ಭಾರತ - ಪಾಕ್‌ ಗಡಿಯಲ್ಲಿ ಬೆಂಗ್ಳೂರು ಗಣಪಗೆ ಪೂಜೆ

| N/A | Published : Sep 01 2025, 01:03 AM IST

ಸಾರಾಂಶ

ಜಮ್ಮು ಕಾಶ್ಮೀರದಲ್ಲಿ ಭಾರತ-ಪಾಕಿಸ್ತಾನ ಗಡಿ ಭಾಗದಲ್ಲಿರುವ ತೀತ್ವಾಲ್‌ನಲ್ಲಿ ಬೆಂಗಳೂರಿನಲ್ಲಿ ತಯಾರಿಸಿದ್ದ ಮಣ್ಣಿನ ಗಣಪತಿ ಇರಿಸಿ ವಿಜೃಂಭಣೆಯ ಗಣೇಶೋತ್ಸವನ್ನು ಶಾಂತಿಯುತವಾಗಿ ಆಚರಿಸಲಾಯಿತು.

 ಜಮ್ಮು: ಜಮ್ಮು ಕಾಶ್ಮೀರದಲ್ಲಿ ಭಾರತ-ಪಾಕಿಸ್ತಾನ ಗಡಿ ಭಾಗದಲ್ಲಿರುವ ತೀತ್ವಾಲ್‌ನಲ್ಲಿ ಬೆಂಗಳೂರಿನಲ್ಲಿ ತಯಾರಿಸಿದ್ದ ಮಣ್ಣಿನ ಗಣಪತಿ ಇರಿಸಿ ವಿಜೃಂಭಣೆಯ ಗಣೇಶೋತ್ಸವನ್ನು ಶಾಂತಿಯುತವಾಗಿ ಆಚರಿಸಲಾಯಿತು.

ಬೆಂಗಳೂರಿನ ಶೃಂಗೇರಿ ಶಂಕರಮಠದಿಂದ ಒಯ್ದಿದ್ದ ಗಣಪತಿ ಮಣ್ಣಿನ ವಿಗ್ರಹವನ್ನು ಕುಪ್ವಾರಾ ಜಿಲ್ಲೆಯ ತೀತ್ವಾಲ್‌ನಲ್ಲಿ ಪ್ರತಿಷ್ಠಾಪಿಸಲಾಗಿತ್ತು. ಆಪರೇಷನ್‌ ಸಿಂದೂರದ ಮಾದರಿಯಲ್ಲಿದ್ದ ಗಣೇಶನನ್ನು ಗ್ರಾಮದಲ್ಲಿ ನಿರ್ಮಿಸಿದ್ದ ಶೃಂಗೇರಿ ಮಠದ ಶಾರದಾ ಮಂದಿರದಲ್ಲಿ ಪ್ರತಿಷ್ಠಾಪಿಸಿ ವೇದ, ಮಂತ್ರ ಘೋಷಗಳ ನಡುವೆ ಪೂಜಾಕೈಂಕರ್ಯ ನೆರವೇರಿಸಲಾಯಿತು. 

ಬಳಿಕ ಸ್ವತಃ ಕುಪ್ವಾರಾ ಜಿಲ್ಲಾಧಿಕಾರ ಶ್ರೀಕಾಂತ್‌ ಬಾಳಾ ಸಾಹೇಬ್‌ ಸೂಸೆ ಅವರು ಗಣಪತಿಯ ವಿಗ್ರಹವನ್ನು ತಲೆ ಮೇಲೆ ಹೊತ್ತು ಮೆರವಣಿಗೆ ಮಾಡಿದರು. ಈ ವೇಳೆ ಸೇನೆಯ ಅಧಿಕಾರಿಗಳು ಸಹ ಸಾಥ್‌ ನೀಡಿದರು. ಭಾರತ ಪಾಕಿಸ್ತಾನದ ನಡುವೆ ಸಂಪರ್ಕಕ್ಕೆ ಇರುವ ಕ್ರಾಸಿಂಗ್ ಬ್ರಿಡ್ಜ್ ಮೇಲೆ ಮೆರವಣಿಗೆ ತೆರಳಿ ಶಾಂತಿ ಮಂತ್ರ ಪಠಣದ ನಂತರ ‘ಜೈ ಹಿಂದ್, ಭಾರತ ಮಾತಾ ಜೈ, ಗಣಪತಿ ಬಪ್ಪ ಮೋರಿಯ, ಜೈ ಗಣೇಶ ಘೋಷಣೆಗಳ ನಡುವೆ ಕಿಶನ್ ಗಂಗಾ ನದಿಯಲ್ಲಿ ವಿಸರ್ಜಿಸಲಾಯಿತು.

Read more Articles on