ಕಳೆದ ಡಿಸೆಂಬರ್‌ನಲ್ಲಿ ಏಕಾಏಕಿ ಸಾವಿರಾರು ವಿಮಾನಗಳು ರದ್ದಾಗಿ ವಿಮಾನಯಾನ ಕ್ಷೇತ್ರದಲ್ಲಿ ತಲ್ಲಣ ಸೃಷ್ಟಿಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂಡಿಗೋ ಸಂಸ್ಥೆಗೆ ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯ (ಡಿಜಿಸಿಎ) 22 ಕೋಟಿ ರು. ದಂಡ ವಿಧಿಸಿದೆ. ಜತೆಗೆ, ವಿಮಾನಗಳ ಕಾರ್ಯಾಚರಣೆಯನ್ನು ಸಮರ್ಪಕವಾಗಿ ನಿಭಾಯಿಸದ ಸಿಇಒಗೂ ಎಚ್ಚರಿಕೆ ನೀಡಿದ್ದು, ಮುಂಬರುವ ದಿನಗಳಲ್ಲಿ ಇಂಥ ವ್ಯತ್ಯಯ ತಡೆಯುವ ಭರವಸೆಯ ಭಾಗವಾಗಿ 50 ಕೋಟಿ ರು. ಬ್ಯಾಂಕ್‌ನಲ್ಲಿ ಠೇವಣಿ ಇಡುವಂತೆ ನಿರ್ದೇಶಿಸಿದೆ.

50 ಕೋಟಿ ರು. ಬ್ಯಾಂಕ್‌ ಠೇವಣಿ ಇಡಲು ಸೂಚನೆ

ಸಂಚಾರದಲ್ಲಿ ಭಾರೀ ವ್ಯತ್ಯಯ ವಿರುದ್ಧ ಡಿಜಿಸಿಎ ಕ್ರಮ

ನವದೆಹಲಿ: ಕಳೆದ ಡಿಸೆಂಬರ್‌ನಲ್ಲಿ ಏಕಾಏಕಿ ಸಾವಿರಾರು ವಿಮಾನಗಳು ರದ್ದಾಗಿ ವಿಮಾನಯಾನ ಕ್ಷೇತ್ರದಲ್ಲಿ ತಲ್ಲಣ ಸೃಷ್ಟಿಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂಡಿಗೋ ಸಂಸ್ಥೆಗೆ ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯ (ಡಿಜಿಸಿಎ) 22 ಕೋಟಿ ರು. ದಂಡ ವಿಧಿಸಿದೆ. ಜತೆಗೆ, ವಿಮಾನಗಳ ಕಾರ್ಯಾಚರಣೆಯನ್ನು ಸಮರ್ಪಕವಾಗಿ ನಿಭಾಯಿಸದ ಸಿಇಒಗೂ ಎಚ್ಚರಿಕೆ ನೀಡಿದ್ದು, ಮುಂಬರುವ ದಿನಗಳಲ್ಲಿ ಇಂಥ ವ್ಯತ್ಯಯ ತಡೆಯುವ ಭರವಸೆಯ ಭಾಗವಾಗಿ 50 ಕೋಟಿ ರು. ಬ್ಯಾಂಕ್‌ನಲ್ಲಿ ಠೇವಣಿ ಇಡುವಂತೆ ನಿರ್ದೇಶಿಸಿದೆ.

ಪ್ರಕರಣ ಕುರಿತು ತನಿಖೆ ನಡೆಸಿದ್ದ ಡಿಜಿಸಿಎ, ವಿಮಾನಯಾನ ಕ್ಷೇತ್ರದಲ್ಲಿ ಅತಿಹೆಚ್ಚು ಪಾಲು ಹೊಂದಿರುವ ಸಂಸ್ಥೆಯು ವಿಮಾನ ಸಂಚಾರ ನಿರ್ವಹಣೆಯಲ್ಲಿ ಸೋತಿತ್ತು. ಅದರ ಸಾಫ್ಟ್‌ವೇರ್‌ನಲ್ಲೂ ಸಮಸ್ಯೆಯಿದ್ದು, ದಿಢೀರ್‌ ಬದಲಾವಣೆ ಸಂಭಾಳಿಸುವುದು ಕಷ್ಟಕರವಾಗಿತ್ತು. ಸಮಸ್ಯೆ ಉದ್ಭವಿಸಿದಾಗ ಅದನ್ನು ನಿಭಾಯಿಸಿ ಪರಿಹರಿಸುವುದರಲ್ಲಿ ಹಿರಿಯ ಅಧಿಕಾರಿಗಳು ಸೋತಿದ್ದರು ಎಂದು ಹೇಳಿದೆ. ಅಲ್ಲದೆ ವಿಮಾನ ಕಾರ್ಯಾಚರಣೆ ಮತ್ತು ಬಿಕ್ಕಟ್ಟು ನಿರ್ವಹಣೆ ಮೇಲ್ವಿಚಾರಣೆಯ ಅಸಮರ್ಪಕತೆಗಾಗಿ ಸಿಇಒ ಪೀಟರ್‌ ಎಲ್ಬರ್ಸ್‌, ಸಿಒಒ ಮತ್ತು ಒಸಿಸಿಗೆ ಎಚ್ಚರಿಕೆ ನೀಡಲಾಗಿದೆ.

ಆಗಿದ್ದೇನು?:

ಸಂಭವನೀಯ ವೈಮಾನಿಕ ಅಪಘಾತಗಳನ್ನು ತಪ್ಪಿಸುವ ಉದ್ದೇಶದಿಂದ, ಪೈಲಟ್‌ಗಳಿಗೆ ಹೆಚ್ಚಿನ ವಿಶ್ರಾಂತಿ ನೀಡುವ ಡಿಜಿಸಿಎ ನಿಯಮಗಳನ್ನು ಡಿಸೆಂಬರ್‌ನಲ್ಲಿ ಜಾರಿಗೆ ತರಲಾಗಿತ್ತು. ಇದರಿಂದ, 2 ವರ್ಷಗಳಿಂದ ಹೊಸ ಸಿಬ್ಬಂದಿಯನ್ನು ನೇಮಿಸಿಕೊಂಡಿರದ ಇಂಡಿಗೋ ಸಂಸ್ಥೆಯಲ್ಲಿ ಪೈಲಟ್‌ಗಳ ಕೊರತೆಯುಂಟಾಗಿ, ಸಾವಿರಾರು ವಿಮಾನಗಳು ತಡವಾಗಿದ್ದವು ಅಥವಾ ರದ್ದಾಗಿದ್ದವು. ಇದರಿಂದ ಲಕ್ಷಾಂತರ ಪ್ರಯಾಣಿಕರು ಪರದಾಡುವಂತಾಗಿ, ಪರಿಸ್ಥಿತಿ ನಿಭಾಯಿಸಲು ಆ ನಿಯಮವೇ ರದ್ದು ಮಾಡಬೇಕಾಗಿ ಬಂದಿತ್ತು.