ಸಾರಾಂಶ
ಮೂಲಸೌಕರ್ಯ, ಎಲ್ಲರನ್ನೂ ಒಳಗೊಂಡ ಬೆಳವಣಿಗೆ, ಉದ್ಯೋಗ ಸೃಷ್ಟಿಸುವ ಉತ್ಪಾದನೆ, ಸಬಲೀಕರಣಗೊಳಿಸುವ ವ್ಯವಸ್ಥೆಗಳ ಸರಳೀಕರಣ ಮೋದಿ ಅವರ ಮಂತ್ರ
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನಾಯಕತ್ವದ ಮಾರ್ಗದರ್ಶನದಲ್ಲಿ ಕಳೆದ 11 ವರ್ಷಗಳಲ್ಲಿ ಜನಧನ್ ಖಾತೆ, ಎಲ್ಪಿಜಿ ಸೌಲಭ್ಯ, ಹೆಚ್ಚು ಆಧಾರ್ ನೋಂದಣಿ, ಆರೋಗ್ಯ ರಕ್ಷಣೆ, ‘ಹರ್ ಘರ್ ಜಲ್’ ಯೋಜನೆ, ಭಯೋತ್ಪಾದನೆ ನಿರ್ಮೂಲನೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಮಹತ್ತರ ಪ್ರಗತಿಯನ್ನು ಬಿಜೆಪಿ ಸಾಧಿಸಿದೆ. ಈಗ ಭಾರತ ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗುವ ಹಾದಿಯಲ್ಲಿ ಬಲವಾಗಿ ಸಾಗುತ್ತಿದೆ.
-ಅಶ್ವಿನಿ ವೈಷ್ಣವ್, ರೈಲ್ವೆ, ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವರು
ನವ ಭಾರತ ರೂಪುಗೊಳ್ಳುತ್ತಿದೆ. ಇಲ್ಲಿ ಪ್ರಗತಿಯನ್ನು ಕೇವಲ ಜಿಡಿಪಿಯಲ್ಲಿ ಅಲ್ಲ, ಘನತೆ ಮತ್ತು ಅವಕಾಶಗಳಲ್ಲಿ ಅಳೆಯಲಾಗುತ್ತದೆ. ಕಡಪಾದ ಗೃಹಿಣಿ ಅನ್ನಮ್ ಲಕ್ಷ್ಮಿ ಭವಾನಿ, ಯಶಸ್ವಿ ಸೆಣಬಿನ ಚೀಲ ಉತ್ಪಾದನಾ ಘಟಕವನ್ನು ಪ್ರಾರಂಭಿಸಲು ಮುದ್ರಾ ಸಾಲ ಪಡೆದರು. ಹರಿಯಾಣದ ಜಗದೇವ್ ಸಿಂಗ್ ಎಐ ಅಪ್ಲಿಕೇಶನ್ ಬಳಸಿ ತಮ್ಮ ಬೆಳೆಗಳಿಗೆ ಸಂಬಂಧಿಸಿದ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ. ಮೀರಾ ಮಾಂಝಿ ಉಜ್ವಲ ಯೋಜನೆ ಅಡಿಯಲ್ಲಿ ಎಲ್ಪಿಜಿ ಸಂಪರ್ಕವನ್ನು ಪಡೆದರು. ಇದು ಅವರ ಅಡುಗೆಮನೆಯನ್ನು ಹೊಗೆ ರಹಿತವಾಗಿಸಿತು ಮತ್ತು ಅವರ ಮಕ್ಕಳೊಂದಿಗೆ ಹೆಚ್ಚು ಗುಣಮಟ್ಟದ ಸಮಯವನ್ನು ಕಳೆಯಲು ಅವಕಾಶ ಮಾಡಿಕೊಟ್ಟಿತು.
