ಸಾರಾಂಶ
ಲಖನೌ: ಪೆಟ್ರೋಲ್ ಬಂಕ್ನಲ್ಲಿ ಸಿಬ್ಬಂದಿ ಜತೆಗಿನ ವಾಗ್ವಾದ ಸಂಬಂಧದಲ್ಲಿ ಮಹಿಳೆಯೊಬ್ಬಳು ಸಿಬ್ಬಂದಿಗೆ ರಿವಾಲ್ವರ್ ತೋರಿಸಿ ಬೆದರಿಕೆ ಹಾಕಿದ ಘಟನೆ ಉತ್ತರ ಪ್ರದೇಶದ ಹಾರ್ದೋಯಿ ಜಿಲ್ಲೆಯಲ್ಲಿ ನಡೆದಿದೆ.ಯುವತಿ ಮತ್ತು ಆಕೆಯ ತಂದೆ ಬಂಕ್ಗೆ ಪೆಟ್ರೋಲ್ ತುಂಬಿಸಲು ಬಂದಿದ್ದರು. ಈ ವೇಳೆ ಸಿಬ್ಬಂದಿಯ ಜತೆ ಯಾವುದೋ ಕಾರಣಕ್ಕೆ ವಾಗ್ವಾದ ನಡೆದಿದೆ. ಇದರಿಂದ ಸಿಟ್ಟಿಗೆದ್ದ ಮಹಿಳೆ ಬಂಕ್ನಲ್ಲಿದ್ದ ಭದ್ರತಾ ಸಿಬ್ಬಂದಿಯ ರಿವಾಲ್ವರ್ ಹಿರಿದಿದ್ದಾಳೆ. ಅದನ್ನು ಬಂಕ್ ಸಿಬ್ಬಂದಿಗೇ ತೋರಿಸಿ ಬೆದರಿಕೆ ಹಾಕಿದ್ದಾಳೆ. ಇನ್ನು ಘಟನೆ ಸಂಬಂಧಿಸಿದಂತೆ ಪೊಲೀಸರು ಮಹಿಳೆ ಮತ್ತು ಆಕೆಯ ತಂದೆಯನ್ನು ಬಂಧಿಸಿದ್ದು, ರಿವಾಲ್ವರ್ ವಶ ಪಡಿಸಿಕೊಂಡಿದ್ದಾರೆ. ಮಹಿಳೆ ರಿವಾಲ್ವರ್ ಹಿಡಿದು ಬೆದರಿಕೆ ಹಾಕುತ್ತಿರುವ ವಿಡಿಯೋ ಜಾಲತಾಣದಲ್ಲಿ ವೈರಲ್ ಆಗಿದೆ.
ಹಜ್ ಯಾತ್ರಿಕರಿದ್ದ ವಿಮಾನದ ಚಕ್ರಕ್ಕೆ ಲಖನೌದಲ್ಲಿ ಹೊಗೆ: ಪ್ರಯಾಣಿಕರು ಸೇಫ್
ಲಖನೌ: ಸೌದಿ ಅರೇಬಿಯಾದ ಜೆಡ್ಡಾದಿಂದ ಲಖನ್ಗೆ 242 ಹಜ್ ಯಾತ್ರಿಕರನ್ನು ಕರೆದುಕೊಂಡು ಬರುತ್ತಿದ್ದ ಸೌದಿ ಅರೇಬಿಯಾ ಏರ್ಲೈನ್ಸ್ ವಿಮಾನದಚಕ್ರದಲ್ಲಿ ಹೊಗೆ ಕಾಣಿಸಿಕೊಂಡ ಘಟನೆ ನಡೆದಿದೆ. ವಿಮಾನವನ್ನು ಸುರಕ್ಷಿತವಾಗಿ ಲ್ಯಾಂಡ್ ಮಾಡಲಾಗಿದ್ದು, ಎಲ್ಲಾ ಪ್ರಯಾಣಿಕರು ಸುರಕ್ಷಿತರಾಗಿದ್ದಾರೆ.ಭಾನುವಾರ ಬೆಳಿಗ್ಗೆ ಸೌದಿ ಅರೇಬಿಯಾ ಏರ್ಲೈನ್ಸ್ ಇಲ್ಲಿನ ಚೌಧರಿ ಚರಣ್ ಸಿಂಗ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗುವಾಗ ಅದರ ಎಡ ಚಕ್ರದಿಂದ ಹೊಗೆ ಹೊರ ಹೋಗುತ್ತಿರುವುದು ಕಾಣಿಸಿಕೊಂಡಿದೆ. ಈ ಬೆನ್ನಲ್ಲೇ ವಿಮಾನ ರಕ್ಷಣಾ ಮತ್ತು ಅಗ್ನಿಶಾಮಕ ದಳ ಸ್ಥಳಕ್ಕೆ ಆಗಮಿಸಿ ಸೌದಿ ತಂಡದ ನೆರವಿನಿಂದ ಹೊಗೆ ನಿಯಂತ್ರಿಸುವಲ್ಲಿ ಯಶಸ್ವಿಯಾಗಿದೆ. ಹೈಡ್ರಾಲಿಕ್ ಸೋರಿಕೆಯಿಂದ ಹೊಗೆ ಕಾಣಿಸಿಕೊಂಡಿರಬಹುದು ಎಂದು ಅಂದಾಜಿಸಲಾಗಿದ್ದು, ಅದೃಷ್ಟವಶಾತ್ ಯಾವುದೇ ಹಾನಿ ಸಂಭವಿಸಿಲ್ಲ.
