ಸಾರಾಂಶ
ಭಾರತದ ಗಗನಯಾನಿ ಶುಭಾಂಶು ಶುಕ್ಲಾ ಸೇರಿದಂತೆ ನಾಲ್ವರನ್ನು ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರ (ಐಎಸ್ಎಸ್)ಕ್ಕೆ ಕರೆದೊಯ್ಯಲಿದ್ದ ಆಕ್ಸಿಯೋಂ-4 ಮಿಷನ್ ಮತ್ತೆ ಮುಂದೂಡಿಕೆಯಾಗಿದೆ.
ನವದೆಹಲಿ: ಭಾರತದ ಗಗನಯಾನಿ ಶುಭಾಂಶು ಶುಕ್ಲಾ ಸೇರಿದಂತೆ ನಾಲ್ವರನ್ನು ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರ (ಐಎಸ್ಎಸ್)ಕ್ಕೆ ಕರೆದೊಯ್ಯಲಿದ್ದ ಆಕ್ಸಿಯೋಂ-4 ಮಿಷನ್ ಮತ್ತೆ ಮುಂದೂಡಿಕೆಯಾಗಿದೆ. ನಭಕ್ಕೆ ಜಿಗಿಯಲಿದ್ದ ಸ್ಪೇಸ್ಎಕ್ಸ್ನ ಫಾಲ್ಕನ್-9 ರಾಕೆಟ್ನಲ್ಲಿ ಸೋರಿಕೆ ಕಂಡುಬಂದಿದ್ದರಿಂದ ಈ ನಿರ್ಧಾರಕ್ಕೆ ಬರಲಾಗಿದೆ.
ಇದರಿಂದ, 41 ವರ್ಷಗಳ ಬಳಿಕ ಭಾರತೀಯನನ್ನು ಅಂತರಿಕ್ಷದಲ್ಲಿ ಹಾಗೂ ಮೊದಲ ಬಾರಿ ಐಎಸ್ಎಸ್ನಲ್ಲಿ ಕಾಣುವ ಕನಸಿಗೆ ಅಲ್ಪವಿರಾಮ ಬಿದ್ದಿದೆ.
ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಸ್ಪೇಸ್ಎಕ್ಸ್, ‘ರಾಕೆಟ್ನ ಬೂಸ್ಟರ್ನಲ್ಲಿ ದ್ರವರೂಪದ ಆಮ್ಲಜನಕ ಸೋರಿಕೆಯಾಗುತ್ತಿರುವುದು ಕಂಡುಬಂದಿರುವ ಕಾರಣ, ಅದರ ರಿಪೇರಿಗಾಗಿ ಉಡಾವಣೆಯನ್ನು ತಡೆಹಿಡಿಯಲಾಗಿದೆ. ಈ ಕಾರ್ಯ ಪೂರ್ಣವಾಗುತ್ತಿದ್ದಂತೆ ಉಡ್ಡಯನದ ಹೊಸ ದಿನಾಂಕವನ್ನು ಘೋಷಿಸುತ್ತೇವೆ’ ಎಂದು ತಿಳಿಸಿದೆ.
‘ಉಡಾವಣೆಗೆ ಒತ್ತಡ ಸೃಷ್ಟಿಸುವ ಹಂತ (ಪ್ರೊಪಲ್ಷನ್)ದಲ್ಲಿ 7 ಸೆಕೆಂಡ್ ನಡೆಸಲಾದ ಹಾಟ್ ಟೆಸ್ಟ್ ವೇಳೆ ದೋಷ ಕಂಡುಬಂದಿತ್ತು. ಈ ಬಗ್ಗೆ ಇಸ್ರೋ ಆಕ್ಸಿಯೋಂ ಮತ್ತು ಸ್ಪೇಸ್ಎಕ್ಸ್ ಜತೆ ಮಾತುಕತೆ ನಡೆಸಿದ್ದು, ಸಮಸ್ಯೆಯನ್ನು ಸರಿಪಡಿಸಿ ಅಗತ್ಯವಿರುವ ಪರೀಕ್ಷೆಗಳನ್ನು ಮಾಡುವ ನಿರ್ಧಾರಕ್ಕೆ ಬರಲಾಯಿತು’ ಎಂದು ಇಸ್ರೋ ಅಧ್ಯಕ್ಷ ವ. ನಾರಾಯಣನ್ ಮಾಹಿತಿ ನೀಡಿದ್ದಾರೆ.
ಈ ಮೊದಲು, ಮಂಗಳವಾರ(ಜೂ.10ರಂದು) ಉಡಾವಣೆಯನ್ನು ನಿಗದಿಪಡಿಸಲಾಗಿತ್ತಾದರೂ, ಸೂಕ್ತ ವಾತಾವರಣದ ಕೊರತೆಯ ಕಾರಣ ಅದನ್ನು ಬುಧವಾರಕ್ಕೆ ಮುಂದೂಡಲಾಗಿತ್ತು. ಇದಕ್ಕೂ ಮೊದಲು ಹಲವು ಬಾರಿ ಈ ಯೋಜನೆ ಮುಂದೂಡಲ್ಪಟ್ಟಿದೆ.