ಸಾರಾಂಶ
ನವದೆಹಲಿ: 1991ರಲ್ಲಿ ಅಂದಿನ ಪ್ರಧಾನಿ ಪಿ.ವಿ. ನರಸಿಂಹರಾವ್ ಅವರು ಮಾಡಿದ ಒಂದು ಕರೆಯು ವಿತ್ತ ತಜ್ಞನಾಗಿದ್ದ ಡಾ। ಮನಮೋಹನ ಸಿಂಗ್ ಅವರನ್ನು ರಾಜಕೀಯಕ್ಕೆ ಕರೆತಂದಿತು ಎಂಬುದು ಕುತೂಹಲದ ವಿಷಯ.
ಸಿಂಗ್ ನೆದರ್ಲೆಂಡ್ ಪ್ರವಾಸ ಮುಗಿಸಿ ಭಾರತಕ್ಕೆ ಮರಳಿ ರಾತ್ರಿ ಮಲಗಿದ್ದರು. ಆಗ ಪಿವಿಎನ್ ಅವರ ಸೂಚನೆ ಮೇರೆಗೆ 1991ರಲ್ಲಿ ರಾವ್ ಅವರ ಮುಖ್ಯ ಕಾರ್ಯದರ್ಶಿ ಆಗಿದ್ದ ಪಿ.ಸಿ. ಅಲೆಕ್ಸಾಂಡರ್ ಅವರು ಡಾ। ಸಿಂಗ್ಗೆ ಕರೆ ಮಾಡಿ, ‘ನೀವು ದೇಶದ ವಿತ್ತ ಮಂತ್ರಿ ಆಗಿರಿ’ ಎಂದರು. ಅದಕ್ಕೆ ಡಾ। ಸಿಂಗ್ ಅನುಮಾನ ಮಾಡಿದರಂತೆ. ಆಗ ಅಲೆಕ್ಸಾಂಡರ್, ‘ಒಂದು ಚಾನ್ಸ್ ತಗೊಳ್ಳಿ. ನೀವು ಯಶಸ್ವಿಯಾದರೆ ಇಬ್ಬರೂ ಶ್ರೇಯ ಪಡೆಯೋಣ. ವಿಫಲ ಆದರೆ ನಾನು ತಲೆದಂಡ ಅನುಭವಿಸುವೆ’ ಎಂದು ಚಟಾಕಿ ಹಾರಿಸಿದರು ಎಂದು ಪುದ್ತಕವೊಂದರಲ್ಲಿ ಬರೆಯಲಾಗಿದೆ.
ಸಿಂಗ್ ಸ್ಮರಣೀಯ, ಬೇಸರದ ಕ್ಷಣಗಳು!
ನವದೆಹಲಿ: ಅಮೆರಿಕದ ಜತೆಗಿನ ಅಣು ಒಪ್ಪಂದ ಪ್ರಧಾನಿಯಾಗಿ ಡಾ.ಮನಮೋಹನ ಸಿಂಗ್ ಅವರ ಅವಿಸ್ಮರಣೀಯ ಕ್ಷಣವಾಗಿದ್ದರೆ, ದೇಶದ ಆರೋಗ್ಯ ಕ್ಷೇತ್ರಕ್ಕೆ ಅಂದುಕೊಂಡಷ್ಟು ಕೊಡುಗೆ ನೀಡಲು ಸಾಧ್ಯವಾಗದಿದ್ದದ್ದು ಜೀವನದ ಅತ್ಯಂತ ಬೇಸರದ ಸಂಗತಿ!ಪ್ರಧಾನಿಯಾಗಿ ನಿಮ್ಮ ಜೀವನದ ಅತ್ಯಂತ ಅವಿಸ್ಮರಣೀಯ ಮತ್ತು ಬೇಸರದ ಕ್ಷಣ ಯಾವುದು ಎಂದು ಪಿಎಂ ಆಗಿದ್ದಾಗ ತಮ್ಮ ಕೊನೇ ಸುದ್ದಿಗೋಷ್ಠಿಯಲ್ಲಿ ತೂರಿಬಂದ ಪ್ರಶ್ನೆಗೆ ಡಾ.ಸಿಂಗ್ ಈ ಉತ್ತರ ನೀಡಿದ್ದರು.
2005ರಲ್ಲಿ ಅಮೆರಿಕದ ಅಧ್ಯಕ್ಷ ಜಾರ್ಜ್ ಡಬ್ಲ್ಯು ಬುಷ್ ಜತೆಗೆ ಅಣು ಒಪ್ಪಂದಕ್ಕೆ ಸಹಿಹಾಕಿದ್ದು ಅತ್ಯಂತ ಸಂತಸದ ಕ್ಷಣ. ಈ ಒಪ್ಪಂದ ದೇಶದ ಆರ್ಥಿಕ ಮತ್ತು ಸಾಮಾಜಿಕ ಬದಲಾವಣೆಗೆ ಕಾರಣವಾಯಿತು ಮತ್ತು ಹಲವು ರೀತಿಯಲ್ಲಿ ದೇಶದ ತಾಂತ್ರಿಕ ಬೆಳವಣಿಗೆಗೂ ಪೂರಕವಾಯಿತು ಎಂದು ಹೇಳಿಕೊಂಡಿದ್ದಾರೆ ಸಿಂಗ್.
ಆರೋಗ್ಯ ಕ್ಷೇತ್ರಕ್ಕೆ ಕೊಡುಗೆ: ಮಕ್ಕಳು, ಮಹಿಳೆಯರ ಆರೋಗ್ಯ ಸೇರಿ ಒಟ್ಟಾರೆ ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿ ಪ್ರಧಾನಿಯಾಗಿ ಸಾಕಷ್ಟು ಕೊಡುಗೆ ನೀಡಬೇಕಿತ್ತು. ನಾವು ಆರಂಭಿಸಿದ ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಮಿಷನ್ ಸಾಧನೆ ಪ್ರಶಂಸನೀಯವಾದರೂ ಈ ಕ್ಷೇತ್ರದಲ್ಲಿ ಇನ್ನಷ್ಟು ಕೆಲಸ ಮಾಡಬಹುದಿತ್ತು ಎಂಬ ಬೇಸರವಿದೆ ಎಂದು ಹೇಳಿಕೊಂಡಿದ್ದರು.\