ಸಾರಾಂಶ
ಧರ್ಮಗುರು ಬಾಬಾ ರಾಮ್ ರಹೀಂ ಸಿಂಗ್ನನ್ನು ಬೆಂಬಲಿಸಿ ‘ಕ್ಷಮಾದಾನ’ ನೀಡಿದ್ದಕ್ಕೆ ಪಂಜಾಬ್ನ ಮಾಜಿ ಮುಖ್ಯಮಂತ್ರಿ ಸುಖಬೀರ್ ಬಾದಲ್ ಅವರಿಗೆ ಸಿಖ್ಖರ ಪರಮೋಚ್ಚ ಧಾರ್ಮಿಕ ನ್ಯಾಯ ಮಂಡಳಿ ‘ಅಕಾಲ್ ತಖ್ತ್’, ಶೌಚಾಲಯ ಶುಚಿಗೊಳಿಸುವ ಶಿಕ್ಷೆ ವಿಧಿಸಿದೆ.
ಅಮೃತಸರ: ಸಿಖ್ಖರ ಪವಿತ್ರ ಧರ್ಮಗ್ರಂಥವನ್ನು ಅವಮಾನಿಸಿದ್ದ ಅತ್ಯಾಚಾರ ದೋಷಿ, ವಿವಾದಿತ ಡೇರಾ ಸಚ್ಚಾ ಸೌದಾ ಪಂಥದ ಧರ್ಮಗುರು ಬಾಬಾ ರಾಮ್ ರಹೀಂ ಸಿಂಗ್ನನ್ನು ಬೆಂಬಲಿಸಿ ‘ಕ್ಷಮಾದಾನ’ ನೀಡಿದ್ದಕ್ಕೆ ಪಂಜಾಬ್ನ ಮಾಜಿ ಮುಖ್ಯಮಂತ್ರಿ ಸುಖಬೀರ್ ಬಾದಲ್ ಅವರಿಗೆ ಸಿಖ್ಖರ ಪರಮೋಚ್ಚ ಧಾರ್ಮಿಕ ನ್ಯಾಯ ಮಂಡಳಿ ‘ಅಕಾಲ್ ತಖ್ತ್’, ಶೌಚಾಲಯ ಶುಚಿಗೊಳಿಸುವ ಶಿಕ್ಷೆ ವಿಧಿಸಿದೆ. ಮಂಗಳವಾರವೇ ಶಿಕ್ಷೆ ಅನುಭವಿಸುವಂತೆ ಸೂಚಿಸಿದೆ.
2015ರಲ್ಲಿ ಬಾದಲ್ ಮುಖ್ಯಮಂತ್ರಿಯಾಗಿದ್ದಾಗ ರಾಮ್ ರಹೀಂಗೆ ಕ್ಷಮಾದಾನ ಮಾಡಿದ್ದರು. ಹೀಗಾಗಿ ಆ.30ರಂದು ಬಾದಲ್ರನ್ನು ಧರ್ಮದ್ರೋಹಿ ಎಂದು ತಖ್ತ್ ಘೋಷಿಸಿತ್ತು. ಇದಾದ ನಂತರ ಬಾದಲ್ ಕ್ಷಮೆ ಯಾಚಿಸಿದ್ದರು. ಈ ಕ್ಷಮೆಯನ್ನು ಮನ್ನಿಸಿರುವ ತಖ್ತ್, ಬಾದಲ್ ಹಾಗೂ ಅವರ ಸಂಪುಟದ ಎಲ್ಲ ಸಚಿವರಿಗೆ ಶಿಕ್ಷೆ ವಿಧಿಸಿದೆ. ಬಾದಲ್ಗೆ ಕಾಲು ನೋವು ಇರುವ ಕಾರಣ ಕೊಂಚ ಸುಲಭ ಶಿಕ್ಷೆ ನೀಡಿದ್ದಾಗಿ ಅದು ಹೇಳಿದೆ.
ಇದರನ್ವಯ ಡಿ.3ರಂದು ಮಧ್ಯಾಹ್ನ 12 ಗಂಟೆಗೆ 1 ತಾಸು ಬಾದಲ್ ಮತ್ತು ಸಂಪುಟದ ಮಾಜಿ ಸಚಿವರು ಸೇವಕರ ಉಡುಪು ಧರಿಸಿ ಅಮೃತಸರದ ಸ್ವರ್ಣ ಮಂದಿರದ ಶೌಚಾಲಯ ಶುಚಿಗೊಳಿಬೇಕು. ಮಂದಿರಕ್ಕೆ ಆಗಮಿಸುವ ಭಕ್ತರ ಚಪ್ಪಲಿ ಪಾಲಿಶ್ ಮಾಡಬೇಕು. ಲಂಗರ್ (ಭೋಜನ ಶಾಲೆ)ಯಲ್ಲಿ ಊಟ ಬಡಿಸಿ ಪಾತ್ರೆ ತೊಳೆಯಬೇಕು ಮತ್ತು ಇನ್ನೂ 3 ಗುರುದ್ವಾರಗಳಲ್ಲಿ ಸೇವೆ ಮಾಡಬೇಕು ಎಂದು ಆದೇಶಿಸಿದೆ. ಜೊತೆಗೆ ಅಕಾಲಿ ದಳದ ಅಧ್ಯಕ್ಷ ಹುದ್ದೆಗೆ ಬಾದಲ್ ರಾಜೀನಾಮೆ ಅಂಗೀಕರಿಸಿ ಪಕ್ಷದ ಅಧ್ಯಕ್ಷ ಹುದ್ದೆಗೆ 6 ತಿಂಗಳಲ್ಲಿ ಚುನಾವಣೆ ನಡೆಸಬೇಕು ಎಂದು ಶಿರೋಮಣಿ ಅಕಾಲಿ ದಳಕ್ಕೆ ಸೂಚಿಸಿದೆ.
ಅಲ್ಲದೆ, ‘ಫಖ್ರ್-ಎ-ಕ್ವಾಮ್’ (ಧರ್ಮದ ಹೆಮ್ಮೆ) ಎಂಬ ಧಾರ್ಮಿಕ ಬಿರುದಾವಳಿಯನ್ನೂ ಹಿಂಪಡೆದಿದೆ.
ಅಕಾಲ್ ತಖ್ತ್ ಎಂದರೇನು?ಅಕಾಲ್ ತಖ್ತ್ ಎಂಬುದು ಸಿಖ್ಖರ ಉನ್ನತ ನ್ಯಾಯ ಸಂಸ್ಥೆಯಾಗಿದ್ದು, ಇದರಲ್ಲಿ ಜಾಠೇದಾರ್ ಎಂಬುವರು ಉನ್ನತ ಸ್ಥಾನದಲ್ಲಿ ಇರುತ್ತಾರೆ. ಧರ್ಮ ನಿಂದನೆ, ಕರ್ತವ್ಯ ಲೋಪದಂತಹ ಪ್ರಕರಣಗಳಲ್ಲಿ ಜಾಠೇದಾರ್ ತೀರ್ಪು ನೀಡುತ್ತಾರೆ.