ಸಾರಾಂಶ
ಬಿಜೆಪಿ ಪಾಲಿಗೆ ಕಂಡುಕೇಳರಿಯದ ನಾಯಕನಾಗಿ ಹೊರಹೊಮ್ಮಿರುವ ಹಾಲಿ ಪ್ರಧಾನಿ ನರೇಂದ್ರ ಮೋದಿ ಅವರಲ್ಲಿನ ಶಕ್ತಿ ಹುಡುಕಿ, ಅವರಿಗೆ ಮಹತ್ವದ ಹುದ್ದೆ ನೀಡಿ, ರಾಜಕೀಯದ ಯಶಸ್ವಿ ಹೆಜ್ಜೆ ಇಡಿಸಿದ ಖ್ಯಾತಿ ಅಡ್ವಾಣಿ ಅವರಿಗೆ ಸಲ್ಲುತ್ತದೆ.
1984ರ ಲೋಕಸಭಾ ಚುನಾವಣೆಯಲ್ಲಿ ಪಕ್ಷ ಯಾವುದೇ ಮ್ಯಾಜಿಕ್ ಮಾಡಲು ವಿಫಲವಾದ ವೇಳೆ ಮತ್ತೆ ಪಕ್ಷವನ್ನು ಬೇರುಮಟ್ಟದಿಂದ ಕಟ್ಟುವ ಯತ್ನ ಆರಂಭಿಸಿದಾಗ ಅಡ್ವಾಣಿ ಕಣ್ಣಿಗೆ ಮೊದಲು ಬಿದ್ದಿದ್ದೇ ಮೋದಿ.
ಮೋದಿ ಅವರನ್ನು ಗುಜರಾತ್ ಘಟಕದ ಕಾರ್ಯದರ್ಶಿಯನ್ನಾಗಿ ನೇಮಿಸಿ ರಾಜ್ಯದಲ್ಲಿ ಪಕ್ಷ ಕಟ್ಟುವ ಹೊಣೆ ನೀಡಿದರು. ಈ ಕೆಲಸದಲ್ಲಿ ಮೋದಿ ಯಶಸ್ವಿಯಾದ ಬೆನ್ನಲ್ಲೇ, 1989ರಲ್ಲಿ ನಡೆದ ಅಡ್ವಾಣಿ ಅವರ ರಾಮರಥ ಯಾತ್ರೆ ಗುಜರಾತ್ಗೆ ಪ್ರವೇಶಿಸಿದ ವೇಳೆ ಅದರ ಪೂರ್ಣ ರೂಪರೇಷೆ ರಚಿಸಿದ್ದ ಮೋದಿ. ತಮಗೆ ಹೀಗೆ ರಾಜಕೀಯ ಬ್ರೇಕ್ ನೀಡಿದ ಅಡ್ವಾಣಿ ಅವರ ಮನವೊಲಿಸಿ ಮೊದಲ ಬಾರಿಗೆ ಗಾಂಧೀ ನಗರದಿಂದ ಸ್ಪರ್ಧಿಸಿ ಅವರ ಆಯ್ಕೆ ಖಚಿತಪಡಿಸಿದ್ದು ಮೋದಿ.
ಇನ್ನು 1995ರಲ್ಲಿ ಗುಜರಾತ್ ಬಿಜೆಪಿಯಲ್ಲಿ ಬಿಕ್ಕಟ್ಟು ಕಾಣಿಸಿಕೊಂಡು ಮೋದಿ ಅವರನ್ನು ಅಸ್ಸಾಂಗೆ ಕಳುಹಿಸಲು ಹೈಕಮಾಂಡ್ ಮುಂದಾದಾಗ, ಮೋದಿ ಅವರನ್ನು ಬಿಜೆಪಿ ಆಡಳಿತದ ಹಿಮಾಚಲಕ್ಕೆ ನಿಯೋಜಿಸಿದ್ದು ಅಡ್ವಾಣಿ.
ಇನ್ನು 2002ರ ಗುಜರಾತ್ ಗಲಭೆ ವೇಳೆ ಮೋದಿ ಪದಚ್ಯುತಿಗೆ ಅಂದಿನ ಪ್ರಧಾನಿ ವಾಜಪೇಯಿ ಪಟ್ಟುಹಿಡಿದಿದ್ದರಾದರೂ, ಮೋದಿಯನ್ನು ಹುದ್ದೆಯಲ್ಲಿ ಮುಂದುವರೆಯಲು ಬಿಗಿಪಟ್ಟು ಹಾಕಿ ಕಾಪಾಡಿದ್ದು ಅಡ್ವಾಣಿ.