ಏರಿಂಡಿಯಾ ವಿನಾನ ತಾಂತ್ರಿಕ ದೋಷ: ದಿಲ್ಲಿಗೆ ಬರುತ್ತಿದ್ದ ವಿಮಾನ ಹಾಂಕಾಂಗ್ಗೆ ವಾಪಸ್
ಮುಂಬೈ: ಹಾಂಕಾಂಗ್ನಿಂದ ದೆಹಲಿಗೆ ಬರುತ್ತಿದ್ದ ಏರಿಂಡಿಯಾದಲ್ಲಿ ಪೈಲಟ್ ತಾಂತ್ರಿಕ ದೋಷದ ಅನುಮಾನ ವ್ಯಕ್ತಪಡಿಸಿದ ಬೆನ್ನಲ್ಲೇ ವಿಮಾನ ಮತ್ತೆ ಹಾಂಕಾಂಗ್ಗೆ ವಾಪಸ್ ಹೋಗಿ ಸುರಕ್ಷಿತವಾಗಿ ಲ್ಯಾಂಡಿಂಗ್ ಆದ ಘಟನೆ ನಡೆದಿದೆ.ಸೋಮವಾರ ಹಾಂಕಾಂಗ್ನಿಂದ ಹೊರಟಿದ್ದ ವಿಮಾನ ದೆಹಲಿಯಲ್ಲಿ ಮಧ್ಯಾಹ್ನ 12.16ಕ್ಕೆ ಲ್ಯಾಂಡ್ ಆಗಬೇಕಿತ್ತು. ಆದರೆ ಈ ವೇಳೆ ಪೈಲಟ್ ತಾಂತ್ರಿಕ ದೋಷ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ವಿಮಾನ್ ಹಾಂಕಾಂಗ್ಗೆ ಹಿಂದಿರುಗಿ ಅಲ್ಲಿ ತುರ್ತು ಭೂಸ್ಪರ್ಶವಾಗಿದ್ದು, ಪ್ರಯಾಣಿಕರೆಲ್ಲರೂ ಸುರಕ್ಷಿತರಾಗಿದ್ದಾರೆ.
ಕೇಂದ್ರ ಸಚಿವ ಗೋಯಲ್ ಕಾಪ್ಟರಲ್ಲಿ ತಾಂತ್ರಿಕ ದೋಷ: ಸರ್ವೇ ರದ್ದು
ತಿರುಪತಿ: ದೇಶದ ಕೆಲವು ಕಡೆ ಹೆಲಿಕಾಪ್ಟರ್ ಹಾಗೂ ವಿಮಾನ ದುರಂತ ಸಂಭವಿಸುತ್ತಿರುವ ನಡುವೆಯೇ ಕೇಂದ್ರ ವಾಣಿಜ್ಯ ಸಚಿವ ಪೀಯೂಷ್ ಗೋಯಲ್ ಅವರು ಸಾಗಬೇಕಿದ್ದ ಹೆಲಿಕಾಪ್ಟರ್ನಲ್ಲಿ ಹಾರಾಟಕ್ಕೆ ಮುನ್ನವೇ ತಾಂತ್ರಿಕ ದೋಷ ಸಂಭವಿಸಿದೆ. ಹೀಗಾಗಿ ಅವರು ತಿರುಪತಿ ವಿಶೇಷ ಆರ್ಥಿಕ ವಲಯದ ವೈಮಾನಿಕ ಸಮೀಕ್ಷೆ ಕೈಬಿಟ್ಟು ದಿಲ್ಲಿಗೆ ವಾಪಸಾಗಿದ್ದಾರೆ. ಘಟನೆ ವೇಳೆ ಅವರು ತಿರುಚಾನೂರು ದೇವಾಲಯದಲ್ಲಿ ದರ್ಶನ ಪಡೆಯುತ್ತಿದ್ದರು. ಆಗ ಅವರಿಗೆ ಕಾಪ್ಟರ್ ದೋಷದ ಮಾಹಿತಿ ನೀಡಲಾತಿತು. ಇದಕ್ಕೂ ಮುನ್ನ ಅವರು ತಿರುಮಲ ತಿಮ್ಮಪ್ಪನ ದರ್ಶನ ಪಡೆದರು.
