ಸಾರಾಂಶ
ಪಹಲ್ಗಾಂ: ಪಹಲ್ಗಾಂ ಉಗ್ರ ದಾಳಿಗೆ 26 ಅಮಾಯಕ ನಾಗರಿಕರು ಬಲಿಯಾಗಿ ಮೇ 22ಕ್ಕೆ ಒಂದು ತಿಂಗಳು ಕಳೆದಿದೆ. ಉಗ್ರರ ಪತ್ತೆಗೆ ಭದ್ರತಾ ಪಡೆಗಳು ಕಾಶ್ಮೀರ ಕಣಿವೆಯಾದ್ಯಂತ ಕಾರ್ಯಾಚರಣೆ ನಡೆಸುತ್ತಿವೆ. ಆದರೆ ನಾಗರಿಕರನ್ನು ಕೊಂದ ಉಗ್ರರು ಇನ್ನೂ ತಲೆಮರೆಸಿಕೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಕರಣದ ತನಿಖೆಯನ್ನು ವಹಿಸಿಕೊಂಡಿರುವ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ), ನರಮೇಧದಲ್ಲಿ ನೇರವಾಗಿ ಅಥವಾ ಪರೋಕ್ಷವಾಗಿ ಭಾಗಿಯಾದ 100ಕ್ಕೂ ಹೆಚ್ಚು ಶಂಕಿತರನ್ನು ಪ್ರಶ್ನಿಸಿದೆ.
ಘಟನೆ ನಡೆದ ಬೈಸರನ್ ಹುಲ್ಲುಗಾವಲಿನ ಆಹಾರ ಮಳಿಗೆ ಮಾಲೀಕರು, ಜಿಪ್ಲೈನ್ ನಿರ್ವಾಹಕರು, ಕುದುರೆ ಸವಾರರು ಸೇರಿದಂತೆ ವಿವಿಧ ಸೇವೆಗಳನ್ನು ಒದಗಿಸುತ್ತಿದ್ದವರನ್ನು ಪರಿಶೀಲಿಸಲಾಗಿದೆ.ದಾಳೆ ನಡೆಸಿದ ಉಗ್ರರ ರೇಖಾಚಿತ್ರ ಬಿಡುಗಡೆ ಮಾಡಿ, ಅವರ ಮಾಹಿತಿ ನೀಡಿದವರಿಗೆ 20 ಲಕ್ಷ ರು. ಬಹುಮಾನ ಘೋಷಿಸಲಾಗಿದೆ. ಪಹಲ್ಗಾಂ ಸುತ್ತಮುತ್ತಲಿನ ಮೊಬೈಲ್ ಡೇಟಾ, ದಾಳಿ ವೇಳೆ ಪ್ರವಾಸಿಗರು ಸೆರೆಹಿಡಿದ ವಿಡಿಯೋಗಳನ್ನು ತನಿಖಾಧಿಕಾರಿಗಳು ವಿಶ್ಲೇಷಿಸಿದ್ದಾರೆ.
ಸುಮಾರು 100 ಜನರ ಮೇಲೆ ಸಾರ್ವಜನಿಕ ಸುರಕ್ಷತಾ ಕಾಯ್ದೆಯಡಿ ಪ್ರಕರಣ ದಾಖಲಿಸಿ ವಿವಿಧ ಜೈಲುಗಳಿಗೆ ಕಳುಹಿಸಲಾಗಿದೆ. ಈಗಾಗಲೇ ಶಿಕ್ಷೆ ಅನುಭವಿಸಿದ ಉಗ್ರಗಾಮಿಗಳನ್ನು ಸಹ ಭದ್ರತಾ ಪಡೆಗಳು ವಶಕ್ಕೆ ಪಡೆದಿವೆ. ಆದರೂ ಯಾವುದೇ ಪ್ರಯತ್ನ ಫಲ ನೀಡಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಹಂತಕರು ಇಲ್ಲಿಯವರೆಗೆ ಭದ್ರತಾ ಪಡೆಗಳಿಂದ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ನಾವು ಅವರನ್ನು ಹಿಡಿಯಲು ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ ಎಂದು ಅಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ.