ಅತ್ಯಾಚಾರ ಆರೋಪಿ ಆಪ್‌ಶಾಸಕ ಸಿನಿಮೀಯ ಎಸ್ಕೇಪ್‌!

| Published : Sep 03 2025, 01:01 AM IST

ಅತ್ಯಾಚಾರ ಆರೋಪಿ ಆಪ್‌ಶಾಸಕ ಸಿನಿಮೀಯ ಎಸ್ಕೇಪ್‌!
Share this Article
  • FB
  • TW
  • Linkdin
  • Email

ಸಾರಾಂಶ

ಅತ್ಯಾಚಾರ ಆರೋಪದ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿದ್ದ ಪಂಜಾಬ್‌ನ ಆಮ್‌ ಆದ್ಮಿ ಪಕ್ಷದ ಶಾಸಕನೊಬ್ಬ, ಪೊಲೀಸರಿಂದ ಸಿನಿಮೀಯ ರೀತಿಯಲ್ಲಿ ತಪ್ಪಿಸಿಕೊಂಡು ಪರಾರಿಯಾದ ಘಟನೆ ಮಂಗಳವಾರ ನಡೆದಿದೆ.

- ಪಂಜಾಬ್‌ ಪೊಲೀಸ್‌ ಮೇಲೆ ಆಪ್ತರ ಗುಂಡು

- ದಾಳಿ ಲಾಭ ಪಡೆದು ಹರ್ಮಿತ್‌ ಸಿಂಗ್‌ ಪರಾರಿ

--

ಏನಿದು ಪ್ರಕರಣ?

- ಪಂಜಾಬ್‌ನ ಆಪ್‌ ಶಾಸಕ ಹರ್ಮಿತ್‌ ಸಿಂಗ್‌ ಮೇಲೆ ಅತ್ಯಾಚಾರ ಆರೋಪ

- 2021ರಲ್ಲಿ ಮಹಿಳೆಯೊಬ್ಬರು ಲೈಂಗಿಕ ದೌರ್ಜನ್ಯ ಆರೋಪ ಹೊರಿಸಿದ್ದರು

- ಹರ್ಯಾಣದ ಕರ್ನಾಲ್‌ ಜಿಲ್ಲೆಯ ಮನೆಯಲ್ಲಿ ನಿನ್ನೆ ಶಾಸಕನ ಬಂಧನ

- ಆವರನ್ನು ಠಾಣೆಗೆ ಒಯ್ಯುವಾಗ ಬೆಂಬಲಿಗರಿಂದ ಪೊಲೀಸರ ಮೇಲೆ ಗುಂಡು

- ಈ ವೇಳೆ ಪೊಲೀಸರ ವಶದಲ್ಲಿದ್ದ ಹರ್ಮಿತ್‌, ಬೇರೆ ಕಾರಿನಲ್ಲಿ ಪರಾರಿ

- ಬಳಿಕ ಆಪ್‌ ಸರ್ಕಾರದ ಮೇಲೆ ಫೇಸ್‌ಬುಕ್‌ ಲೈವಲ್ಲಿ ಶಾಸಕನ ವಾಗ್ದಾಳಿ

--

ಪಟಿಯಾಲ: ಅತ್ಯಾಚಾರ ಆರೋಪದ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿದ್ದ ಪಂಜಾಬ್‌ನ ಆಮ್‌ ಆದ್ಮಿ ಪಕ್ಷದ ಶಾಸಕನೊಬ್ಬ, ಪೊಲೀಸರಿಂದ ಸಿನಿಮೀಯ ರೀತಿಯಲ್ಲಿ ತಪ್ಪಿಸಿಕೊಂಡು ಪರಾರಿಯಾದ ಘಟನೆ ಮಂಗಳವಾರ ನಡೆದಿದೆ. ಈ ಕೃತ್ಯದ ವೇಳೆ ಶಾಸಕನ ಆಪ್ತರು ಪೊಲೀಸರ ಮೇಲೇ ಗುಂಡು, ಕಲ್ಲಿನ ದಾಳಿ ನಡೆಸುವ ಮೂಲಕ ತಮ್ಮ ನಾಯಕನನ್ನು ಬಿಡಿಸಿಕೊಂಡು ಹೋಗಿದ್ದಾರೆ.

