ಉತ್ತರ ಕೊರಿಯಾ ಸಂಸತ್‌ಗೆ ಮಾ.15ರಂದು ನಡೆದ ಚುನಾವಣೆಯಲ್ಲಿ ಸರ್ವಾಧಿಕಾರಿ ಅಧ್ಯಕ್ಷ ಕಿಮ್‌ ಜಾಂಗ್‌ ಅವರ ಪಕ್ಷ ಶೇ.99.93ರಷ್ಟು ಮತ ಪಡೆದು ಗೆಲುವು ಸಾಧಿಸಿದೆ.

ಆದರೆ ಉಳಿದ ಶೇ.0.07 ಯಾರೆಂಬುದೇ ಚರ್ಚೆಪ್ಯೋಂಗ್ಯಾಂಗ್‌: ಉತ್ತರ ಕೊರಿಯಾ ಸಂಸತ್‌ಗೆ ಮಾ.15ರಂದು ನಡೆದ ಚುನಾವಣೆಯಲ್ಲಿ ಸರ್ವಾಧಿಕಾರಿ ಅಧ್ಯಕ್ಷ ಕಿಮ್‌ ಜಾಂಗ್‌ ಅವರ ಪಕ್ಷ ಶೇ.99.93ರಷ್ಟು ಮತ ಪಡೆದು ಗೆಲುವು ಸಾಧಿಸಿದೆ. ಆದರೆ ಅದಕ್ಕಿಂತಲೂ ಭಾರೀ ಚರ್ಚೆಯಾಗುತ್ತಿರುವುದು ಅವರ ವಿರುದ್ಧ ಮತ ಹಾಕಿದ ಶೇ.0.07 ಮಂದಿ ಬಗ್ಗೆ. 687 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಚುನಾವಣೆಯಲ್ಲಿ ಎಲ್ಲಾ ಸ್ಥಾನಗಳನ್ನು ಕಿಮ್‌ ಅವರ ವರ್ಕರ್ಸ್‌ ಪಾರ್ಟಿ ಗೆದ್ದಿದೆ. ಜೊತೆಗೆ ಪಕ್ಷದ ಪರವಾಗಿ ಶೇ.99.93ರಷ್ಟು ಜನ ಮತ ಚಲಾಯಿಸಿದ್ದಾರೆ. ಹೀಗಾಗಿ ತಮ್ಮ ವಿರೋಧಿಗಳನ್ನು ಗುಂಡಿಟ್ಟು ಕೊಲ್ಲುವ ಇಲ್ಲವೇ ನಾಯಿಗಳಿಗೆ ಆಹಾರವಾಗಿ ನೀಡುವ ಕಿಮ್‌ ಜೊಂಗ್‌ ಆಡಳಿತದಲ್ಲಿ ಅವರ ವಿರುದ್ಧ ಮತ ಚಲಾಯಿಸಿದವರು ಯಾರು ಎಂಬುದು ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ.

==

ರಾಹುಲ್ ಗಾಂಧಿ ಟಪೋರಿ: ಸಂಸದೆ ಕಂಗನಾ ವಿವಾದ

ನವದೆಹಲಿ: ‘ರಾಹುಲ್ ಟಪೋರಿಯಂತೆ ವರ್ತಿಸುತ್ತಾರೆ. ಅವರ ವರ್ತನೆ ಮಹಿಳೆಯರಿಗೆ ಮುಜುಗರ ತರಿಸುತ್ತದೆ’ ಎಂದು ಮಂಡಿ ಕ್ಷೇತ್ರದ ಬಿಜೆಪಿ ಸಂಸದ ಕಂಗನಾ ರಾಣಾವತ್‌ ಹೇಳಿದ್ದಾರೆ. ಸಂಸತ್‌ ಆವರಣದಲ್ಲಿ ಈ ಕುರಿತು ಮಾತನಾಡಿರುವ ಕಂಗನಾ, ‘ರಾಹುಲ್‌ ಅವರ ವರ್ತನೆ ಮಹಿಳೆಯರಿಗೆ ತುಂಬಾ ಮುಜುಗರ ಉಂಟು ಮಾಡುತ್ತದೆ. ಅವರು ಟಪೋರಿಯಂತೆ ಸದನಕ್ಕೆ ಬರುತ್ತಾರೆ. ಎಲ್ಲರನ್ನೂ ಅಗೌರವದಿಂದ ಮಾತನಾಡಿಸುತ್ತಾರೆ. ಯಾರಾದರೂ ಮಾಧ್ಯಮಗಳಿಗೆ ಸಂದರ್ಶನ ನೀಡುತ್ತಿದ್ದರೆ ಇವರು ಕೂಗಾಡುತ್ತಾರೆ. ಇದು ಅವರಿಗೆ ಸ್ವತಃ ನಾಚಿಕೆಗೇಡಿನ ಸಂಗತಿ’ ಎಂದಿದ್ದಾರೆ. ಜೊತೆಗೆ ‘ರಾಹುಲ್‌ ತಮ್ಮ ಸಹೋದರಿ ಪ್ರಿಯಾಂಕಾ ಗಾಂಧಿ ನಡವಳಿಕೆ ನೋಡಿ ಕಲಿಯಬೇಕು. ಅವರು ತುಂಬಾ ಒಳ್ಳೆಯವರು’ ಎಂದಿದ್ದಾರೆ. ಸಂಸತ್ತಿನ ಮಕರ ದ್ವಾರದಲ್ಲಿ ರಾಹುಲ್ ಗಾಂಧಿ ಟೀ, ಬಿಸ್ಕತ್‌ ಸೇವನೆಗೆ ಕ್ಷಮೆಯಾಚಿಸಬೇಕೆಂದು ನಿವೃತ್ತ ಹಿರಿಯ ಅಧಿಕಾರಿಗಳು, ವಕೀಲರು ಸೇರಿ 84 ಮಂದಿ ರಾಹುಲ್‌ಗೆ ಬಹಿರಂಗ ಪತ್ರ ಬರೆದ ಬೆನ್ನಲ್ಲೇ ಕಂಗನಾ ಈ ಹೇಳಿಕೆ ನೀಡಿದ್ದಾರೆ.

