್ಲಿದ್ದರು. ಈ ವೇಳೆ ಚಿತ್ರತಂಡ ಆಯೋಜಿಸಿದ್ದ ಸ್ಪರ್ಧೆಗಳಲ್ಲಿ ವಿಜೇತರಾದ ಟೈಲರ್ಗಳಿಗೆ ಹೊಲಿಗೆ ಮೆಶೀನ್ ನೀಡಲಾಯಿತು.