ಸಾರಾಂಶ
ಮಥುರಾ: ಉತ್ತರಪ್ರದೇಶದ ಮಥುರಾದಲ್ಲಿರುವ ಕೃಷ್ಣ ಜನ್ಮಭೂಮಿ ಸಂಕೀರ್ಣದಲ್ಲಿದ್ದ ಕೇಶವದೇವ ದೇಗುಲವನ್ನು ಮಸೀದಿ ನಿರ್ಮಾಣಕ್ಕಾಗಿ ಒಡೆಸಿದ್ದು ಮೊಘಲ್ ದೊರೆ ಔರಂಗಜೇಬ್ ಎಂದು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ಎಎಸ್ಐ) ತಿಳಿಸಿದೆ.
ಇದರಿಂದಾಗಿ ಕೃಷ್ಣಜನ್ಮಭೂಮಿ ಸಂಕೀರ್ಣದ ಬಳಿ ಇರುವ ಶಾಹಿ ಈದ್ಗಾ ಮಸೀದಿ ವಿರುದ್ಧ ಹೋರಾಟ ನಡೆಸುತ್ತಿರುವವರಿಗೆ ಭೀಮಬಲ ಬಂದಂತಾಗಿದೆ.
ಕಾಶಿ ವಿಶ್ವನಾಥ ದೇಗುಲದ ಪಕ್ಕದಲ್ಲಿರುವ ಜ್ಞಾನವಾಪಿ ಮಸೀದಿಯಲ್ಲಿ ದೇವಸ್ಥಾನ ಇತ್ತು ಎಂಬ ಸಂಗತಿ ಕೆಲ ದಿನಗಳ ಹಿಂದಷ್ಟೇ ದೃಢಪಟ್ಟಿತ್ತು. ಕಳೆದ ವಾರದಿಂದ ಜ್ಞಾನವಾಪಿ ಮಸೀದಿಯಲ್ಲಿನ ಶೃಂಗಾರ ಗೌರಿ ವಿಗ್ರಹಗಳಿಗೆ ಪೂಜೆಯೂ ಆರಂಭವಾಗಿತ್ತು.
ಅದರ ಬೆನ್ನಲ್ಲೇ ಮಥುರಾ ವಿಷಯದಲ್ಲಿ ಪ್ರಮುಖ ಬೆಳವಣಿಗೆ ನಡೆದಿದೆ.ಕೇಶವದೇವ ದೇಗುಲ ಧ್ವಂಸಗೊಂಡಿದ್ದರ ಕುರಿತು ಉತ್ತರಪ್ರದೇಶದ ಮೇನ್ಪುರಿಯ ಅಜಯ್ ಪ್ರತಾಪ್ ಸಿಂಗ್ ಎಂಬುವರು ಎಎಸ್ಐಗೆ ಆರ್ಟಿಐ ಅಡಿ ಅರ್ಜಿ ಸಲ್ಲಿಸಿದ್ದರು.
ಅದಕ್ಕೆ ಉತ್ತರ ನೀಡಿರುವ ಎಎಸ್ಐ, ವಿವಾದಿತ ಪ್ರದೇಶದಲ್ಲಿರುವ ಕೇಶವದೇವ ದೇಗುಲವನ್ನು ಒಡೆಸಿದ್ದು ಔರಂಗಜೇಬ್ ಎಂದು 1920ನೇ ಇಸ್ವಿಯ ಗೆಜೆಟ್ ಆಧರಿಸಿ ಉತ್ತರ ನೀಡಿದೆ. ಅಲ್ಲದೆ ಗೆಜೆಟ್ನ ಪ್ರತಿಯನ್ನೂ ಅರ್ಜಿದಾರರಿಗೆ ನೀಡಿದೆ.
ಇದನ್ನೇ ಇಟ್ಟುಕೊಂಡು ಅಲಹಾಬಾದ್ ಹೈಕೋರ್ಟ್ ಮೊರೆ ಹೋಗಲು ಕೇಶವದೇವ ದೇಗುಲದ ವಕೀಲರು ಮುಂದಾಗಿದ್ಧಾರೆ. ಇದೊಂದು ಪ್ರಮುಖ ಸಾಕ್ಷ್ಯವಾಗಿದ್ದು, ಇದನ್ನು ಅಲಹಾಬಾದ್ ಹೈಕೋರ್ಟ್ ಹಾಗೂ ಸುಪ್ರೀಂಕೋರ್ಟ್ ಮುಂದೆ ಪ್ರಸ್ತುತಪಡಿಸುವುದಾಗಿ ಶ್ರೀಕೃಷ್ಣ ಜನ್ಮಭೂಮಿ ಮುಕ್ತಿ ನ್ಯಾಸ್ನ ವಕೀಲ ಮಹೇಂದ್ರ ಪ್ರತಾಪ್ ಸಿಂಗ್ ತಿಳಿಸಿದ್ದಾರೆ.