ಭಾರತದ ಜಿ20 ಶೆರ್ಪಾ ಹುದ್ದೆಗೆ ಅಮಿತಾಭ್ ಕಾಂತ್ ರಾಜೀನಾಮೆ
ನವದೆಹಲಿ: ಜಿ20 ಶೃಂಗವನ್ನು ಭಾರತದಲ್ಲಿ ಯಶಸ್ವಿಯಾಗಿ ಸಂಘಟಿಸಿ ಸುದ್ದಿ ಮಾಡಿದ್ದ ನಿವೃತ್ತ ಐಎಎಸ್ ಅಧಿಕಾರಿ ಹಾಗೂ ನೀತಿ ಆಯೋಗದ ಮಾಜಿ ಸಿಇಒ ಅಮಿತಾಭ್ ಕಾಂತ್ ಅವರು ಜಿ20ಯ ಭಾರತದ ಶೆರ್ಪಾ (ಭಾರತದ ಮುಖ್ಯಸ್ಥ) ಹುದ್ದೆಗೆ ಸೋಮವಾರ ರಾಜೀನಾಮೆ ನೀಡಿದ್ದಾರೆ.1980ರ ಬ್ಯಾಚ್ನ ಕೇರಳ ಕೇಡರ್ನ ನಿವೃತ್ತ ಐಎಎಸ್ ಅಧಿಕಾರಿಯಾದ ಅಮಿತಾಭ್ ಅವರು ಸುಮಾರು 45 ವರ್ಷಗಳಷ್ಟು ಸುದೀರ್ಘ ಅವಧಿಗೆ ಸರ್ಕಾರಿ ಸೇವೆಯಲ್ಲಿದ್ದಾರೆ. ನಿವೃತ್ತಿ ಬಳಿಕ ಅವರನ್ನು ಜುಲೈ, 2022ರಂದು ಭಾರತದ ಜಿ20 ಶೆರ್ಪಾ ಆಗಿ ನೇಮಕ ಮಾಡಲಾಗಿತ್ತು. ಇದೀಗ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಕಾಂತ್ ಅವರು ಹೊಸ ಅವಕಾಶಗಳತ್ತ ಮುಖಮಾಡುವೆ ಎಂದಿದ್ದಾರೆ.
ರಾಜೀನಾಮೆ ಕುರಿತು ಲಿಂಕ್ಡ್ಇನ್ ಅಲ್ಲಿ ಬರೆದುಕೊಂಡಿರುವ ಅವರು, ಸುಮಾರು 45 ವರ್ಷಗಳ ಸುದೀರ್ಘ ಸರ್ಕಾರಿ ಸೇವೆಗಳ ಬಳಿಕ ನಾನು ಹೊಸ ಅವಕಾಶಗಳತ್ತ ಮುಖಮಾಡಲು ನಿರ್ಧರಿಸಿದ್ದೇನೆ. ನನ್ನ ರಾಜೀನಾಮೆ ಸ್ವೀಕರಿಸಿದಕ್ಕಾಗಿ ಮತ್ತು ಜಿ20 ಶೆರ್ಪಾ ಆಗಿ ನೇಮಿಸಿ ದೇಶದ ಪ್ರಗತಿಗೆ ಕೊಡುಗೆ ನೀಡಲು ಅವಕಾಶ ಮಾಡಿಕೊಟ್ಟಿದ್ದಕ್ಕಾಗಿ ಪ್ರಧಾನಮಂತ್ರಿಗಳಿಗೆ ಆಭಾರಿಯಾಗಿದ್ದೇನೆ ಎಂದು ಹೇಳಿಕೊಂಡಿದ್ದಾರೆ.
ಇನ್ನು ಮುಂದೆ ವಿಕಸಿತ ಭಾರತದೆಡೆಗಿನ ದೇಶದ ಹೆಜ್ಜೆಗೆ ನೆರವಾಗುವ ನಿಟ್ಟಿನಲ್ಲಿ ಕೆಲಸ ಮಾಡುವುದಾಗಿ ಅವರು ತಿಳಿಸಿದ್ದಾರೆ.