ಮನೆ ಮೇಲೆ ಬಾಂಬ್ ದಾಳಿ: ಇಬ್ಬರು ಮಕ್ಕಳು ಸಾವು
ಸ್ಥಳೀಯರಿಂದ ಟ್ರಕ್, ಟೈರ್ಗೆ ಬೆಂಕಿ: ಗುಂಡಿಗೆ 2 ಬಲಿ5 ಜಿಲ್ಲೆಗಳಲ್ಲಿ ಇಂಟರ್ನೆಟ್ ಸ್ಥಗಿತ । ವ್ಯಾಪಕ ಭದ್ರತೆಇಂಫಾಲ: ಜನಾಂಗೀಯ ಹಿಂಸಾಪೀಡಿತ ರಾಜ್ಯ ಮಣಿಪುರದಲ್ಲಿ ಮತ್ತೆ ಹಿಂಸೆ ಭುಗಿಲೆದ್ದಿದ್ದು, ನಾಲ್ವರು ಬಲಿಯಾಗಿದ್ದಾರೆ. ಹೀಗಾಗಿ 5 ಜಿಲ್ಲೆಗಳಲ್ಲಿ ಇಂಟರ್ನೆಟ್ ಸ್ತಬ್ಧಗೊಳಿಸಲಾಗಿದ್ದು, ಭದ್ರತೆ ಹೆಚ್ಚಿಸಲಾಗಿದೆ.ಮೊದಲು ತಾಯಿ ಮತ್ತು ಇಬ್ಬರು ಮಕ್ಕಳು ಮನೆಯಲ್ಲಿ ಮಲಗಿದ್ದ ವೇಳೆ ಬಾಂಬ್ ದಾಳಿ ನಡೆದಿದೆ. ಘಟನೆಯಲ್ಲಿ ಮಕ್ಕಳಿಬ್ಬರೂ ಸ್ಥಳದಲ್ಲೇ ಸಾವನ್ನಪ್ಪಿದ್ದು, ತಾಯಿ ಗಾಯಗೊಂಡಿದ್ದಾರೆ. ಬಳಿಕ, ಈ ಘಟನೆ ಖಂಡಿಸಿ ಹಿಂಸಾಚಾರ ನಡೆದಿದ್ದು, ಈ ವೇಳೆ ನಡೆದ ಗೋಲಿಬಾರ್ನಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ.
ಆಗಿದ್ದೇನು?:ಇಲ್ಲಿನ ಬಿಷ್ಣುಪುರ ಜಿಲ್ಲೆಯ ಮೋಯಿರಾಂಗ್ ಟ್ರೋಂಗ್ಲಾವೊಬಿ ಪ್ರದೇಶದ ಮನೆಯೊಂದರ ಮೇಲೆ ಶಂಕಿತ ಬಂಡುಕೋರರು ಮಧ್ಯರಾತ್ರಿ 1 ಗಂಟೆ ಸುಮಾರಿಗೆ ಬಾಂಬ್ ಎಸೆದಿದ್ದಾರೆ. ಈ ವೇಳೆ ಮನೆಯಲ್ಲಿ ಮಲಗಿದ್ದ 5 ವರ್ಷದ ಗಂಡು ಮಗು ಮತ್ತು 6 ತಿಂಗಳ ಹೆಣ್ಣು ಮಗು ಸಾವನ್ನಪ್ಪಿದೆ. ತಾಯಿ ಗಾಯಗೊಂಡಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ದುರಂತದ ಬಳಿಕ ಮಣಿಪುರದಲ್ಲಿ ಹಿಂಸಾಚಾರ ಭುಗಿಲೆದ್ದಿದೆ. ಸ್ಥಳೀಯರು ಪ್ರತಿಭಟನೆ ನಡೆಸಿ, ತೈಲ ಟ್ಯಾಂಕರ್ಗಳು ಮತ್ತು ಟ್ರಕ್ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮತ್ತೊಂದೆಡೆ ಪೊಲೀಸ್ ಠಾಣೆ ಮುಂದೆ ಟೈರ್ಗಳನ್ನು ಸುಟ್ಟು ಹಾಕಿದ್ದಾರೆ. ತಾತ್ಕಾಲಿಕವಾಗಿ ನಿರ್ಮಿಸಲಾಗಿದ್ದ ಪೊಲೀಸ್ ಠಾಣೆಯನ್ನೂ ಧ್ವಂಸಗೊಳಿಸಿದ್ದಾರೆ. ಪರಿಸ್ಥಿತಿ ಉದ್ವಿಗ್ನ ಹಿನ್ನೆಲೆ ನಿಯಂತ್ರಣಕ್ಕೆ ಸ್ಥಳಲ್ಲಿ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದೆ. ಮತ್ತೊಂದೆಡೆ ಇದೇ ಪ್ರದೇಶದ ಸಮೀಪ ಅಧಿಕಾರಿಗಳು ಮಂಗಳವಾರ ಕೆಲ ಸ್ಫೋಟಕ ಸಾಧನಗಳನ್ನು ವಶಪಡಿಸಿಕೊಂಡಿದ್ದಾರೆ. ಇನ್ನು ದಾಳಿ ನಡೆದಿರುವ ಮೋಯಿರಾಂಗ್ ಟ್ರೋಂಗ್ಲಾವೊಬಿಯಲ್ಲಿ 2023,2024ರ ವೇಳೆ ಮೈತೇಯಿ ಮತ್ತು ಕುಕಿಗಳ ಸಂಘರ್ಷದ ನಡುವೆ ಹಲವು ಸಲ ಗುಂಡಿನ ದಾಳಿ ನಡೆದಿತ್ತು.ಇಂಟರ್ನೆಟ್ ಸ್ತಬ್ಧ:
ಈ ಬೆನ್ನಲ್ಲೇ ಸರ್ಕಾರ ಬಿಷ್ಣುಪುರ ಸೇರಿದಂತೆ 5 ಜಿಲ್ಲೆಗಳಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಇಂಟರ್ನೆಟ್ ಮತ್ತು ಮೊಬೈಲ್ ಡೇಟಾ ಸೇವೆಗಳನ್ನು ಮೂರು ದಿನ ಸ್ಥಗಿತಗೊಳಿಸಿದೆ.
ಸಿಎಂ ಖಂಡನೆ:
ಮಣಿಪುರ ಸಿಎಂ ವೈ ಖೇಮಚಂದ್ ಸಿಂಗ್ ಘಟನೆ ಖಂಡಿಸಿದ್ದಾರೆ. ‘ಇದೊಂದು ಅನಾಗರಿಕ ಕೃತ್ಯ, ಇಂತಹ ದಾಳಿಯನ್ನು ಎಂದಿಗೂ ಸಹಿಸುವುದಿಲ್ಲ. ಘಟನೆ ಹಿಂದಿರುವವರಿಗೆ ಕಠಿಣ ಶಿಕ್ಷೆ ನೀಡುತ್ತೇವೆ’ ಎಂದಿದ್ದಾರೆ.