ಜ್ಞಾನವಾಪಿ ಪೂಜೆಗೆ ತಡೆ ನೀಡಲು ಹೈಕೋರ್ಟ್‌ ನಕಾರ

| Published : Feb 03 2024, 01:45 AM IST / Updated: Feb 03 2024, 07:46 AM IST

ಸಾರಾಂಶ

ಮಸೀದಿ ಸಮಿತಿ ಅರ್ಜಿ ವಿಚಾರಣೆ ಫೆ.6ಕ್ಕೆ ಮುಂದೂಡಿಕೆ ಮಾಡಿ ನ್ಯಾಯಾಲಯ ಆದೇಶಿಸಿದೆ. ಹೀಗಾಗಿ ಮಂಗಳವಾರದವರೆಗೆ ಪೂಜೆ ಅಬಾಧಿತವಾಗಿ ನಡೆಯಲಿದೆ.

ಪಿಟಿಐ ಪ್ರಯಾಗ್‌ರಾಜ್‌

ಜ್ಞಾನವಾಪಿ ಮಸೀದಿಯ ತಳಮಹಡಿಯಲ್ಲಿರುವ ಶೃಂಗಾರ ಗೌರಿ ದೇಗುಲದಲ್ಲಿ ಪೂಜೆ ಮಾಡುವ ಪ್ರಕ್ರಿಯೆಗೆ ತಡೆ ನೀಡಲು ಅಲಹಾಬಾದ್‌ ಹೈಕೋರ್ಟ್‌ ನಿರಾಕರಿಸಿದೆ ಹಾಗೂ ಪ್ರಕರಣದ ವಿಚಾರಣೆಯನ್ನು ಫೆ.6ಕ್ಕೆ ಮುಂದೂಡಿದೆ.

ಇದರಿಂದಾಗಿ ಫೆ.6ರವರೆಗೆ ಜ್ಞಾನವಾಪಿ ಮಸೀದಿಯಲ್ಲಿನ ಹಿಂದೂ ದೇವರ ಪೂಜೆ ಅಬಾಧಿತವಾಗಿ ಮುಂದುವರಿಯಲಿದೆ.

ಈ ನಡುವೆ, ಪೂಜೆಗೆ ಇತ್ತೀಚಗೆ ಅನುಮತಿಸಿದ್ದ ವಾರಾಣಸಿ ಜಿಲ್ಲಾ ಕೋರ್ಟ್‌ ಆದೇಶ ಪ್ರಶ್ನಸಿ ಸುಪ್ರೀಂ ಕೋರ್ಟ್‌ ಮೊರೆ ಹೋಗುವುದಾಗಿ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ (ಎಐಎಂಪಿಎಲ್‌ಬಿ) ಶುಕ್ರವಾರ ಘೋಷಿಸಿದೆ.

ಹೈಕೋರ್ಟಲ್ಲಿ ವಾದ-ಪ್ರತಿವಾದ:

ಹೈಕೋರ್ಟಲ್ಲಿ, ಪೂಜೆ ಪ್ರಶ್ನಿಸಿ ಮಸೀದಿ ಸಮಿತಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ. ರೋಹಿತ್‌ ರಂಜನ್‌ ಅಗರ್‌ವಾಲ್‌ ಅವರ ಮುಂದೆ ವಾದ ಮಂಡಿಸಿದ ಮಸೀದಿ ಪರ ವಕೀಲ ನಖ್ವಿ ಅವರು ‘ಜ್ಞಾನವಾಪಿ ಮಸೀದಿಯ ಕುರಿತು ವಾರಾಣಸಿ ಜಿಲ್ಲಾ ನ್ಯಾಯಾಧೀಶರುನಿವೃತ್ತಿಯಾಗುವ ದಿನವೇ ತೀರ್ಪು ಪ್ರಕಟಿಸಿದ್ದಾರೆ. ಆದ್ದರಿಂದ ಆ ತೀರ್ಪನ್ನು ಅಸಿಂಧುಗೊಳಿಸಬೇಕು’ ಎಂದರು.

ಇದನ್ನು ವಿರೋಧಿಸಿದ ಹಿಂದೂ ಪರ ವಕೀಲ ವಿಷ್ಣು ಶಂಕರ್‌ ಜೈನ್‌ ಅವರು, ‘ಜ.17ರಂದು ಜ್ಞಾನವಾಪಿಯಲ್ಲಿ ಹಿಂದೂ ದೇವರಿದ್ದ ಸ್ಥಳಕ್ಕೆ ಜಿಲ್ಲಾಧಿಕಾರಿಗಳನ್ನು ಉಸ್ತುವಾರಿಯನ್ನಾಗಿ ಕೋರ್ಟ್‌ ನೇಮಿಸಿತ್ತು. ಆ ಆದೇಶದ ಅನುಸಾರ ಈಗ ಪೂಜೆಗೆ ಕೋರ್ಟ್‌ ಆದೇಶಿಸಿದೆ. ಜ.17ರ ಆದೇಶವನ್ನು ಮಸೀದಿ ಸಮಿತಿ ಪ್ರಶ್ನಿಸಿರಲಿಲ್ಲ. ಹೀಗಾಗಿ ಮಸೀದಿ ಸಮಿತಿಯ ಈಗಿನ ವಾದದಲ್ಲಿ ಹುರುಳಿಲ್ಲ’ ಎಂದರು.

ಈ ಹಿನ್ನೆಲೆಯಲ್ಲಿ ನ್ಯಾಯಾಧೀಶರು ತ್ವರಿತವಾಗಿ ಆದೇಶ ನೀಡಲು ನಿರಾಕರಿಸಿ ಮುಂದಿನ ವಿಚಾರಣೆಯನ್ನು ಫೆ.6ಕ್ಕೆ ಮುಂದೂಡಿದರು.