ತಮ್ಮ ಪಕ್ಷದ ಸಂಸದೆ ಮೇಲೆ ಹಲ್ಲೆ ಕುರಿತು ಪ್ರತಿಕ್ರಿಯೆಗೆ ಕೇಜ್ರಿ ನಕಾರ ವ್ಯಕ್ತಪಡಿಸಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.

ಲಖನೌ: ಕರ್ನಾಟಕದಲ್ಲಿ ಜೆಡಿಎಸ್‌ ಸಂಸದ ಪ್ರಜ್ವಲ್‌ ರೇವಣ್ಣ ಸಾವಿರಾರು ಮಹಿಳೆಯರ ಮೇಲೆ ಅತ್ಯಾಚಾರ ಮಾಡಿದ್ದಾರೆ. ಆದರೆ ಅವರಿಗೆ ಬಿಜೆಪಿ ರಕ್ಷಣೆ ನೀಡುತ್ತಿದೆ. ಮಹಿಳೆಯರಿಗೆ ಅನ್ಯಾಯ ಆಗಿರುವ ಕುರಿತು ಬಿಜೆಪಿ ಏಕೆ ಕ್ರಮ ವಹಿಸುತ್ತಿಲ್ಲ ಎಂದು ಪ್ರಶ್ನಿಸಿದ್ದ ಆಮ್‌ಆದ್ಮಿ ಪಕ್ಷ, ತನ್ನದೇ ಪಕ್ಷದ ಸಂಸದೆ ಸ್ವಾತಿ ಮಲಿವಾಲ್‌ ಪ್ರಕರಣದಲ್ಲಿ ಜಾಣ ಮೌನಕ್ಕೆ ಶರಣಾಗಿದೆ.

ಸ್ವಾತಿ ಮೇಲೆ ಹಲ್ಲೆ ನಡೆಸಿದ ಆರೋಪಿ ಭಿಭವ್‌ ಕುಮಾರ್‌ ಜೊತೆ ಗುರುವಾರ ಬಹಿರಂಗವಾಗಿಯೇ ಕಾಣಿಸಿಕೊಂಡ ಸಿಎಂ ಕೇಜ್ರಿವಾಲ್‌, ಬಳಿಕ ಪತ್ರಿಕಾಗೋಷ್ಠಿಯಲ್ಲಿ ಸ್ವಾತಿ ಕುರಿತು ಪ್ರಶ್ನೆ ಕೇಳಿದ ವೇಳೆ ಉತ್ತರ ನೀಡಲು ಹಿಂದೆ ಸರಿದರು. ಬಳಿಕ ಈ ಕುರಿತು ಆಪ್‌ ಸಂಸದ ಸಂಜಯ್‌ ಸಿಂಗ್‌ ಪ್ರತಿಕ್ರಿಯೆ ನೀಡಿದಾರಾದರೂ, ಈ ವಿಷಯದಲ್ಲಿ ನಮ್ಮ ನಿಲುವು ಈಗಾಗಲೇ ಸ್ಪಷ್ಟಪಡಿಸಿದ್ದೇವೆ ಎಂದು ಹೇಳಿ ತಪ್ಪಿಸಿಕೊಳ್ಳುವ ಯತ್ನ ಮಾಡಿದರು.

ಎರಡು ದಿನಗಳ ಹಿಂದೆ ಉತ್ತರಪ್ರದೇಶದ ಚುನಾವಣಾ ರ್‍ಯಾಲಿಯಲ್ಲ ಮಾತನಾಡಿದ್ದ ಸಂಜಯ್‌ ಸಿಂಗ್‌ ಪ್ರಜ್ವಲ್‌ ರೇವಣ್ಣ ವಿಷಯದ ಕುರಿತು ಬಿಜೆಪಿ ವಿರುದ್ಧ ಹರಿಹಾಯ್ದಿದ್ದರು.