ಇವು ಭಾರತದಾದ್ಯಂತದ ಹಳ್ಳಿಗಳು, ಪಟ್ಟಣಗಳು ಮತ್ತು ನಗರಗಳಲ್ಲಿ ದಿನನಿತ್ಯದ ವಾಸ್ತವಗಳಾಗಿವೆ. ಈ ಬದಲಾವಣೆಗಳು ರಚನಾತ್ಮಕ ಸುಧಾರಣೆಗಳು ಮತ್ತು ಕೊನೆಯಲ್ಲಿರುವ ನಾಗರಿಕನ ಸಬಲೀಕರಣದಲ್ಲಿ ನಂಬಿಕೆ ಇಟ್ಟಿರುವ ನಾಯಕತ್ವದಿಂದ ಹುಟ್ಟಿಕೊಂಡಿವೆ.
ಕಾರ್ಯರೂಪದಲ್ಲಿ ಅಂತ್ಯೋದಯ
ಆರಂಭದಿಂದಲೂ ನಮಗೆ ಮಾರ್ಗದರ್ಶಿ ಆಗಿರುವ ತತ್ವವೆಂದರೆ ಅಂತ್ಯೋದಯ. ಹಿಂದುಳಿದ, ಕಡೆಗಣಿಸಲ್ಪಟ್ಟ ವರ್ಗಗಳ ಅಭಿವೃದ್ಧಿ. ಕಳೆದ 11 ವರ್ಷಗಳಲ್ಲಿ ಪ್ರತಿಯೊಂದು ನೀತಿ, ಪ್ರತಿಯೊಂದು ಹೂಡಿಕೆ ಮತ್ತು ಪ್ರತಿಯೊಂದು ನಾವೀನ್ಯತೆಯೂ ಈ ದೃಷ್ಟಿಕೋನದಿಂದ ರೂಪುಗೊಂಡಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನಾಯಕತ್ವದ ಮಾರ್ಗದರ್ಶನದಲ್ಲಿ, ಈ ದೃಷ್ಟಿಕೋನವು 4 ಸರಳ ಆದರೆ ಶಕ್ತಿಶಾಲಿ ಸ್ತಂಭಗಳ ಮೇಲೆ ನಿಂತಿದೆ. ಅವುಗಳೆಂದರೆ ಸಂಪರ್ಕ ಸುಧಾರಿಸುವ ಮೂಲಸೌಕರ್ಯ ನಿರ್ಮಾಣ, ಎಲ್ಲರನ್ನೂ ಒಳಗೊಂಡ ಬೆಳವಣಿಗೆ, ಉದ್ಯೋಗಗಳನ್ನು ಸೃಷ್ಟಿಸುವ ಉತ್ಪಾದನೆ ಮತ್ತು ಸಬಲೀಕರಣಗೊಳಿಸುವ ವ್ಯವಸ್ಥೆಗಳನ್ನು ಸರಳಗೊಳಿಸುವುದು.
ಮೊದಲ ಸ್ತಂಭ: ಮೂಲಸೌಕರ್ಯದಲ್ಲಿ ಹೂಡಿಕೆ
11 ವರ್ಷಗಳಲ್ಲಿ ಬಂಡವಾಳ ವೆಚ್ಚವು ಗಣನೀಯವಾಗಿ ಹೆಚ್ಚಿದ್ದು, 2025-26ರಲ್ಲಿ ₹11.2 ಲಕ್ಷ ಕೋಟಿ ತಲುಪಿದೆ. ಸಾರ್ವಜನಿಕ ಹೂಡಿಕೆಯಲ್ಲಿನ ಈ ಏರಿಕೆಯು ಭಾರತದ ಮೂಲಸೌಕರ್ಯದಲ್ಲಿ - ಭೌತಿಕ, ಡಿಜಿಟಲ್ ಮತ್ತು ಸಾಮಾಜಿಕ - ಹೆಚ್ಚು ಗೋಚರಿಸುತ್ತದೆ. ಕಳೆದ 11 ವರ್ಷಗಳಲ್ಲಿ ಭಾರತದಲ್ಲಿ ಭೌತಿಕ ಮೂಲಸೌಕರ್ಯವು ವೇಗವಾಗಿ ಬೆಳೆದಿದೆ. ಸುಮಾರು 59,000 ಕಿ.ಮೀ. ಹೆದ್ದಾರಿಗಳನ್ನು ನಿರ್ಮಿಸಲಾಗಿದೆ ಮತ್ತು 37,500 ಕಿ.ಮೀ.ಗೂ ಹೆಚ್ಚು ರೈಲ್ವೆ ಹಳಿಗಳನ್ನು ಹಾಕಲಾಗಿದೆ.
