ಸಾರಾಂಶ
ಶ್ರೀನಗರ ಕಿಟ್ಟಿ ನಾಯಕನಾಗಿ ನಟಿಸಿರುವ ಸಂಜು ವೆಡ್ಸ್ ಗೀತಾ 2 ಚಿತ್ರ ಜನವರಿ 10ಕ್ಕೆ ತೆರೆಗೆ ಬರುತ್ತಿದೆ.
ನನಗೆ ‘ಸಂಜು ವೆಡ್ಸ್ ಗೀತಾ 2’ ಚಿತ್ರಕ್ಕೆ ಪ್ರೇಮ ಕತೆಯ ಎಳೆಯನ್ನು ಕೊಟ್ಟಿದ್ದೇ ನಟ ಸುದೀಪ್ ಅವರು. ನಾನು ಇಂಥ ಕತೆಗಳನ್ನು ಚೆನ್ನಾಗಿ ಹ್ಯಾಂಡಲ್ ಮಾಡುತ್ತೇನೆಂದು ಮೆಚ್ಚಿಕೊಂಡು ಕತೆ ಕೊಟ್ಟರು.’
- ಹೀಗೆ ಹೇಳಿದ್ದು ನಿರ್ದೇಶಕ ನಾಗಶೇಖರ್. ಶ್ರೀನಗರ ಕಿಟ್ಟಿ ಹಾಗೂ ರಚಿತಾ ರಾಮ್ ನಟನೆಯ, ಛಲವಾದಿ ಕುಮಾರ್ ನಿರ್ಮಾಣದ ‘ಸಂಜು ವೆಂಡ್ಸ್ ಗೀತಾ 2’ ಚಿತ್ರದ ಎರಡನೇ ಹಾಡನ್ನು ಸುದೀಪ್ ಬಿಡುಗಡೆ ಮಾಡಿದರು.ಈ ಸಂದರ್ಭದಲ್ಲಿ ನಾಗಶೇಖರ್, ‘ಜ.10ಕ್ಕೆ ನಮ್ಮ ಚಿತ್ರ ತೆರೆಗೆ ಬರುತ್ತಿದೆ. ಈ ಕತೆಯನ್ನು ಸುದೀಪ್ ನನಗೆ ಕೊಟ್ಟಿದ್ದು ‘ಮಾಣಿಕ್ಯ’ ಶೂಟಿಂಗ್ ಸಂದರ್ಭದಲ್ಲಿ. ಅವರು ಕೊಟ್ಟ ಪ್ರೇಮ ಕತೆಗೆ ಶಿಡ್ಲಘಟ್ಟದ ನೈಜ ಘಟನೆಗಳನ್ನು ಸೇರಿಸಿದ್ದೇನೆ’ ಎಂದರು.ನಿರ್ಮಾಪಕ ಛಲವಾದಿ ಕುಮಾರ್, ‘ನವಿರಾದ ಪ್ರೇಮದ ಜತೆ ರೈತರ ಕತೆಯನ್ನು ಒಳಗೊಂಡ ಈ ಚಿತ್ರವು ಡಾ ರಾಜ್ಕುಮಾರ್ ಅವರ ‘ಬಂಗಾರದ ಮನುಷ್ಯ’ ಚಿತ್ರವನ್ನು ನೆನಪಿಸುತ್ತದೆ’ ಎಂದರು. ಚೇತನ್ ಚಂದ್ರ, ರಂಗಾಯಣ ರಘು, ಸಾಧು ಕೋಕಿಲ, ತಬಲಾನಾಣಿ, ಗಿಚ್ಚಿಗಿಲಿಗಿಲಿ ವಿನೋದ್, ಸಂಪತ್ ಕುಮಾರ್ ನಟಿಸಿದ್ದಾರೆ.