ಸಾರಾಂಶ
ಅಮರನಾಥ ಯಾತ್ರಿಕರ ಮೇಲೆ ದಾಳಿ ಸಂಭವ ಹಿನ್ನೆಲೆಯಲ್ಲಿ ಉನ್ನತ ಸಭೆ ನಡೆಸಿದ ಗೃಹ ಸಚಿವ ಉಗ್ರರನ್ನು ಸದೆಬಡಿಯಲು ಸಂಪೂರ್ಣ ಸ್ವಾತಂತ್ರ್ಯ ನೀಡಿದ್ದಾರೆ.
ನವದೆಹಲಿ: ಕಾಶ್ಮೀರ ಭಾಗದಂತೆ ಜಮ್ಮುವಿನಲ್ಲೂ ಶೂನ್ಯ ಭಯೋತ್ಪಾದನೆ ಕ್ರಮ ಜಾರಿಗೊಳಿಸಲು ಕೇಂದ್ರ ಗೃಹ ಸಚಿವ ಅಮಿತ್ ಶಾ ಭದ್ರತಾ ಪಡೆ ಅಧಿಕಾರಿಗಳಿಗೆ ಭಾನುವಾರ ಖಡಕ್ ಆದೇಶ ನೀಡಿದ್ದಾರೆ. ‘ಹೊಸ ವಿಧಾನಗಳ ಮೂಲಕ ನರೇಂದ್ರ ಮೋದಿ ಸರ್ಕಾರ ಜಮ್ಮು-ಕಾಶ್ಮೀರದಲ್ಲಿ ಭಯೋತ್ಪಾದಕರನ್ನು ಬಗ್ಗುಬಡಿದು ಮಾದರಿ ಆಗಲಿದೆ’ ಎಂದಿದ್ದಾರೆ.
ಇತ್ತೀಚೆಗೆ ಜಮ್ಮು-ಕಾಶ್ಮೀರದ ಜಮ್ಮು ಭಾಗದಲ್ಲಿ ನಡೆದ ಸರಣಿ ಭಯೋತ್ಪಾದಕ ಘಟನೆ ಹಿನ್ನೆಲೆಯಲ್ಲಿ ಶಾ ಭಾನುವಾರ ಉನ್ನತ ಅಧಿಕಾರಿಗಳ ಸಭೆ ನಡೆಸಿದರು. ಇದೇ ವೇಳೆ, ಜೂ.29ರಿಂದ ಅಮರನಾಥ ಯಾತ್ರೆ ಆರಂಭವಾಗಲಿರುವ ಹಿನ್ನೆಲೆಯಲ್ಲೂ ಸ್ಥಿತಿಯ ಅವಲೋಕನ ಮಾಡಿದರು.
ಈ ವೇಳೆ ಮಾತನಾಡಿದ ಅವರು, ‘ಶೂನ್ಯ ಭಯೋತ್ಪಾದನಾ ಯೋಜನೆ’ಯ ಮೂಲಕ ಕಾಶ್ಮೀರ ಕಣಿವೆಯಲ್ಲಿ ಸಾಧಿಸಿದ ಯಶಸ್ಸನ್ನು ಜಮ್ಮು ವಿಭಾಗದಲ್ಲಿ ಪುನರಾವರ್ತಿಸಬೇಕು ಎಂದು ಭದ್ರತಾ ಏಜೆನ್ಸಿಗಳಿಗೆ ನಿರ್ದೇಶಿಸಿದರು. ಆಗ ಅಧಿಕಾರಿಗಳು ಪ್ರಧಾನಿಯವರ ನಿರ್ದೇಶನದಂತೆ ಭಯೋತ್ಪಾದಕರ ವಿರುದ್ಧ ಕಾರ್ಯಾಚರಣೆ ನಡೆಸಲಾಗುವುದು ಎಂದರು.