ಇತ್ತೀಚೆಗೆ, ಚೆನಾಬ್ ಮತ್ತು ಅಂಜಿ ಸೇತುವೆಗಳನ್ನು ಉದ್ಘಾಟಿಸಲಾಯಿತು. ಇವು ಆಧುನಿಕ ಭಾರತದ ಸಂಕೇತಗಳಾಗಿವೆ. ಕಾಶ್ಮೀರದ ಜನರಿಗೆ, ಈ ಸೇತುವೆಗಳ ಮೇಲೆ ವಂದೇ ಭಾರತ್ ಆಗಮನವು ಒಂದು ಕನಸಿನಂತೆ ಇತ್ತು. ಈ ದಿನ ಬರುತ್ತದೆ ಎಂದು ನಾನು ಎಂದಿಗೂ ಊಹಿಸಿರಲಿಲ್ಲ ಎಂದು ಒಬ್ಬ ಪ್ರಯಾಣಿಕರು ಸಂತೋಷದಿಂದ ಕಣ್ಣೀರು ಹಾಕುತ್ತಾ ಹೇಳಿದರು.
ಈ ಸಂಪರ್ಕದ ಪ್ರಜ್ಞೆಯು ರೈಲ್ವೆಯನ್ನು ಮೀರಿ ಡಿಜಿಟಲ್ ಹೆದ್ದಾರಿಗಳವರೆಗೆ ವಿಸ್ತರಿಸಿದೆ. ಭಾರತದ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ (ಡಿಪಿಐ) ಜಾಗತಿಕ ಮಾನದಂಡವಾಗಿದೆ. ಯುಪಿಐ, ಆಧಾರ್ ಮತ್ತು ಡಿಜಿಲಾಕರ್ ಅನ್ನು ಈಗ ಜಾಗತಿಕವಾಗಿ ಅವುಗಳ ಪ್ರಮಾಣ ಮತ್ತು ಒಳಗೊಳ್ಳುವಿಕೆಗಾಗಿ ಅಧ್ಯಯನ ಮಾಡಲಾಗುತ್ತಿದೆ. 141 ಕೋಟಿಗೂ ಹೆಚ್ಚು ಆಧಾರ್ ನೋಂದಣಿಗಳು ಮತ್ತು ಪ್ರತಿದಿನ ₹60 ಕೋಟಿ ಯುಪಿಐ ವಹಿವಾಟುಗಳು ಅದರ ವ್ಯಾಪ್ತಿ ಮತ್ತು ಸ್ವೀಕಾರವನ್ನು ಪ್ರತಿಬಿಂಬಿಸುತ್ತವೆ. ಎಲ್ಲರಿಗೂ ತಂತ್ರಜ್ಞಾನದ ಪ್ರಜಾಪ್ರಭುತ್ವೀಕರಣವೇ ಇದರ ಹಿಂದಿನ ಸರಳ ಕಲ್ಪನೆ.
