ಹೊಸ ಅಪರಾಧ ಕಾಯ್ದೆ ಅಡಿ ಮ.ಪ್ರ.ದಲ್ಲಿ ದೇಶದ ಮೊದಲ ಎಫ್‌ಐಆರ್‌

| Published : Jul 02 2024, 01:31 AM IST / Updated: Jul 02 2024, 06:18 AM IST

ಹೊಸ ಅಪರಾಧ ಕಾಯ್ದೆ ಅಡಿ ಮ.ಪ್ರ.ದಲ್ಲಿ ದೇಶದ ಮೊದಲ ಎಫ್‌ಐಆರ್‌
Share this Article
  • FB
  • TW
  • Linkdin
  • Email

ಸಾರಾಂಶ

ದೇಶದಲ್ಲಿ ಸೋಮವಾರದಿಂದ ಜಾರಿಗೆ ಬಂದ ನೂತನ ಅಪರಾಧ ಪ್ರಕ್ರಿಯಾ ಸಂಹಿತೆ (ಸಿಆರ್‌ಪಿಸಿ) ಕಾಯ್ದೆ ಅನ್ವಯ ಮೊದಲ ಪ್ರಕರಣವನ್ನು ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ದಾಖಲಿಸಲಾಗಿದೆ.

ನವದೆಹಲಿ: ದೇಶದಲ್ಲಿ ಸೋಮವಾರದಿಂದ ಜಾರಿಗೆ ಬಂದ ನೂತನ ಅಪರಾಧ ಪ್ರಕ್ರಿಯಾ ಸಂಹಿತೆ (ಸಿಆರ್‌ಪಿಸಿ) ಕಾಯ್ದೆ ಅನ್ವಯ ಮೊದಲ ಪ್ರಕರಣವನ್ನು ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ದಾಖಲಿಸಲಾಗಿದೆ. ಮೋಟಾರು ಸೈಕಲ್‌ ಕಳ್ಳತನಕ್ಕೆ ಸಂಬಂಧಿಸಿದಂತೆ ಸೋಮವಾರ ನಸುಕಿನ ಜಾವ 12.10ಕ್ಕೆ ಅಂದರೆ ಕಾಯ್ದೆ ಜಾರಿಯಾದ 10 ನಿಮಿಷಗಳ ಬಳಿಕ ರಾತ್ರಿ ವೇಳೆ ಮೊದಲ ಎಫ್‌ಐಆರ್‌ ದಾಖಲಿಸಲಾಗಿದೆ.

1.80 ಲಕ್ಷ ರು. ಮೌಲ್ಯದ ಮೋಟಾರು ಸೈಕಲ್‌ ಕಳ್ಳತನಕ್ಕೆ ಸಂಬಂಧಿಸಿದಂತೆ ಮೊದಲ ಎಫ್‌ಐಆರ್‌ ದಾಖಲಿಸಲಾಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಮಾಹಿತಿ ನೀಡಿದ್ದಾರೆ.

ಈ ಮೊದಲು ದೆಹಲಿಯಲ್ಲಿ ಬೀದಿ ಬದಿಯ ವ್ಯಾಪಾರಿಯೊಬ್ಬನ ವಿರುದ್ಧ ದಾಖಲಿಸಿದ ಪ್ರಕರಣವೇ ದೇಶದ ಮೊದಲ ಕೇಸು ಎಂದು ವರದಿಯಾಗಿತ್ತಾದರೂ, ಗ್ವಾಲಿಯರ್‌ ಪ್ರಕರಣವೇ ಮೊದಲಿನದ್ದು ಎಂದು ಅಮಿತ್‌ ಶಾ ಸ್ಪಷ್ಟನೆ ನೀಡಿದ್ದಾರೆ.

ಹೊಸ ಅಪರಾಧ ಕಾನೂನಿನಿಂದ ತ್ವರಿತ ನ್ಯಾಯ: ಅಮಿತ್‌ ಶಾ

ನವದೆಹಲಿ: ಸೋಮವಾರದಿಂದ ಜಾರಿಗೊಂಡಿರುವ 3 ಹೊಸ ಅಪರಾಧ ಕಾನೂನುಗಳ ಅನ್ವಯ, ಪ್ರಕರಣದಲ್ಲಿ ಎಫ್‌ಐಆರ್ ದಾಖಲಾದರೆ 3 ವರ್ಷಗಳಲ್ಲಿ ಸುಪ್ರಿಂ ಕೋರ್ಟ್‌ ಮಟ್ಟದಲ್ಲಿ ನ್ಯಾಯ ಒದಗಿಸಲಾಗುವುದು ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹೇಳಿದ್ದಾರೆ.

ಅಲ್ಲದೆ, ಚರ್ಚೆ ಇಲ್ಲದೇ ಈ ಕಾನೂನು ಮಾಡಲಾಗಿದೆ ಎಂಬ ವಿಪಕ್ಷ ಆರೋಪ ತಳ್ಳಿಹಾಕಿರುವ ಅವರು, ‘ಕಾಯ್ದೆಯ ಬಗ್ಗೆ ಆಕ್ಷೇಪ ಇದ್ದರೆ ನನ್ನನ್ನು ನೇರವಾಗಿ ಭೇಟಿ ಮಾಡಿ ಚರ್ಚಿಸಿ’ ಎಂದು ಸವಾಲು ಹಾಕಿದ್ದಾರೆ.ಸೋಮವಾರ ಹೊಸ ಕ್ರಿಮಿನಲ್ ಕಾನೂನುಗಳನ್ನು ಜಾರಿ ಬಗ್ಗೆ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಶಾ, ‘ಹೊಸ ಕಾನೂನಿನಡಿಯಲ್ಲಿ ಶೇ.90ರಷ್ಟು ಶಿಕ್ಷೆಯನ್ನು ನಿರೀಕ್ಷಿಸಬಹುದು. ಇದು ಭವಿಷ್ಯದಲ್ಲಿ ಅಪರಾಧಗಳ ಸಂಖ್ಯೆಯನ್ನು ಕಡಿಮೆ ಮಾಡಲಿದೆ’ ಎಂದರು.

‘ಹೊಸ ಕಾನೂನು ಆಧುನಿಕ ನ್ಯಾಯ ವ್ಯವಸ್ಥೆಯನ್ನು ತರಲಿದೆ. ಈ ಕಾನೂನುಗಳ ಅನುಷ್ಠಾನದೊಂದಿಗೆ ಭಾರತ , ಜಗತ್ತಿನಲ್ಲಿಯೇ ಆಧುನಿಕ ಕ್ರಿಮಿನಲ್‌ ನ್ಯಾಯ ವ್ಯವಸ್ಥೆಯನ್ನು ಹೊಂದಿದ ದೇಶವಾಗಿರಲಿದೆ. ಶೂನ್ಯ ಎಫ್‌ಐಆರ್‌, ಆನ್‌ಲೈನ್ ಮೂಲಕ ಪೊಲೀಸರಿಗೆ ದೂರು, ಎಲೆಕ್ಟ್ರಾನಿಕ್‌ ವಿಧಾನಗಳಲ್ಲಿ ಸಮನ್ಸ್‌ ಜಾರಿ, ಘೋರ ಅಪರಾಧಗಳ ಪ್ರಕರಣಗಳ ತನಿಖೆಯಲ್ಲಿ ವಿಡಿಯೋ ಚಿತ್ರೀಕರಣದಂತಹ ನಿಬಂಧನೆಗಳನ್ನು ಹೊಂದಿರಲಿದೆ’ ಎಂದು ಶಾ ವಿವರಿಸಿದರು.