ಮಣಿಪುರದಲ್ಲಿ ಮತ್ತೆ ಹಿಂಸಾಚಾರ ಭುಗಿಲೆದ್ದಿದ್ದು ವಿದ್ಯಾರ್ಥಿಗಳ ಪ್ರತಿಭಟನೆ, ಕರ್ಫ್ಯೂ ಜಾರಿ

| Published : Sep 11 2024, 01:05 AM IST / Updated: Sep 11 2024, 05:34 AM IST

ಸಾರಾಂಶ

ಮಣಿಪುರದಲ್ಲಿ ಜನಾಂಗೀಯ ಸಂಘರ್ಷ ಮತ್ತೆ ಭುಗಿಲೆದ್ದಿದ್ದು, ಶಾಂತಿಗಾಗಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದಾಗ ಪೊಲೀಸರ ಅಶ್ರುವಾಯು ಪ್ರಯೋಗದಿಂದ ಹಲವರು ಗಾಯಗೊಂಡಿದ್ದಾರೆ. ಪರಿಸ್ಥಿತಿ ನಿಯಂತ್ರಿಸಲು ಕರ್ಫ್ಯೂ ಹಾಗೂ ಇಂಟರ್ನೆಟ್‌ ಸ್ಥಗಿತಗೊಳಿಸಲಾಗಿದೆ.

ಇಂಫಾಲ್: ಜನಾಂಗೀಯ ಸಂಘರ್ಷ ಪೀಡಿತ ಈಶಾನ್ಯ ರಾಜ್ಯ ಮಣಿಪುರದಲ್ಲಿ ಮತ್ತೆ ಹಿಂಸಾಚಾರ ಭುಗಿಲೆದ್ದಿದ್ದು, ಶಾಂತಿ ಮರುಸ್ಥಾಪನೆಗೆ ಒತ್ತಾಯಿಸಿ ವಿದ್ಯಾರ್ಥಿಗಳು ಪ್ರತಿಭಟನೆ ಆರಂಭಿಸಿದ್ದಾರೆ. ಮಂಗಳವಾರ ನಡೆದ ‘ರಾಜಭವನ ಚಲೋ’ ಹಿಂಸೆಗೆ ತಿರುಗಿದ್ದು, ಪೊಲೀಸರು ಅಶ್ರುವಾಯು ಪ್ರಯೋಗಿಸಿದ್ದಾರೆ. ಆಗ 40ಕ್ಕೂ ಹೆಚ್ಚು ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ.

ಹೀಗಾಗಿ ಪರಿಸ್ಥಿತಿ ನಿಯಂತ್ರಿಸಲು ಮಣಿಪುರದ 3 ಜಿಲ್ಲೆಗಳಾದ ಇಂಫಾಲ್ ಪೂರ್ವ ಮತ್ತು ಪಶ್ಚಿಮ ಹಾಗೂ ಥೌಬಾಲ್‌ ಜಿಲ್ಲೆಗಳಲ್ಲಿ ಕರ್ಫ್ಯೂ ಘೋಷಿಸಲಾಗಿದೆ. ಮತ್ತೊಂದು ಕಡೆ ಸೆ.15ರವರೆಗೆ ರಾಜ್ಯದ 5 ಜಿಲ್ಲೆಗಳಲ್ಲಿ ಇಂಟರ್ನೆಟ್‌ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ. ಶಾಂತಿ ಸ್ಥಾಪನೆಗೆ 2000 ಮಂದಿಯ 2 ಸಿಆರ್‌ಪಿಎಫ್‌ ಬೆಟಾಲಿಯನ್‌ ನಿಯೋಜಿಸಲು ಆದೇಶಿಸಲಾಗಿದೆ.

ಮಹಿಳೆ ಸಾವು:

ಈ ನಡುವೆ, ಅದೇ ರೀತಿ ಮಣಿಪುರದ ಕಾಂಗ್‌ಪೋಕ್ಪಿ ಜಿಲ್ಲೆಯಲ್ಲಿ 2 ಸಶಸ್ತ್ರ ಗುಂಪುಗಳ ನಡುವಿನ ಗುಂಡಿನ ಚಕಮಕಿಯಲ್ಲಿ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ.

ರಾಕೆಟ್‌ ಪತ್ತೆ:

ಈ ನಡುವೆ ಇತ್ತೀಚೆಗೆ ಕುಕಿ ಉಗ್ರರು ಇತ್ತೀಚೆಗೆ ಮಾಜಿ ಮುಖ್ಯಮಂತ್ರಿಯ ಮನೆ ಬಳಿ ರಾಕೆಟ್‌ ದಾಳಿ ನಡೆಸಿದ ಕಾರಣ ಪೊಲೀಸರು ಶೋಧ ನಡೆಸಿದ್ದು, ಹಲವು ರಾಕೆಟ್‌ಗಳು ಪತ್ತೆ ಆಗಿವೆ. ಡ್ರೋನ್‌ ದಾಳಿ ಕೂಡ ಕಳೆದ ವಾರ ನಡೆದಿದ್ದವು. ಹೀಗಾಗಿ ಇಂಥ ವಸ್ತುಗಳು ಕುಕಿ ಉಗ್ರರ ಕೈಗೆ ಸಿಗಬೇಕೆಂದರೆ ಈಗ ಪುನಾರಂಭ ಅಗಿರುವ ಹಿಂಸಾಚಾರದ ಹಿಂದೆ ವಿದೇಶಿ ಕೈವಾಡದ ಸಂದೇಹ ಸೃಷ್ಟಿಯಾಗಿದೆ.ಕಳೆದ 1 ವರ್ಷದಿಂದ ರಾಜ್ಯದಲ್ಲಿ ಮೀಸಲಾತಿ ಸಂಬಂಧ ಕುಕಿ ಹಾಗೂ ಮೈತೇಯಿ ಸಮುದಾಯದ ನಡುವೆ ನಡೆಯುತ್ತಿರುವ ಹಿಂಸೆಯಲ್ಲಿ 200ಕ್ಕೂ ಹೆಚ್ಚು ಜನ ಬಲಿಯಾಗಿದ್ದಾರೆ.