ಈ ದೃಷ್ಟಿಕೋನವೇ ಇಂಡಿಯಾ ಎಐ ಮಿಷನ್ ಅನ್ನು ಮುನ್ನಡೆಸುತ್ತಿದೆ. ಜಿಪಿಯುಗಳು ಎಂದು ಕರೆಯಲ್ಪಡುವ 34,000ಕ್ಕೂ ಹೆಚ್ಚು ಹೈ-ಸ್ಪೀಡ್ ಕಂಪ್ಯೂಟರ್ ಚಿಪ್ಗಳು ಈಗ ಎಲ್ಲರಿಗೂ ಲಭ್ಯವಿವೆ. ಅದೂ ಜಾಗತಿಕ ವೆಚ್ಚದ ಮೂರನೇ ಒಂದರಷ್ಟು ವೆಚ್ಚದಲ್ಲಿ. ಈ ಚಿಪ್ಗಳು ಎಐ ಅಭಿವೃದ್ಧಿಗೆ, ವಿಶೇಷವಾಗಿ ಎಐ ಮಾದರಿಗಳಿಗೆ ತರಬೇತಿ ನೀಡಲು ಅಗತ್ಯವಾಗಿವೆ. ಇದನ್ನು ಮತ್ತಷ್ಟು ಬೆಂಬಲಿಸಲು, AIKosha ಪ್ಲಾಟ್ಫಾರ್ಮ್ 370ಕ್ಕೂ ಹೆಚ್ಚು ಡೇಟಾ ಸೆಟ್ಗಳನ್ನು ಹಾಗೂ ಕಲಿಕೆ ಮತ್ತು ನಾವೀನ್ಯತೆಗಾಗಿ 200ಕ್ಕೂ ಹೆಚ್ಚು ಬಳಸಲು ಸಿದ್ಧವಾದ ಎಐ ಮಾದರಿಗಳನ್ನು ನೀಡುತ್ತದೆ.
ಲಭ್ಯತೆಯ ಮೇಲಿನ ಈ ಗಮನವು ತಂತ್ರಜ್ಞಾನವನ್ನು ಮೀರಿ ಶಿಕ್ಷಣ, ಆರೋಗ್ಯ ರಕ್ಷಣೆ ಮತ್ತು ಮೂಲಭೂತ ಸೇವೆಗಳಿಗೆ ವಿಸ್ತರಿಸುತ್ತದೆ. 11 ವರ್ಷಗಳಲ್ಲಿ, ವೈದ್ಯಕೀಯ ಕಾಲೇಜುಗಳು 387 ರಿಂದ 780ಕ್ಕೆ ಮತ್ತು ಏಮ್ಸ್ ಸಂಸ್ಥೆಗಳು 7 ರಿಂದ 23ಕ್ಕೆ ಹೆಚ್ಚಾಗಿವೆ. ಎಂಬಿಬಿಎಸ್ ಮತ್ತು ಸ್ನಾತಕೋತ್ತರ ಸೀಟುಗಳು ಸಹ ದುಪ್ಪಟ್ಟಾಗಿವೆ. ಇದು ಗುಣಮಟ್ಟದ ಶಿಕ್ಷಣ ಮತ್ತು ಆರೋಗ್ಯ ರಕ್ಷಣೆಯನ್ನು ಎಲ್ಲರಿಗೂ ಲಭ್ಯವಾಗುವಂತೆ ಮಾಡುವ ಬಲವಾದ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ.
ಎರಡನೇ ಸ್ತಂಭ: ಎಲ್ಲರನ್ನೊಳಗೊಂಡ ಬೆಳವಣಿಗೆ
ನಮ್ಮ ಅಭಿವೃದ್ಧಿ ಮಾದರಿಯ ಅತ್ಯಂತ ಪ್ರಬಲವಾದ ದೃಢೀಕರಣವೆಂದರೆ ಅದು ಜನರ ಜೀವನದ ಮೇಲೆ ಪರಿಣಾಮ ಬೀರಿರುವುದು. 530 ಮಿಲಿಯನ್ಗಿಂತಲೂ ಹೆಚ್ಚು ಜನಧನ್ ಖಾತೆಗಳನ್ನು ತೆರೆಯಲಾಗಿದೆ. ಇದು ಯುರೋಪಿನ ಜನಸಂಖ್ಯೆಗಿಂತ ಹೆಚ್ಚು. 4 ಕೋಟಿ ಮನೆಗಳನ್ನು ನಿರ್ಮಿಸಲಾಗಿದೆ, 12 ಕೋಟಿ ಶೌಚಾಲಯಗಳನ್ನು ನಿರ್ಮಿಸಲಾಗಿದೆ ಮತ್ತು 10 ಕೋಟಿ ಕುಟುಂಬಗಳು ಈಗ ಸೌದೆ ಒಲೆಯ ಬದಲು ಶುದ್ಧ ಎಲ್ಪಿಜಿಯಿಂದ ಅಡುಗೆ ಮಾಡುತ್ತಿವೆ.
‘ಹರ್ ಘರ್ ಜಲ್’ ಅಡಿಯಲ್ಲಿ 14 ಕೋಟಿ ಮನೆಗಳಿಗೆ ನಲ್ಲಿ ನೀರಿನ ಸಂಪರ್ಕಗಳನ್ನು ನೀಡಲಾಗಿದೆ. ಆಯುಷ್ಮಾನ್ ಭಾರತ್ ಅಡಿಯಲ್ಲಿ ಆರೋಗ್ಯ ವಿಮೆಯು 350 ಮಿಲಿಯನ್ ಜನರನ್ನು ಒಳಗೊಂಡಿದೆ ಮತ್ತು 110 ಮಿಲಿಯನ್ ರೈತರು ಈಗ ಪಿಎಂ-ಕಿಸಾನ್ ಮೂಲಕ ನೇರ ಆದಾಯ ಬೆಂಬಲವನ್ನು ಪಡೆಯುತ್ತಿದ್ದಾರೆ.
ಉಜ್ವಲ ಯೋಜನೆಯ ಹತ್ತನೇ ಕೋಟಿ ಫಲಾನುಭವಿಯಾದ ಮೀರಾ ಮಾಂಝಿ ಅವರಂಥ ಕಥೆಗಳ ಮೂಲಕ ಈ ಸಂಖ್ಯೆಗಳು ಜೀವಂತವಾಗಿವೆ. ಯಾವುದೇ ಮಧ್ಯವರ್ತಿ ಇಲ್ಲದೆ ₹2.5 ಲಕ್ಷವನ್ನು ನೇರವಾಗಿ ತಮ್ಮ ಬ್ಯಾಂಕ್ ಖಾತೆಗೆ ಹೇಗೆ ಜಮಾ ಮಾಡಲಾಯಿತು ಎಂಬುದನ್ನು ಅವರು ಉಲ್ಲೇಖಿಸುತ್ತಾರೆ. ಅವರಿಗೆ ಈಗ ಹರ್ ಘರ್ ಜಲ್ ಮೂಲಕ ನಲ್ಲಿ ನೀರು, ಪ್ರತಿ ತಿಂಗಳು ಉಚಿತ ಪಡಿತರ ಮತ್ತು ಉಜ್ವಲ ಅಡಿಯಲ್ಲಿ ಹೊಗೆ ರಹಿತ ಅಡುಗೆಮನೆ ದೊರೆತಿದೆ.
ಇದು ನಮ್ಮ ಇತ್ತೀಚಿನ ಇತಿಹಾಸದಲ್ಲಿ ಯಾವುದೇ ಅವಧಿಯಲ್ಲಿ ಕಂಡುಬರದ ಪ್ರಮಾಣದ ಎಲ್ಲರನ್ನೂ ಒಳಗೊಂಡ ಬೆಳವಣಿಗೆಯಾಗಿದೆ.