ಆಗಿದ್ದೇನು?:

ಪಂಜಾಬ್‌ನ ಸನೂರ್‌ ಕ್ಷೇತ್ರದ ಆಪ್‌ ಶಾಸಕ ಹರ್ಮಿತ್‌ ಸಿಂಗ್‌ ತನ್ನನ್ನು ತಾನು ವಿಚ್ಛೇದಿತ ಎಂದು ಹೇಳಿ, 2021ರಲ್ಲಿ ನನ್ನನ್ನು ಮದುವೆಯಾಗಿದ್ದಾರೆ. ಬಳಿಕ ನನ್ನ ಮೇಲೆ ನಿರಂತರ ಲೈಂಗಿಕ ಶೋಷಣೆ ಎಸಗಿದ್ದಾರೆ ಎಂದು ಮಹಿಳೆಯೊಬ್ಬರು ದೂರಿದ್ದರು.

ಈ ಹಿನ್ನೆಲೆಯಲ್ಲಿ ಹರ್ಯಾಣದ ಕರ್ನಲ್‌ ಜಿಲ್ಲೆಯ ಮನೆಯೊಂದರ ಮೇಲೆ ದಾಳಿ ನಡೆಸಿದ ಪಂಜಾಬ್‌ ಪೊಲೀಸರು, ಹರ್ಮಿತ್‌ಸಿಂಗ್‌ನನ್ನು ಬಂಧಿಸಿ ಕರೆದೊಯ್ಯುತ್ತಿದ್ದರು. ಈ ವೇಳೆ ಗುಂಪೊಂದು ಏಕಾಏಕಿ ಪೊಲೀಸರ ಮೇಲೆ ಕಲ್ಲು ಮತ್ತು ಗುಂಡಿನ ದಾಳಿ ನಡೆಸಿ ಅವರನ್ನು ವಿಚಲಿತಗೊಳಿಸಿದೆ.

ಈ ವೇಳೆ ಪೊಲೀಸರ ವಶದಲ್ಲಿದ್ದ ಹರ್ಮಿತ್‌ ಅವರ ಬಂಧನದಿಂದ ತಪ್ಪಿಸಿಕೊಂಡು, ತಮ್ಮ ಆಪ್ತರು ತಂದಿದ್ದ ಕಾರು ಏರಿ ಸ್ಥಳದಿಂದ ಪರಾರಿಯಾಗಿದ್ದಾರೆ. ಈ ವೇಳೆ ಕಾರು ಅಡ್ಡಗಟ್ಟಲು ಮುಂದಾದ ಪೊಲೀಸರಿಗೆ ಶಾಸಕನಿದ್ದ ಕಾರು ಡಿಕ್ಕಿ ಹೊಡೆದ ಕಾರಣ ಅವರು ಗಾಯಗೊಂಡಿದ್ದಾರೆ.

ಈ ನಡುವೆ ತಮ್ಮ ವಿರುದ್ಧ ರೇಪ್‌ ಆರೋಪದ ಕೇಸು ದಾಖಲಾದ ಬೆನ್ನಲ್ಲೇ ಫೇಸ್‌ಬುಕ್‌ನಲ್ಲಿ ಲೈವ್‌ ಬಂದಿದ್ದ ಶಾಸಕ ಹರ್ಮೀತ್‌, ತಮ್ಮದೇ ಆಡಳಿತದ ಪಂಜಾಬ್‌ ಸರ್ಕಾರವನ್ನು ಕಟುವಾಗಿ ಟೀಕಿಸಿದ್ದಾರೆ. ಅಲ್ಲದೆ ದೆಹಲಿಯಲ್ಲಿ ಇರುವ ಆಪ್‌ ನಾಯಕತ್ವವು ಅಕ್ರಮವಾಗಿ ಪಂಜಾಬ್‌ ಸರ್ಕಾರವನ್ನು ನಡೆಸುತ್ತಿದೆ ಎಂದು ಆರೋಪಿಸಿದ್ದಾರೆ.