==

ಕೇರಳದ ಹಲವೆಡೆ ಹಕ್ಕಿ ಜ್ವರ ಪತ್ತೆ: ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಆದೇಶ

ಕಲ್ಲಿಕೋಟೆ: ನೆರೆ ರಾಜ್ಯ ಕೇರಳದ ಕಲ್ಲಿಕೋಟೆ ಜಿಲ್ಲೆಯ ಹಲವು ಕಡೆಗಳಲ್ಲಿ ಹಕ್ಕಿ ಜ್ವರ ಪತ್ತೆಯಾಗಿದೆ. ಪೀಡಿತ ಪ್ರದೇಶಗಳಿಂದ ಸಂಗ್ರಹಿಸಲಾದ ರಕ್ತದ ಮಾದರಿಗಳನ್ನು ಪರೀಕ್ಷೆಗೊಳಪಡಿಸಿದಾಗ ಎಚ್‌5ಎನ್‌1 ಸೋಂಕು ದೃಢ ಪಟ್ಟಿದೆ. ಇಲ್ಲಿನ ಪಣಂಗಡ್, ಒಲವಣ್ಣ, ಕಕ್ಕೋಡಿ, ಪೆರುಮನ್ನ ಪಂಚಾಯತ್‌, ನಲ್ಲಂ, ಕಲ್ಲಿಕೋಟೆಯಲ್ಲಿ ಸೋಂಕಿನ ಪ್ರಕರಣ ದೃಢಪಟ್ಟಿದೆ. ಆದರೆ ಇದುವರೆಗೆ ಮನುಷ್ಯರಿಗೆ ಹರಡಿರುವ ಯಾವುದೇ ಘಟನೆ ವರದಿಯಾಗಿಲ್ಲ. ಆದರೂ ಸ್ಥಳೀಯಾಡಳಿತ ಮುಂಜಾಗ್ರತಾ, ನಿಯಂತ್ರಣ ಕ್ರಮಕ್ಕೆ ಮುಂದಾಗಿದೆ. ನಾಗರಿಕರು ಸುರಕ್ಷಿತ ನಿಯಮ ಪಾಲಿಸುವಂತೆ ಸಲಹೆ ನೀಡಿದೆ.

==

ವಿಜಯ್‌ಗೆ ಎರಡೂವರೆ ವರ್ಷ ಸಿಎಂ, ಶೇ.50 ಸೀಟು ಆಫರ್‌: ಟಿವಿಕೆ

ಚೆನ್ನೈ: ನಮ್ಮೊಂದಿಗೆ ಚುನಾವಣಾ ಮೈತ್ರಿ ಮಾಡಿಕೊಂಡರೆ ಶೇ.50ರಷ್ಟು ಸೀಟು ಮತ್ತು ಪಕ್ಷದ ಅಧ್ಯಕ್ಷ ವಿಜಯ್‌ ಅವರನ್ನು ಎರಡೂವರೆ ವರ್ವ ಕಾಲ ಮುಖ್ಯಮಂತ್ರಿ ಮಾಡುವುದಾಗಿ ರಾಜಕೀಯ ಪಕ್ಷವೊಂದು ಆಫರ್‌ ನೀಡಿತ್ತು. ಆದರೆ ವಿಜಯ್‌ ಆ ಪ್ರಸ್ತಾಪ ತಿರಿಸ್ಕರಿಸಿದ್ದರು ಎಂದು ಟಿವಿಕೆ ಪಕ್ಷದ ಪ್ರಧಾನ ಕಾರ್ಯದರ್ಶಿ ಅವಧ್‌ ಅರ್ಜುನ್‌ ಹೇಳಿದ್ದಾರೆ. ಆದರೆ ಆಫರ್‌ ನೀಡಿದ ಪಕ್ಷ ಯಾವುದೆಂದು ಅವರು ಹೇಳಿಲ್ಲ. ವಿಜಯ್‌ ಜೊತೆ ನಮ್ಮ ಪಕ್ಷ ಯಾವುದೇ ಮಾತುಕತೆ ನಡೆಸಿಲ್ಲ ಎಂದು ಎನ್‌ಡಿಎ ಕೂಟದ ಪಕ್ಷಗಳಾದ ಅಣ್ಣಾಡಿಎಂಕೆ ಮತ್ತು ಬಿಜೆಪಿ ಸ್ಪಷ್ಟಪಡಿಸಿದ್ದವು. ಆದರೆ ಬಿಜೆಪಿ ಕಡೆಯಿಂದ ಇಂಥದ್ದೊಂದು ಆಫರ್‌ ಹೋಗಿತ್ತು ಎಂದು ವರದಿಗಳು ಹೇಳಿದ್ದವು.