ಮೂರನೇ ಸ್ತಂಭ: ಉತ್ಪಾದನೆ ಮತ್ತು ನಾವೀನ್ಯತೆ
2015ರಲ್ಲಿ, ಉದ್ಯೋಗ ಸೃಷ್ಟಿ ಮತ್ತು ಕೈಗಾರಿಕಾ ಬೆಳವಣಿಗೆಯನ್ನು ಪುನರುಜ್ಜೀವನಗೊಳಿಸಲು ನಾವು ಮೇಕ್ ಇನ್ ಇಂಡಿಯಾವನ್ನು ಪ್ರಾರಂಭಿಸಿದೆವು. ಇಂದು ಎಲೆಕ್ಟ್ರಾನಿಕ್ಸ್ ಉತ್ಪಾದನೆಯು 6 ಪಟ್ಟು ಬೆಳೆದು ₹12 ಲಕ್ಷ ಕೋಟಿ ದಾಟಿದೆ. ಎಲೆಕ್ಟ್ರಾನಿಕ್ಸ್ ರಫ್ತು 8 ಪಟ್ಟು ಬೆಳೆದು ₹3 ಲಕ್ಷ ಕೋಟಿ ದಾಟಿದೆ ಮತ್ತು ಅತಿದೊಡ್ಡ ರಫ್ತು ಸರಕುಗಳಲ್ಲಿ ಒಂದಾಗಿದೆ. ಭಾರತವು ಈಗ ಎರಡನೇ ಅತಿದೊಡ್ಡ ಮೊಬೈಲ್ ಫೋನ್ ಉತ್ಪಾದಕ ರಾಷ್ಟ್ರವಾಗಿದೆ.
ನಾವು ಈಗ ಹೊಸ ಎಲೆಕ್ಟ್ರಾನಿಕ್ ಬಿಡಿ ಭಾಗಗಳ ಉತ್ಪಾದನೆ ಯೋಜನೆ ಅಡಿಯಲ್ಲಿ ಎಲೆಕ್ಟ್ರಾನಿಕ್ ಬಿಡಿಭಾಗಗಳನ್ನು ತಯಾರಿಸುವ ಮೂಲಕ ಉತ್ಪಾದನಾ ಮೌಲ್ಯ ಸರಪಳಿಯನ್ನು ಬಲಪಡಿಸುತ್ತಿದ್ದೇವೆ.
ಇದರೊಂದಿಗೆ, ಭಾರತದ ಸೆಮಿಕಂಡಕ್ಟರ್ ಮಿಷನ್ ನೀಲನಕ್ಷೆಯಿಂದ ಪ್ರಗತಿಯತ್ತ ಸಾಗುತ್ತಿದೆ. ದೇಶದ ಮೊದಲ ವಾಣಿಜ್ಯ ಫ್ಯಾಬ್ ನಿರ್ಮಾಣ ಹಂತದಲ್ಲಿದೆ. ಐದು OSAT ಘಟಕಗಳು ಕಾರ್ಯನಿರ್ವಹಿಸುತ್ತಿವೆ ಮತ್ತು ದೇಶೀಯ ಐಪಿ ಹೊಂದಿರುವ 20 ಕ್ಕೂ ಹೆಚ್ಚು ಚಿಪ್ ಸೆಟ್ಗಳನ್ನು ಭಾರತದ ವಿದ್ಯಾರ್ಥಿಗಳು ಮತ್ತು ಎಂಜಿನಿಯರ್ಗಳು ವಿನ್ಯಾಸಗೊಳಿಸಿದ್ದಾರೆ. ನಾವು 270 ವಿಶ್ವವಿದ್ಯಾಲಯಗಳನ್ನು ವಿಶ್ವ ದರ್ಜೆಯ ಇಡಿಎ ಪರಿಕರಗಳೊಂದಿಗೆ ಸಂಪರ್ಕಿಸಿದ್ದೇವೆ. ಇದು ಜಗತ್ತು ಅವಲಂಬಿಸಬಹುದಾದ ಸೆಮಿಕಂಡಕ್ಟರ್ ಪ್ರತಿಭಾ ಶಕ್ತಿಗೆ ಅಡಿಪಾಯ ಹಾಕುತ್ತಿದೆ.
ನಾಲ್ಕನೇ ಸ್ತಂಭ: ಕಾನೂನುಗಳ ಸರಳೀಕರಣ
ಕಳೆದ ದಶಕದಲ್ಲಿ ಆಡಳಿತದಲ್ಲಿ ಮೌನ ಕ್ರಾಂತಿ ನಡೆದಿದೆ. 1,500 ಕ್ಕೂ ಹೆಚ್ಚು ಹಳೆಯ ಕಾನೂನುಗಳನ್ನು ರದ್ದುಪಡಿಸಲಾಗಿದೆ. 40,000ಕ್ಕೂ ಹೆಚ್ಚು ಅನುಸರಣೆಗಳನ್ನು ತೆಗೆದುಹಾಕಲಾಗಿದೆ. ಟೆಲಿಕಾಂ ಕಾಯ್ದೆ ಮತ್ತು ಡಿಪಿಡಿಪಿ ಕಾಯ್ದೆಯಂತಹ ಹೊಸ ಕಾನೂನುಗಳು ನಂಬಿಕೆ ಮತ್ತು ಸರಳತೆಯನ್ನು ಆಧರಿಸಿವೆ, ನಾಗರಿಕರನ್ನು ಅನುಮಾನದಿಂದಲ್ಲ, ಘನತೆಯಿಂದ ನಡೆಸಿಕೊಳ್ಳುತ್ತವೆ. ಇದು ಹೂಡಿಕೆ, ನಾವೀನ್ಯತೆ ಮತ್ತು ಔಪಚಾರಕೀಕರಣವನ್ನು ಉತ್ತೇಜಿಸಿದೆ, ಬೆಳವಣಿಗೆಯ ಸದ್ಗುಣತೆ ಚಕ್ರವನ್ನು ಸೃಷ್ಟಿಸಿದೆ.
ಈ 11 ವರ್ಷಗಳಲ್ಲಿ ಭಯೋತ್ಪಾದನೆಯ ಬಗ್ಗೆ ಭಾರತದ ದೃಷ್ಟಿಕೋನ ಬದಲಾಗಿದೆ. ಸರ್ಜಿಕಲ್ ಸ್ಟ್ರೈಕ್, ವಾಯುದಾಳಿ ಮತ್ತು ಈಗ ಆಪರೇಷನ್ ಸಿಂಧೂರದಿಂದ, ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಭಾರತ ಸ್ಪಷ್ಟತೆ ಮತ್ತು ಧೈರ್ಯವನ್ನು ತೋರಿಸಿದೆ. ಪ್ರತಿಯೊಂದು ಪ್ರತಿಕ್ರಿಯೆಯು ನಮ್ಮದೇ ಆದ ರೀತಿಯ ತ್ವರಿತ, ನಿರ್ಣಾಯಕ ಕ್ರಮವನ್ನು ಪ್ರತಿಬಿಂಬಿಸುತ್ತದೆ.
ಭಯೋತ್ಪಾದಕ ದಾಳಿಗಳಿಗೆ ಪ್ರತಿಕ್ರಿಯಿಸುವ ಈ ಹೊಸ ವಿಧಾನವು ಮೋದಿ ಸಿದ್ಧಾಂತದ ಭಾಗವಾಗಿದೆ. ಇದು ಮೂರು ಸ್ತಂಭಗಳನ್ನು ಆಧರಿಸಿದೆ. ಭಾರತದ ಷರತ್ತುಗಳ ಮೇಲೆ ನಿರ್ಣಾಯಕ ಪ್ರತೀಕಾರ, ಪರಮಾಣು ಬೆದರಿಕೆಗೆ ಶೂನ್ಯ ಸಹಿಷ್ಣುತೆ ಮತ್ತು ಭಯೋತ್ಪಾದಕರು ಮತ್ತು ಅವರ ಪ್ರಾಯೋಜಕರ ನಡುವೆ ಯಾವುದೇ ವ್ಯತ್ಯಾಸವಿಲ್ಲ.
ಈ ಬಾರಿ ನಮ್ಮ ಪ್ರತಿಕ್ರಿಯೆಯನ್ನು ಇನ್ನಷ್ಟು ಮಹತ್ವದ್ದಾಗಿ ಮಾಡಿದ್ದು ದೇಶೀಯ ತಂತ್ರಜ್ಞಾನಗಳು ಮತ್ತು ಸಾಮರ್ಥ್ಯಗಳ ಬಳಕೆ. ಅಭಿವೃದ್ಧಿ ಹೊಂದಲು ಬಯಸುವ ರಾಷ್ಟ್ರವು ತನ್ನ ಜನರನ್ನು ರಕ್ಷಿಸುವುದಲ್ಲದೆ, ಸ್ವಾವಲಂಬನೆಯೊಂದಿಗೆ ಅದನ್ನು ಮಾಡಬೇಕು - ಮತ್ತು ಭಾರತವು ಅದನ್ನೇ ಮಾಡಿತು.
ಹಿಂದೆ, ಅಭಿವೃದ್ಧಿಯನ್ನು ಸಂಖ್ಯೆಯಲ್ಲಿ ಅಳೆಯಲಾಗುತ್ತಿತ್ತು. ಇಂದು, ಅದನ್ನು ಜೀವನದಲ್ಲಿನ ಬದಲಾವಣೆಯಿಂದ ಅಳೆಯಲಾಗುತ್ತದೆ. ಉದ್ಯೋಗದಾತಳಾದ ಗೃಹಿಣಿ. ಕೃಷಿಯಲ್ಲಿ ಎಐ ಅಪ್ಲಿಕೇಶನ್ ಬಳಸುತ್ತಿರುವ ರೈತ. ಇನ್ನು ಮುಂದೆ ಹೊಗೆಯಿಂದ ತುಂಬಿರದ ಅಡುಗೆಮನೆ ಹೊಂದಿರುವ ತಾಯಿ. ಇವು ದೇಶಾದ್ಯಂತ ಸದ್ದಿಲ್ಲದೆ ನಡೆಯುತ್ತಿರುವ ಕ್ರಾಂತಿಗಳು.
2004ರಲ್ಲಿ ಅಟಲ್ ಜಿ ಅವರ ಅಧಿಕಾರಾವಧಿಯ ಅಂತ್ಯದ ವೇಳೆಗೆ, ಭಾರತವು ವಿಶ್ವದ 11ನೇ ಅತಿದೊಡ್ಡ ಆರ್ಥಿಕತೆಯಾಗಿತ್ತು. 2004 ಮತ್ತು 2014ರ ನಡುವೆ, ಭಾರತವು 11ನೇ ಸ್ಥಾನದಲ್ಲಿಯೇ ಉಳಿಯಿತು, ಇದು ಒಂದು ದಶಕದ ಕುಸಿತವನ್ನು ಸೂಚಿಸುತ್ತದೆ. ಕಳೆದ ದಶಕದಲ್ಲಿ, ಪ್ರಧಾನಿ ಮೋದಿ ಅವರ ಸುಧಾರಣಾವಾದಿ ನೀತಿಗಳಿಂದಾಗಿ ಭಾರತವು ಮತ್ತೆ ವೇಗವನ್ನು ಪಡೆದುಕೊಂಡಿದೆ. ಇಂದು ನಾವು ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗುವ ಹಾದಿಯಲ್ಲಿ ಬಲವಾಗಿ ಸಾಗುತ್ತಿದ್ದೇವೆ.
ಪ್ರಧಾನಿ ಮೋದಿಯವರ ನೇತೃತ್ವದಲ್ಲಿ ಈ 11 ವರ್ಷಗಳ ಸಮಗ್ರ ಬೆಳವಣಿಗೆ ಜನರಿಗೆ ಸಬ್ಸಿಡಿಗಳು ಅಥವಾ ಸೇವೆಗಳಿಗಿಂತ ಹೆಚ್ಚು ಮೌಲ್ಯಯುತವಾದದ್ದನ್ನು ನೀಡಿದೆ. ಇದು ಅವರಿಗೆ ಆತ್ಮವಿಶ್ವಾಸವನ್ನು ನೀಡಿದೆ ಮತ್ತು ಉತ್ತಮ ಭವಿಷ್ಯದ ಬಗ್ಗೆ ಬಲವಾದ ನಂಬಿಕೆಯೇ ರಾಷ್ಟ್ರವನ್ನು ಮುನ್ನಡೆಸುತ್ತಿದೆ.